ನೈತಿಕತೆ ಹೆಸರಿನಲ್ಲಿ ಮತೀಯ ಗೂಂಡಾಗಿರಿ; ಪಿಯುಸಿಎಲ್ ಖಂಡನೆ
"ನೈತಿಕತೆ" ಹೆಸರಿನಲ್ಲಿ ಮತೀಯ ಗೂಂಡಾಗಿರಿ ಅನೈತಿಕ ಪೊಲೀಸ್ಗಿರಿ ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆಯನ್ನು ಪಿಯುಸಿಎಲ್ ಕರ್ನಾಟಕ ತೀವ್ರವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಸಮಾಜದಲ್ಲಿ ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ ಪ್ರತಿಕ್ರಿಯೆಗಳು ಉಂಟಾಗುತ್ತದೆ ಎಂದು ಗಂಭೀರವಾದ ಸಮಸ್ಯೆಯನ್ನು ಬಹಳ ಸರಳವಾಗಿ ವ್ಯಾಖ್ಯಾನಿಸಿರುವುದು ವಿಷಾದದ ಸಂಗತಿ. ಅವರು ರಾಜ್ಯದ ಜವಾಬ್ದಾರಿಯುತ ಸ್ಥಾನದ ಅರಿವಿಲ್ಲದೇ ಮಾತನಾಡಿರುವುದು ಅಚ್ಚರಿ ಮತ್ತು ಆತಂಕ ಮೂಡಿಸುತ್ತದೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮಾತನಾಡಿದ್ದಾರೋ ಅಥವಾ ಮತೀಯ ನೈತಿಕ ಗೂಂಡಾಗಿರಿ ವ್ಯವಸ್ಥೆ ನಾಯಕ ಸ್ಥಾನದಿಂದ ಮಾತನಾಡಿದ್ದಾರೋ ಎಂಬ ಅನುಮಾನ ಮೂಡಿಸುತ್ತದೆ ಎಂದು ಪಿಯುಸಿಎಲ್ ಆತಂಕ ವ್ಯಕ್ತಪಡಿಸಿದೆ.
ಸಿಎಂ ಬೊಮ್ಮಾಯಿಯವರು ಪ್ರಸ್ತಾಪಿಸಿರುವ ನೈತಿಕತೆ ಕಲ್ಪನೆಯಲ್ಲೆ ಗೊಂದಲವಿದೆ, ಅದು ಸಂವಿಧಾನ ನೈತಿಕತೆಯೋ ಅಥವಾ ಸಾಮಾಜಿಕ/ ಮತೀಯ ಪ್ರಚೋದನೆ ಪರಿವಾರ ಅಥವಾ ಹಿಂದುತ್ವದ ನೈತಿಕತೆಯೊ ಎಂದು ಅವರೇ ಸ್ಪಷ್ಟಪಡಿಸಬೇಕಿದೆ. ತಾವೇ ಹೇಳುವಂತೆ ಇದು ಒಂದು ಸೂಕ್ಷ್ಮ ವಿಷಯ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಹೇಳಿಕೆ ಅಪಾಯಕಾರಿ ಬೆಳವಣಿಗೆಗೆ ದಾರಿ ಮಾಡಿಕೊಡುವುದಿಲ್ಲವೇ? ಎಂದು ಪಿಯುಸಿಎಲ್ ಸಂಸ್ಥೆ ಪ್ರಶ್ನೆ ಮಾಡಿದೆ.
ಈ ರೀತಿ ಗೊಂದಲಕಾರಿ ಹೇಳಿಕೆಗಳ ನೆಲೆಯಿಂದ ಮಾತನಾಡಿದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಪೊಲೀಸ್ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದಿಲ್ಲವೆ? ಅವರ ವೃತ್ತಿ ನೈತಿಕತೆಯನ್ನು ದುರ್ಬಲಗೊಳಿಸುವುದಿಲ್ಲವೆ? ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪರಿವಾರ ನಡೆಸುತ್ತಿರುವ ಅನೈತಿಕ ಪೊಲೀಸ್ಗಿರಿ ತಂಡಕ್ಕೆ ವಹಿಸುವರೆ ಕಾಯ್ದು ನೋಡಬೇಕಿದೆ.
