ಸಾವಿನ ಮುನ್ಸೂಚನೆ? "ಪುನೀತ್ ಸಾವಿಗೂ ಇದಕ್ಕೂ ಸಂಬಂಧವಿಲ್ಲ, ಅಪಾರ್ಥ ಬೇಡ"
ರಾಯಚೂರು, ನ 1: ನಟ ಪುನೀತ್ ರಾಜಕುಮಾರ್ ನಿಧನಹೊಂದಿ ನಾಲ್ಕು ದಿನಗಳಾಗುತ್ತಾ ಬಂದರೂ, ಅವರ ಸಾವಿನ ಹಿಂದೆ ತರಹೇವಾರಿ ಸುದ್ದಿ/ಚರ್ಚೆಗಳು ನಡೆಯುತ್ತಲೇ ಇದೆ. ಪುನೀತ್ ಸಾವನ್ನು ಅರಗಿಸಿಕೊಳ್ಳಲು ಇನ್ನೂ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಇಂತಹ ವದಂತಿಗಳು ಹುಟ್ಟಿಕೊಳ್ಳುತ್ತಲೇ ಇದೆ.
ಫಿಟ್ ಎಂಡ್ ಫೈನ್ ಆಗಿದ್ದ ಪುನೀತ್ ಅವರಿಗೆ ಅತಿಯಾದ ವ್ಯಾಯಾಮ/ವರ್ಕೌಟ್ ನಿಂದಾಗಿ, ಹೃದಯಾಘಾತವಾಯಿತೇ ಎನ್ನುವ ಚರ್ಚೆಗಳು ವೈದ್ಯಲೋಕದಲ್ಲೂ ನಡೆಯುತ್ತಿದೆ. ಈ ಬಗ್ಗೆ, ಹಲವು ಖ್ಯಾತ ವೈದ್ಯರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಪವರ್ಸ್ಟಾರ್ ನಿಧನದ ನಂತರ ಬೆಂಗಳೂರಿನ ಮದ್ಯದಂಗಡಿಗಳು ಬಂದ್
ಇವೆಲ್ಲದರ ನಡುವೆ, ವರ್ಷದ ಹಿಂದಿನ ಪುನೀತ್ ರಾಜಕುಮಾರ್ ಅವರ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ. ವೈರಲ್ ಆಗಿರುವ ವಿಡಿಯೋದ ಬಗ್ಗೆ ಮಂತ್ರಾಲಯದ ಶ್ರೀಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
ಪುನೀತ್ ಸಾವಿಗೆ ಈ ಕಾರಣವೂ ಇರಬಹುದು: ಡಾ.ಸಿ.ಎನ್.ಮಂಜುನಾಥ್
ಯುವಕರು ಯಾಕೆ ಸಾವನ್ನಪ್ಪುತ್ತಿದ್ದಾರೆ ಎನ್ನುವ ವಿಚಾರ, ರಾಷ್ಟ್ರೀಯ ವಾಹಿನಿಗಳಲ್ಲೂ ಆಹಾರದ ವಿಷಯವಾಗಿದೆ. "ಸಮಸ್ಯೆ ಇರಲಿ ಬಿಡಲಿ, ಕೆಲವೊಂದು ಟೆಸ್ಟ್ ಗಳನ್ನು ತಪ್ಪದೇ ವರ್ಷವರ್ಷ ಮಾಡಿಸಬೇಕು"ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ. ಏನದು ವೈರಲ್ ಆಗಿರುವ ವಿಡಿಯೋ?
ರಾಘವೇಂದ್ರಸ್ವಾಮಿಗಳ ಆರಾಧನೆ/ಗುರು ವೈಭೋವತ್ಸವ ಕಾರ್ಯಕ್ರಮ
ಕಳೆದ ವರ್ಷ ಅಂದರೆ 2020ರಲ್ಲಿ ಪ್ರತೀ ವರ್ಷದಂತೆ ರಾಘವೇಂದ್ರಸ್ವಾಮಿಗಳ ಆರಾಧನೆ/ಗುರು ವೈಭೋತ್ಸವ ಕಾರ್ಯಕ್ರಮ ನಡೆದಿತ್ತು. ರಾಯರ ಪರಮ ಭಕ್ತರಾಗಿರುವ ಡಾ.ರಾಜಕುಮಾರ್ ಕುಟುಂಬದ ಪರವಾಗಿ, ಪುನೀತ್ ರಾಜಕುಮಾರ್ ಭಾಗವಹಿಸಿದ್ದರು. ಶ್ರೀಗಳಿಂದ ಅಭಿನಂದಿಸಿಕೊಂಡ ನಂತರ, ಭಕ್ತರಿಂದ ದೇವರ ನಾಮ ಹಾಡಲು ಒತ್ತಾಯ ಬಂತು. ಆ ವೇಳೆ, ಒಂದು ಮುನ್ಸೂಚನೆಯನ್ನು ರಾಯರು ತೋರಿಸಿದರು ಎನ್ನುವ ವಿಚಾರ ಈಗ ವೈರಲ್ ಆಗಿದೆ.
