ಬೇಕಾಬಿಟ್ಟಿ ಆನ್ಲೈನ್ ಕ್ಲಾಸ್: ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ!
ಬೆಂಗಳೂರು, ನ. 06: ಆನ್ಲೈನ್ ಶಿಕ್ಷಣದ ಕುರಿತು ರಾಜ್ಯ ಶಿಕ್ಷಣ ಇಲಾಖೆ ಈಗಾಗಲೇ ವಿಸ್ತಾರವಾದ ಮಾರ್ಗಸೂಚಿಸ ಪ್ರಕಟಿಸಿದೆ. ತಜ್ಞರ ವರದಿಯಂತೆ ಆನ್ಲೈನ್ ಶಿಕ್ಷಣ ಕೊಡಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆದೇಶ ಮಾಡಿದ್ದಾರೆ. ಆದರೂ ಕೂಡ ಆನ್ಲೈನ್ ಶಿಕ್ಷಣದ ಹಾವಳಿ ಹೆಚ್ಚಾಗುತ್ತಿದೆ. ಅದರಿಂದಾಗಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ ಎಂದ ದೂರುಗಳು ಮತ್ತೆ ಕೇಳಿ ಬಂದಿವೆ.
ಈ ಹಿನ್ನೆಲೆಯಲ್ಲಿ ಆನ್ಲೈನ್ ಶಿಕ್ಷಣದ ಕುರಿತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸುರೇಶ್ ಕುಮಾರ್ ಅವರು ಮಹತ್ವದ ಸಭೆ ನಡೆಸಿದ್ದಾರೆ. ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಶಿಕ್ಷಣಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಅನ್ವಯ ತರಗತಿಯನ್ನು ನಡೆಸಬೇಕು ಎಂದು ಸೂಚಿಸಿದ್ದಾರೆ. ಜೊತೆಗೆ ಆನ್ಲೈನ್ ಶಿಕ್ಷಣದ ಕುರಿತು ಮತ್ತೊಂದು ಮಹತ್ವದ ಆದೇಶ ಮಾಡಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ!
ದೂರವಾಣಿ ಮೂಲಕ ದೂರು
ಆನ್ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣವಾಣಿ ಅಥವಾ ಸಾರ್ವಜನಿಕ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ದಾಖಲಿಸಬಹುದೆಂದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಶಾಲೆ ಆರಂಭಿಸುವ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಹೇಳಿಕೆ!
ಶುಕ್ರವಾರ (ನ.06) ಬೆಳಗ್ಗೆ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಆನ್ಲೈನ್ ಶಿಕ್ಷಣ ಕುರಿತಂತೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡಲು ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಮಾತನಾದ್ದಾರೆ. ಸಾರ್ವಜನಿಕರು ಆನ್ಲೈನ್ ತರಗತಿ ಕುರಿತ ದೂರುಗಳನ್ನು ಶಿಕ್ಷಣವಾಣಿ-ಸಹಾಯವಾಣಿ: 18004257302 ಅಥವಾ ಸಹಾಯವಾಣಿ ವಾಟ್ಸ್ಆ್ಯಪ್ ಸಂಖ್ಯೆ: 9483045130ಗೆ ಸಲ್ಲಿಸಿ ಇಲಾಖೆಯ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ್ದಾರೆ.
ನೋಡಲ್ ಅಧಿಕಾರಿ ನೇಮಕ
ಇಂತಹ ದೂರುಗಳನ್ನು ನಿರ್ವಹಿಸಲು ಕೂಡಲೇ ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಬೆಂಗಳೂರು, ಕಲ್ಬುರ್ಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ_ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗಿವೆ. ಹೀಗಾಗಿ ಅಧಿಕಾರಿಗಳು ಆನ್-ಲೈನ್ ಶಿಕ್ಷಣದಲ್ಲಿನ ಸಮಸ್ಯೆಗಳನ್ನು ಮತ್ತು ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಶನಿವಾರ ನಗರಗಳ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಬೇಕೆಂದು ಇಲಾಖೆಯ ಆಯುಕ್ತರಿಗೆ ಸಚಿವರು ಸೂಚಿಸಿದ್ದಾರೆ.