ಅನೈತಿಕ ಪೊಲೀಸ್ಗಿರಿ ವ್ಯವಸ್ಥೆ ಸಂವಿಧಾನಿಕ ಹಕ್ಕುಗಳನ್ನೇ ನಿರಾಕರಿಸುವ ಮತ್ತು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತು ಪ್ರಸ್ತುತ ಸಂದರ್ಭದಲ್ಲಿ ಒಂದು ಕೋಮಿನ ಜನ ಇನ್ನೊಂದು ಕೋಮಿನವರ ಜೊತೆ ಮಾತನಾಡುವಂತಿಲ್ಲ, ಪ್ರೀತಿ ಮಾಡುವಂತಿಲ್ಲ, ವಿವಾಹವಾಗುವಂತಿಲ್ಲ, ಓಡಾಡುವ, ತಮ್ಮ ಮನೆಗಳಲ್ಲಿ ಪ್ರಾರ್ಥನೆ ಮಾಡುವ, ತಮ್ಮ ಸ್ವಂತ ಜಾಗದಲ್ಲಿ ತಮಗೆ ಬೇಕಾದವರ ಹೆಸರಿಡುವ, ತಮಗೆ ಬೇಕಾದ ಆಹಾರ ಸೇವಿಸುವಂತ ವಿಷಯಗಳ ಮೇಲೆ ನಿರ್ಬಂಧ ಹೇರುವ ಒಂದು ಹೆಜ್ಜೆ ಮುಂದೆ ಹೋಗಿ ಯಾವ ಧರ್ಮದಲ್ಲಿ ಇರಬೇಕು ಇರಬಾರದು ಎಂಬ ಫರ್ಮಾನು ಹೊರಡಿಸುವ ಹೆದರಿಸಿ, ಬೆದರಿಸಿ ಹಲ್ಲೆ ಮಾಡುವ ಹಂತ ತಲುಪಿರುವ ಸಂದರ್ಭದಲ್ಲಿ ಬೊಮ್ಮಾಯಿಯವರ ಹೇಳಿಕೆ ಸಂವಿಧಾನ ಬಾಹಿರ ಮತ್ತು ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡುವ ಸಾಧ್ಯತೆಗಳೆ ಹೆಚ್ಚು.
ಕೇವಲ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಮತೀಯ ಗೂಂಡಾಗಿರಿ ಮಂಗಳೂರಿನಲ್ಲಿ ಬೊಮ್ಮಾಯಿಯವರ ಹೇಳಿಕೆಯಿಂದ ಇತರ ಜಿಲ್ಲೆಗಳಿಗೂ ವ್ಯಾಪಿಸುವ ಆತಂಕ ಸೃಷ್ಟಿ ಮಾಡಿದೆ. ಇಂತಹ ಹೇಳಿಕೆಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭಯ ಮತ್ತು ಆತಂಕ ಸೃಷ್ಟಿ ಮಾಡುತ್ತದೆ ಎಂಬುದನ್ನು ಮರೆಯಲಾಗದೆಂದು ಪಿಯುಸಿಎಲ್ ಹೇಳಿದೆ.
2021ರಿಂದ ಇಲ್ಲಿಯವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಜಿಲ್ಲೆಗಳಲ್ಲಿ 51 ಕೋಮುಗಲಭೆ ಮತ್ತು 14 ನೈತಿಕ ಪೊಲೀಸ್ಗಿರಿ ಪ್ರಕರಣಗಳು ನಡೆದಿರುವುದು ಪಿಯುಸಿಎಲ್ ಕರ್ನಾಟಕ ಗಮನಕ್ಕೆ ಬಂದಿರುವುದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ಸಂವಿಧಾನದತ್ತ ನಾಗರಿಕ ಹಕ್ಕು ಮತ್ತು ಬದುಕುವ ಹಕ್ಕನ್ನು ನಿರಾಕರಿಸುವ ಹಂತ ತಲುಪಿದೆ. ಯಾವ ವ್ಯವಸ್ಥೆ ಸಂವಿಧಾನಾತ್ಮಕವಾಗಿ ಜನರಿಗೆ ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಬೇಕೋ ಅದರ ನಾಯಕ ಈ ರೀತಿ ಮಾತನಾಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ತಂದೊಡ್ಡುವುದಲ್ಲದೆ ಮತೀಯವಾದ ವ್ಯಾಪಕವಾಗಿ ಹರಡಲು ಕಾರಣವಾಗುವುದು ಮತ್ತು ಕೋಮು ಸಾಮರಸ್ಯ ಸೌಹಾರ್ಧತೆ ಕದಡುವುದಲ್ಲದೇ ಅರಾಜಕತೆ ಸೃಷ್ಟಿ ಮಾಡುತ್ತದೆ ಎಂಬುದನ್ನು ಇಲ್ಲಿ ನೆನಪಿನಲ್ಲಿಡಬೇಕು ಮತ್ತು ಎಚ್ಚರಿಕೆ ಹೆಜ್ಜೆಯನ್ನಿಡಬೇಕಾಗುತ್ತದೆ. ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆ ಮತ್ತು ಬಹುತ್ವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಸರಕಾರದ ಕರ್ತವ್ಯ ಎಂದು ಪಿಯುಸಿಎಲ್ ಸರ್ಕಾರದ ಗಮನ ಸೆಳೆದಿದೆ.