ನನ್ನ ತಂದೆ ಮತ್ತು ನಮ್ಮ ಇಡೀ ಕುಟುಂಬ ರಾಘವೇಂದ್ರಸ್ವಾಮಿಗಳ ಭಕ್ತರು
"ನನ್ನ ತಂದೆ ಮತ್ತು ನಮ್ಮ ಇಡೀ ಕುಟುಂಬ ರಾಘವೇಂದ್ರಸ್ವಾಮಿಗಳ ಭಕ್ತರು. ನಮಗೆ ಏನೇ ಕಷ್ಟ ಬಂದರೂ, ಒಳ್ಳೆಯ ಕೆಲಸವನ್ನು ಆರಂಭಿಸಿದಾಗಲೂ ನಾವು ಮೊದಲು ನೆನೆಯುವುದು ರಾಯರನ್ನು. ನಾನು ಭಕ್ತಿಗೀತೆಯನ್ನು ಹಾಡುವುದು ಕಮ್ಮಿ. ಮುಂದಿನ ಬಾರಿಯ ಆರಾಧನೆಗೆ ಬಂದಾಗ, ಮೂರ್ನಾಲ್ಕು ಹಾಡುಗಳನ್ನು ಅಭ್ಯಾಸ ಮಾಡಿಕೊಂಡು ಬರುತ್ತೇನೆ"ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ. ಆ ವೇಳೆ ರಾಯರ ಪ್ರಭಾವಳಿ ಮತ್ತು ವೀಣೆ ಅಲ್ಲಾಡಿದೆ.
ರಾಘವೇಂದ್ರಸ್ವಾಮಿಗಳ ಫೋಟೋದ ಜೊತೆ ವೀಣೆ ಮತ್ತು ಇತರ ಪ್ರಭಾವಳಿ
ರಾಘವೇಂದ್ರಸ್ವಾಮಿಗಳ ಫೋಟೋದ ಜೊತೆ ವೀಣೆ ಮತ್ತು ಇತರ ಪ್ರಭಾವಳಿಯನ್ನು ಒಂದು ಪೀಠದಲ್ಲಿ ಇಡಲಾಗಿತ್ತು. ಮುಂದಿನ ವರ್ಷ ಬರುತ್ತೇನೆ ಎಂದಾಗ ರಾಯರ ಫೋಟೋ ಮತ್ತು ವೀಣೆ ಎಡಕ್ಕೆ ಜಾರಿತ್ತು. ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥರು, " ಮಂತ್ರಾಲಯದ ವಿಡಿಯೋ ವೈರಲ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದೊಂದು ಆಕಸ್ಮಿಕ ಘಟನೆ. ಇದಕ್ಕೂ ಆ ಘಟನೆಗೂ ಅಪಾರ್ಥ ಕಲ್ಪಿಸುವುದು ಬೇಡ" ಎಂದು ಶ್ರೀಗಳು ಮನವಿ ಮಾಡಿದ್ದಾರೆ.
ವರ್ಷದ ಹಿಂದೆಯೇ ಮಂತ್ರಾಲಯದಲ್ಲಿ ಪುನೀತ್ ಸಾವಿನ ಮುನ್ಸೂಚನೆ
"ರಾಜಕುಮಾರ್ ಮತ್ತವರ ಕುಟುಂಬದವರು ರಾಯರ ಅಂತರಂಗದ ಭಕ್ತರು. ರಾಯರ ಅಪ್ಪಣೆಯಂತೆ ಶುಭ ಕೆಲಸವನ್ನು ಮಾಡುತ್ತಾರೆ. ಪೀಠದ ಮೇಲಿದ್ದ ವೀಣೆ ಜಾರಿರುವುದಕ್ಕೆ ಅಪಾರ್ಥ ಕಲ್ಪಿಸದೇ ವದಂತಿಯನ್ನು ಹಬ್ಬಿಸಬೇಡಿ. ಇಂತಹ ಸಮಯದಲ್ಲಿ ಈ ರೀತಿಯ ಸುದ್ದಿ ಹಬ್ಬಿಸುವುದು ಸರಿಯಲ್ಲ"ಎಂದು ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥರು ಹೇಳಿದ್ದಾರೆ. ವೀಣೆ ಅಲ್ಲಾಡಿರುವುದು ಸಾವಿನ ಮುನ್ಸೂಚನೆ ಎಂದು ಸಾಮಾಜಿಕ ತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.