ಪುನೀತ್ ಸಾವಿನ ಸುತ್ತ ಅಭಿಮಾನಿಗಳ '4 ಅನುಮಾನ'ದ ಹುತ್ತ: ವೈದ್ಯರ ಸ್ಪಷ್ಟನೆ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವಿನ ಸುತ್ತ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಸಾವಿನ ವಿಚಾರ ತನಿಖೆಯಾಗಬೇಕೆಂದು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.
ಶುಕ್ರವಾರ (ನ. 5) ಪುನೀತ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದಾರೆ. ಆ ವೇಳೆ, ಸಚಿವ ಆರ್.ಅಶೋಕ್ ಅವರ ಜೊತೆಗಿದ್ದರು. ಇದೇ ವೇಳೆ, ಅಭಿಮಾನಿಗಳು ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.
2018ರ ನಂತರ ನಡೆದ ಉಪ ಚುನಾವಣೆ: 'ಸಾವಿನ ಅನುಕಂಪಕ್ಕೆ' ಬಂದ ಮ್ಯಾನ್ಡೇಟ್ ಏನು?
"ನಮ್ಮ ಅಪ್ಪು ಅವರದ್ದು ಎಲ್ಲರೂ ಪ್ರೀತಿಸುವ ವ್ಯಕ್ತಿತ್ವ. ಅವರ ನುಡಿನಮನ ಕಾರ್ಯಕ್ರಮ ನವೆಂಬರ್ ಹದಿನಾರರಂದು ನಡೆಯಲಿದೆ, ಅವರ ಕುಟುಂಬವೂ ಬಹಳ ದುಃಖದಲ್ಲಿದೆ. ಇದು ಮುಗಿದ ನಂತರ, ಅವರ ಕುಟುಂಬದವರ ಜೊತೆಗೆ ಮತ್ತು ಎಲ್ಲಾ ಹಿರಿಯರ ಸಲಹೆಗಳನ್ನು ತೆಗೆದುಕೊಂಡು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ" ಎಂದು ಸಿಎಂ ಹೇಳಿದ್ದಾರೆ.
ಪುನೀತ್ ಅವರು ಮೊದಲು ಚಿಕಿತ್ಸೆಗೆ ಹೋಗಿದ್ದು ಅವರ ಕುಟುಂಬದ ವೈದ್ಯರಾದ ಡಾ. ರಮಣ ರಾವ್ ಅವರ ರಮಣ ಕ್ಲಿನಿಕಿಗೆ. ಅಪ್ಪು ವಿಧಿವಶರಾದ ಅಕ್ಟೋಬರ್ 29ರಂದು ಏನು ನಡೆಯಿತು ಎನ್ನುವುದರ ಬಗ್ಗೆ ಡಾ.ರಮಣ ರಾವ್ ಅವರು ಮಾಧ್ಯಮದರಿಗೆ ಉತ್ತರಿಸುತ್ತಿದ್ದಾರೆ. ಅಭಿಮಾನಿಗಳ ನಾಲ್ಕು ಪ್ರಶ್ನೆಗಳು:
"ಮಾಸ್ಟರ್ ಲೋಹಿತ್ ಅಲ್ಪಾಯುಷಿ, ಆಂಜನೇಯನ ಇನ್ನೊಂದು ಹೆಸರೇ ಪುನೀತ್"
ಡಾ.ರಾಜ್ ಕುಟುಂಬದ ಡಾಕ್ಟರ್ ರಮಣ ಕ್ಲಿನಿಕಿನ ಡಾ.ರಮಣ ರಾವ್
ಡಾ.ರಮಣ್ ರಾವ್ ಅವರ ಕ್ಲಿನಿಕಿಗೆ ಬಂದಾಗಲೇ ಅಪ್ಪುಗೆ ಏನಾದರೂ ಆಗಿರಬೇಕು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ವೈದ್ಯರು ನೀಡಿದ ಉತ್ತರ ಹೀಗಿತ್ತು. "ಪುನೀತ್ ಅವರು 11-11.15ರ ಸುಮಾರಿಗೆ ಅಶ್ವಿನಿ ಜೊತೆ ನಡೆದುಕೊಂಡೇ ನಮ್ಮಲಿಗೆ ಬಂದರು. ಆ ವೇಳೆ ಅಪ್ಪುಗೆ ನೋವಾಗಲಿ, ಆಯಾಸವಾಗಲಿ ಇರಲಿಲ್ಲ, ಪಲ್ಸ್ ಕೂಡಾ ಸರಿಯಾಗಿಯೇ ಇತ್ತು.
ಆದರೆ ಅವರು ಬೆವರುತ್ತಿದ್ದರು, ಆಲಸ್ಯ ಇತ್ತು. ಕೂಡಲೇ ನಾವು ಇಸಿಜಿ ಮಾಡಿಸಿದೆವು. ಆಗಲೂ ಅವರ ಹೃದಯದ ಬಡಿತ ಸರಿಯಾಗಿಯೇ ಇತ್ತು. ಇಸಿಜಿಯಲ್ಲಿ ಸಮಸ್ಯೆ ಕಾಣಿಸಿದ ತಕ್ಷಣ ಅಪ್ಪುನನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ಅವರ ಪತ್ನಿಗೆ ಹೇಳಿದೆ"ಎಂದು ಡಾ.ರಾವ್ ಹೇಳಿದ್ದಾರೆ.