ಪಿಯುಸಿಎಲ್ ಕರ್ನಾಟಕದ ಒತ್ತಾಯಗಳು
1. ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿ, ಮಾನ್ಯ ಮುಖ್ಯಮಂತ್ರಿಗಳಾದ ಬೊಮ್ಮಾಯಿರವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಆಗಿರುವ ಗೊಂದಲ ನಿವಾರಿಸಬೇಕು. ಆ ಮೂಲಕ ಮುಖ್ಯಮಂತ್ರಿ ಸ್ಥಾನದ ಘನತೆ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವ ಮೌಲ್ಯ ಉಳಿಸುವ ಕೆಲಸಕ್ಕೆ ಮುಂದಾಗಬೇಕು.
2. ಕೋಮು ಸೌಹಾರ್ದ ಮತ್ತು ಶಾಂತಿ ಕಾಪಾಡುವುದು ಸರಕಾರದ ಪ್ರಮುಖ ಕರ್ತವ್ಯ ಇಂತಹ ಭಾವನಾತ್ಮಕ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಕೆಲಸಕ್ಕೆ ತುರ್ತಾಗಿ ಮುಂದಾಗಬೇಕು.
3. ಕೇಂದ್ರ ಸರಕಾರದ ಗೃಹ ಸಚಿವಾಲಯ 23 ಜೂನ್ 2008ರಲ್ಲಿ ಹೊರಡಿಸಿರುವ ಮತೀಯ ಸಾಮರಸ್ಯ ಕಾಪಾಡುವ ನಿಯಮಗಳ ಮಾರ್ಗಸೂಚಿ / ಗೈಡ್ಲೈನ್ ಪ್ರಕಾರ ಕೂಡಲೇ ಕೋಮು ಸೌಹಾರ್ದ ಕಾಪಾಡುವ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶ ಹೊರಡಿಸುವುದು.
4. ಅಲ್ಲದೇ ರಿಟ್ ಸಿವಿಲ್ ಪೆಟೀಷನ್ ಸಂ. 754/ 2016 ಪ್ರಕಾರ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಆದೇಶವನ್ನು ಕೂಡಲೇ ಯಥಾವತ್ತಾಗಿ ಜಾರಿಗೆ ತರುವಂತಹ ಕ್ರಮಗಳನ್ನು ಕೈಗೊಳ್ಳುವುದು.
5. ಸಾಮಾನ್ಯ ಜನರ ಬದುಕಿನ ಜೊತೆ ಆಟವಾಡುತ್ತಿರುವ ಮತೀಯವಾದಿ ಗೂಂಡಾಗಳ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮಕೈಗೊಂಡು, ಬಂಧಿಸಿ, ಮೊಕದ್ದಮೆ ದಾಖಲಿಸಿ ನ್ಯಾಯಾಲಯದ ಚೌಕಟ್ಟಿಗೆ ತರುವಂತಾಗಬೇಕು ಎಂದು ಪಿಯುಸಿಎಲ್ನ ರಾಜ್ಯಾಧ್ಯಕ್ಷರಾದ ವೈ.ಜೆ. ರಾಜೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಸುಜಾಯತ್ ಉಲ್ಲಾ ಪತ್ರಿಕಾ ಹೇಳಿಕೆ ನೀಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Recommended Video