ಮಣ್ಣಲ್ಲಿ ಮಣ್ಣಾದ ನಟ ಪುನೀತ್ ರಾಜ್ಕುಮಾರ್
ಬೆಂಗಳೂರು, ಅಕ್ಟೋಬರ್ 31; ಅಭಿಮಾನಿಗಳ ಪಾಲಿನ ಪವರ್ ಸ್ಟಾರ್, ವರನಟ ಡಾ. ರಾಜ್ಕುಮಾರ್ ಕಿರಿಯ ಪುತ್ರ ಪುನೀತ್ ರಾಜ್ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಸಮಾಧಿ ಪಕ್ಕದಲ್ಲಿಯೇ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯಿತು. ಕುಟುಂಬಸ್ಥರು, ಚಿತ್ರರಂಗದ ಅನೇಕ ಗಣ್ಯರು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದರು. ಪುನೀತ್ರಾಜ್ಕುಮಾರ್ಗೆ ಗಂಡು ಮಕ್ಕಳು ಇಲ್ಲದ ಕಾರಣ ರಾಘವೇಂದ್ರ ರಾಜ್ಕುಮಾರ್ ಪುತ್ರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಪುನೀತ್ ವಿಧಿವಶ; ರಾಜ್ಯೋತ್ಸವ ಪ್ರಶಸ್ತಿ ನೀಡಲು ತಾಂತ್ರಿಕ ತೊಡಕು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿವಿಧ ಸಚಿವರು, ಶಾಸಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಪುನೀತ್ರಾಜ್ಕುಮಾರ್ ಅಂತಿಮ ದರ್ಶನ ಪಡೆದರು.
ನೆನಪು; ಚಿಕ್ಕಮಗಳೂರಿನ ಜೊತೆ ಪುನೀತ್ ರಾಜ್ಕುಮಾರ್ ನಂಟು
ಕುಟುಂಬದವರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕಂಠೀರವ ಸ್ಟುಡಿಯೋ ಹೊರಭಾಗದ ರಸ್ತೆಗಳಲ್ಲಿ ಸಾವಿರಾರು ಅಭಿಮಾನಿಗಳು ಕಣ್ಣೀರಿಡುತ್ತಾ ನೆಚ್ಚಿನ ನಟನಿಗೆ ಕಂಬನಿಯ ವಿದಾಯ ಹೇಳಿದರು. ವೀರ ಕನ್ನಡಿಗ ಪುನೀತ್ ರಾಜ್ಕುಮಾರ್ ಮಣ್ಣಲ್ಲಿ ಮಣ್ಣಾದರು.
ಹೀರೋ ಆಗಿ ಅಪ್ಪು ಮೊದಲ ರಾಜ್ಯ ಪ್ರಶಸ್ತಿ ಪಡೆದಿದ್ದೇ ಶಿವಮೊಗ್ಗದಲ್ಲಿ; ಜಿಲ್ಲೆಯೊಂದಿಗಿತ್ತು ಉತ್ತಮ ನಂಟು!
ಪಾರ್ಥಿವ ಶರೀರದ ಮೆರವಣಿಗೆ
ಭಾನುವಾರ ಮುಂಜಾನೆ ಕಂಠೀರವ ಸ್ಟೇಡಿಯಂನಿಂದ ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ವಾಹನದಲ್ಲಿ, ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕಂಠೀರವ ಸ್ಟುಡಿಯೋಗೆ ತರಲಾಯಿತು. ಅಭಿಯಾನಿಗಳು ಪಾರ್ಥಿವ ಶರೀರವಿದ್ದ ವಾಹನವನ್ನು ಹಿಂಬಾಲಿಸಿ ನೆಚ್ಚಿನ ನಟನನ್ನು ಅಂತಿಮವಾಗಿ ಕಣ್ತುಂಬಿಕೊಂಡರು.
ಸಕಲ ಸರ್ಕಾರಿ ಗೌರವ ಸಲ್ಲಿಕೆ
ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಕರ್ನಾಟಕ ಸರ್ಕಾರದ ಪರವಾಗಿ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು, ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಕೆ ಮಾಡಿದರು.
ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ
ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಸಮಾಧಿಯಿಂದ 125 ಅಡಿ ಅಂತರದಲ್ಲಿ ಹಾಗೂ ಪಾರ್ವತಮ್ಮ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ನಡೆಸಲಾಯಿತು. ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜಕುಮಾರ್ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿಸಿದರು.
ಲಕ್ಷಾಂತರ ಅಭಿಮಾನಿಗಳಿಂದ ಅಂತಿಮ ದರ್ಶನ
ಶುಕ್ರವಾರ ನಟ ಪುನೀತ್ ರಾಜ್ಕುಮಾರ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಂಜೆ ಸದಾಶಿವನಗರ ನಿವಾಸದಿಂದ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರದಿಂದ ಭಾನುವಾರ ಮುಂಜಾನೆ ತನಕ ಸುಮಾರು 10 ಲಕ್ಷ ಜನರು ಅಂತಿಮ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.
3ನೇ ದಿನದ ಕಾರ್ಯಗಳು
ಶನಿವಾರ ರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಪುನೀತ್ ನಿಧನರಾಗಿ ಭಾನುವಾರಕ್ಕೆ 3ನೇ ದಿನ. ಹೀಗಾಗಿ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ಆದಷ್ಟು ಬೇಗ ಮುಗಿಸಬೇಕಿದೆ. ಬಳಿಕ ಕುಟುಂಬಸ್ಥರು ಮನೆಗೆ ಹೋಗಿ ಮರಳಿ ಆ ಸ್ಥಳಕ್ಕೆ ಬಂದು ಹಾಲು ತುಪ್ಪ ಬಿಡಬೇಕಿದೆ. ಹೀಗಾಗಿ ಅಂತ್ಯಕ್ರಿಯೆ ನಡೆಯಲಿರುವ ಸ್ಥಳದಲ್ಲಿ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಹೇಳಿದ್ದರು.
Recommended Video
ಅಭಿಮಾನಿಗಳು ಜಮಾವಣೆಗೊಂಡಿದ್ದರು
ಶನಿವಾರ ಬೆಳಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಸಂಜೆಯೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಪುನೀತ್ ರಾಜ್ಕುಮಾರ್ ಪುತ್ರಿ ವಿದೇಶದಿಂದ ಬರುವುದು ತಡವಾಯಿತು. ಅಲ್ಲದೇ ಕಂಠೀರವ ಸ್ಟುಡಿಯೋದತ್ತ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಈ ಹಿನ್ನಲೆಯಲ್ಲಿ ಕುಟುಂಬಸ್ಥರ ಜೊತೆ ಚರ್ಚಿಸಿ ಭಾನುವಾರ ಬೆಳಗ್ಗೆ 10 ಗಂಟೆಯೊಳಗೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಎಲ್ಲಾ ಕಾರ್ಯಗಳನ್ನು ಸಂಪ್ರದಾಯದ ಪ್ರಕಾರವಾಗಿಯೇ ಪೂರ್ಣಗೊಳಿಸಲಾಗಿದೆ.