ಕಡಿಮೆ ಕಾಲಾವಧಿಯಲ್ಲಿ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು, ಅದನ್ನು ಮಾಡಿದ್ದೇವೆ
ಕ್ಲಿನಿಕ್ ನಲ್ಲಿ ಏನು ಚಿಕಿತ್ಸೆ ನೀಡಲಾಯಿತು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಡಾ.ರಮಣ್ ರಾವ್, "ನಮ್ಮದೊಂದು ಸಣ್ಣ ಕ್ಲಿನಿಕ್ ಅಷ್ಟೇ. ಇದರಲ್ಲಿ ಪುನೀತ್ ಅಲ್ಲದೇ ಬೇರೆ ಯಾರಿಗೇ ಆದರೂ, chewable tablet ಸೇರಿದಂತೆ ಏನು ಟ್ರೀಟ್ಮೆಂಟ್ ಕೊಡಲು ಸಾಧ್ಯವೋ ಅದನ್ನು ಕೊಟ್ಟಿದ್ದೇನೆ.
ಅಪ್ಪುಗೆ ಉಸಿರಾಟ ಸಮಸ್ಯೆ ಇತ್ತು, ಹಾಗಾಗಿ ಅವರನ್ನು ಕಡಿಮೆ ಕಾಲಾವಧಿಯಲ್ಲಿ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು, ಅದನ್ನು ನಾವು ಮಾಡಿದ್ದೇವೆ" ಎಂದು ವೈದ್ಯ ಡಾ.ರಾವ್ ಹೇಳಿದ್ದಾರೆ.
ಅಂಬುಲೆನ್ಸ್ ನಲ್ಲಿ ಕಳುಹಿಸುವುದನ್ನು ಬಿಟ್ಟು, ಕಾರಿನಲ್ಲಿ ಯಾಕೆ ಕಳುಹಿಸಿದ್ದು
ಸಿಪಿಆರ್ ಕೊಟ್ಟು, ಅಂಬುಲೆನ್ಸ್ ನಲ್ಲಿ ಕಳುಹಿಸುವುದನ್ನು ಬಿಟ್ಟು, ಕಾರಿನಲ್ಲಿ ಯಾಕೆ ಕಳುಹಿಸಿದ್ದು, ಜೊತೆಗೆ ವೈದ್ಯರು ಯಾರೂ ಜೊತೆಗೆ ಹೋಗಿಲ್ಲ ಎನ್ನುವ ಫ್ಯಾನ್ಸ್ ಗಳ ಪ್ರಶ್ನೆಗೆ ಉತ್ತರಿಸಿದ ಡಾ.ರಮಣ ರಾವ್, "ಸಿಪಿಆರ್ ಕೊಡುವುದು ಉಸಿರಾಟದ ಸಮಸ್ಯೆ ಇದ್ದು, ಹಾರ್ಟ್ ಬೀಟ್ ಸರಿಯಿದ್ದಲ್ಲಿ ಸಿಪಿಆರ್ ಮಾಡಲು ಸಾಧ್ಯವಿಲ್ಲ.
ಅಪ್ಪು ನಮ್ಮ ಕ್ಲಿನಿಕಿಗೆ ಬಂದಾಗ, ಬೇರೆ ಹೃದಯ ಸಮಸ್ಯೆ ಇರುವ ರೋಗಿಗಳು ನನ್ನ ಕ್ಲಿನಿಕ್ ನಲ್ಲಿದ್ದರು, ಅದೆಲ್ಲಾ ಎಮರ್ಜೆನ್ಸಿಯಾಗಿತ್ತು. ಅಂಬುಲೆನ್ಸ್ ಬರಲು ಕನಿಷ್ಟವೆಂದರೂ ಹದಿನೈದು ನಿಮಿಷ ಬೇಕು, ಮತ್ತದೇ ದಾರಿಯಲ್ಲಿ ವಾಪಸ್ ಹೋಗಬೇಕು. ಹಾಗಾಗಿ, ನಾವು ಅಂಬುಲೆನ್ಸ್ ಆಯ್ಕೆ ಮಾಡಿಕೊಳ್ಳಲಿಲ್ಲ"ಎಂದು ವೈದ್ಯರು ಹೇಳಿದ್ದಾರೆ.
ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದು ಯಾಕೆ ಎನ್ನುವ ಅಭಿಮಾನಿಗಳ ಅನುಮಾನ
ಹತ್ತಿರದಲ್ಲೆ ರಾಮಯ್ಯ ಸೇರಿದಂತೆ, ಹಲವು ಆಸ್ಪತ್ರೆಗಳಿವೆ, ಅದನ್ನು ಬಿಟ್ಟು ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದು ಯಾಕೆ ಎನ್ನುವ ಅಭಿಮಾನಿಗಳ ಅನುಮಾನಕ್ಕೆ ಉತ್ತರ ಕೊಟ್ಟ ವೈದ್ಯರು, "ಅಲ್ಲಿ ಡಾ. ರಂಗ ನಾಯಕ್ ಇದ್ದಾರೆ, ಡಾ.ರಾಜಕುಮಾರ್ ಅವರ ಅವಧಿಯಿಂದಲೂ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಅವರ ಕುಟುಂಬಕ್ಕೆ ಅವರೇ ನೋಡಿಕೊಳ್ಳುವುದು.
ನನ್ನ ಮಗನಿಗೆ ಈ ರೀತಿ ಆಗಿದ್ದರೆ, ಹೇಗೆ ನಾನು ನಡೆದುಕೊಳ್ಳಬೇಕಾಗಿತ್ತೋ, ಅದೇ ರೀತಿಯಲ್ಲಿ ಅಪ್ಪು ವಿಚಾರದಲ್ಲೂ ಹಾಗೇ ಮಾಡಿದ್ದೇನೆ"ಎಂದು ಡಾ.ರಮಣ ರಾವ್ ಉತ್ತರಿಸಿದ್ದಾರೆ.