ಬೇಕಾಬಿಟ್ಟಿ ಆನ್ಲೈನ್ ತರಗತಿ ನಡೆಸುವಂತಿಲ್ಲ
ಯಾವುದೇ ಶಾಲೆಗಳಿರಲಿ ಆನ್-ಲೈನ್ ಶಿಕ್ಷಣವನ್ನು ತಜ್ಞರ ಸಮಿತಿ ಶಿಫಾರಸಿನನ್ವಯ ಇಲಾಖೆ ಹೊರಡಿಸಿರುವ ಸುತ್ತೋಲೆಗಳನ್ವಯ ವೈಜ್ಞಾನಿಕವಾಗಿಯೇ ನಿರ್ವಹಿಸುವ ಕುರಿತು ಅಗತ್ಯ ಅನುಪಾಲನಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಬಿಇಒಗಳು ಆನ್-ಲೈನ್ ತರಗತಿಗಳ ಪರಾಮರ್ಶೆ ಮಾಡುವದರೊಂದಿಗೆ ಕೇಂದ್ರ ಕಚೇರಿಯಲ್ಲಿ ಈ ಕುರಿತ ಮಾಹಿತಿ ಯಾವುದೇ ಸಂದರ್ಭದಲ್ಲಿಯೂ ದೊರೆಯುವಂತಾಗಬೇಕೆಂದು ಸುರೇಶ್ ಕುಮಾರ್ ಸೂಚಿಸಿದರು. ಈ ಬಗ್ಗೆ ಕೂಡಲೇ ಇಲಾಖಾಧಿಕಾರಿಗಳಿಗೆ ಸಊಚನೆ ನೀಡಬೇಕೆಂದೂ ಸಹ ನಿರ್ದೇಶನ ನೀಡಿದರು.
ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಶಿಕ್ಷಣ ಇಲಾಖೆ!
ಯಾವುದೇ ಶಾಲೆಗಳಿರಲಿ ತಮಗೆ ತೋಚಿದ ಅವಧಿಯಲ್ಲಿ ತಮಗೆ ತಿಳಿದಷ್ಟು ಸಮಯ ಆನ್-ಲೈನ್ ಪಾಠ ಮಾಡಲು ಅವಕಾಶ ನೀಡಲಾಗದು. ತಜ್ಞರ ಸಮಿತಿ ನಿಗದಿಪಡಿಸಿರುವ ಸಮಯದಷ್ಟೇ ಅವಧಿಯಲ್ಲಿ ನಿರ್ವಹಿಸಬೇಕು. ಹಾಗೆಯೇ ಆನ್ಲೈನ್ ಶಾಲಾವಧಿಯನ್ನು ನಿಗದಿಪಡಿಸಿ ಸುತ್ತೋಲೆ ಹೊರಡಿಸಿ ಈ ಕುರಿತು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಬೇಕೆಂದು ಸಚಿವರು ಆಯುಕ್ತರಿಗೆ ನಿರ್ದೇಶನ ನೀಡಿದರು.
Recommended Video
ಆನ್-ಲೈನ್ ಶಾಲಾವಧಿ ನಿಗದಿಗೆ ಸೂಚನೆ
ಆನ್-ಲೈನ್ ಬೋಧನೆಯನ್ನು ಹಗಲು-ರಾತ್ರಿಯನ್ನದೇ ಯಾವುದೇ ಸಮಯದಲ್ಲೂ ಮಾಡಲಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಆನ್-ಲೈನ್ ಬೋಧನೆಗೆ ತರಗತಿಗಳ ಅವಧಿಯನ್ನು ನಿಗದಿಪಡಿಸಿದಂತೆ ಆನ್ಲೈನ್ ಬೋಧನಾ ಶಾಲಾವಧಿಯನ್ನು ನಿಗದಿಪಡಿಸಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದರು.
ಈ ಕುರಿತಂತೆ ಜಿಲ್ಲೆ, ತಾಲೂಕು, ಬಿಆರ್ಸಿ, ಸಿಆರ್ಪಿ ಮಟ್ಟದಲ್ಲಿ ಶಾಲಾವಧಿಯನ್ನು ಗಮನಿಸಲು ಅಗತ್ಯ ಕ್ರಮ ವಹಿಸಬೇಕು. ಹಾಗೆಯೇ ಈ ಕುರಿತ ಸಮಸ್ಯೆಗಳಿದ್ದಲ್ಲಿ ಶಿಕ್ಷಣವಾಣಿ ಸಹಾಯವಾಣಿಗೆ ದೂರುಗಳನ್ನು ಸಲ್ಲಿಸುವ ವ್ಯವಸ್ಥೆ ಮಾಡಬೇಕೆಂದು ಸುರೇಶ್ ಕುಮಾರ್ ಸೂಚಿಸಿದ್ದಾರೆ.