ಮದ್ಯ ಮಾರಾಟ ಮಾಡಿದವರಿಗೆ ಹೊಸ ಸಂಕಷ್ಟ!
ಬೆಂಗಳೂರು, ಆ. 19: ಲಾಕ್ಡೌನ್ ಅವಧಿಯಲ್ಲಿ ಮದ್ಯ ಮಾರಾಟ ಮಾಡಿದ್ದವರಿಗೆ ಇದೀಗ ಹೊಸ ಸಂಕಷ್ಟ ಶುರುವಾಗಿದೆ. ಕರ್ನಾಟಕದಲ್ಲಿ ಲಾಕ್ಡೌನ್ ಅವಧಿಯಲ್ಲಿ ಮದ್ಯದಂಗಡಿಗಳಲ್ಲಿ ಲಾಕ್ಡೌನ್ ಪ್ರಾರಂಭದ ದಿನ ಲಭ್ಯವಿದ್ದ ಮದ್ಯ ಸಂಗ್ರಹ ಹಾಗೂ ಲಾಕ್ಡೌನ್ ಅಂತ್ಯದಲ್ಲಿ ಲಭ್ಯವಿದ್ದ ಸಂಗ್ರಹದಲ್ಲಿ ವ್ಯತ್ಯಾಸವಿದ್ದರೆ ಅಂಥದ್ದನ್ನು ಕಳ್ಳತನದ ವ್ಯಾಪಾರವೆಂದು ಪರಿಗಣಿಸಲು ಸೂಚಿಸಲಾಗಿದೆ.
Recommended Video
ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಂತಹ ಮಾರಾಟ ಪ್ರಕರಣಗಳನ್ನು ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಮದ್ಯ ಮಾರಾಟ ಸೇರಿದಂತೆ ಅನೇಕ ಅನಪೇಕ್ಷಣೀಯ ವ್ಯಾಪಾರ ವ್ಯವಹಾರಗಳು ನಡೆದಿವೆ. ಹೀಗಾಗಿ ಲಾಕ್ಡೌನ್ ಬಳಿಕ ಮದ್ಯದಂಗಡಿಗಳನ್ನು ಮತ್ತೆ ಪ್ರಾರಂಭಿಸುವವರೆಗೆ ಆಗಿರುವ ವ್ಯಾಪಾರ ಕಳ್ಳತನದ್ದು ಎಂದು ಸಮಿತಿ ಸದಸ್ಯರು ಪಕ್ಷಬೇಧವಿಲ್ಲದೆ ಒಪ್ಪಿದ್ದಾರೆ. ಸಭೆಯಲ್ಲಿ ಹಾಜರಿದ್ದ ಅಬಕಾರಿ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಸಂಪೂರ್ಣ ವಿವರಗಳನ್ನು ಒದಗಿಸದೇ ಇರುವುದಕ್ಕೆ ಇತರ ಸದಸ್ಯರೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಬಕಾರಿ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಹಲವಾರು ಟೀಕೆಗಳು ಸಭೆಯಲ್ಲಿ ವ್ಯಕ್ತವಾಗಿವೆ. ಡಿಸ್ಟಿಲರಿಗಳ ಮೂಲಗಳ ಮೂಲಕ ಮದ್ಯಸಾರ ಉತ್ಪಾದನೆ, ತಯಾರಿಕೆ ಹಾಗೂ ಉತ್ಪತ್ತಿಗಳ ಇಳುವರಿಗಳಲ್ಲಿ ವ್ಯತ್ಯಾಸವಾಗಿ ಸರ್ಕಾರಕ್ಕೆ ಸರ್ಕಾರಕ್ಕೆ ಸಾವಿರಾರು ಕೋಟಿ ಪ್ರತಿವರ್ಷ ನಷ್ಟವಾಗುತ್ತಿದೆ ಎಂದು ಸಾರಾಯಿ ನಿಷೇಧ ಮಾಡಲಾಗಿದೆ. ಈ ಹಿಂದೆ ಸಾರಾಯಿ ಮಾರಾಟ ಮಾಡುತ್ತಿದ್ದ ಮಾರಾಟಗಾರರಿಗೆ ಯಾವುದೇ ಪುನರ್ವಸತಿ ಕಲ್ಪಿಸದಿರುವುದು, ಪರ್ಯಾಯ ವ್ಯವಸ್ಥೆ ಮಾಡದಿರುವುದರ ಬಗ್ಗೆ ಕಾಂಗ್ರೆಸ್ ಸದಸ್ಯರಾದ ಹರಿಪ್ರಸಾದ, ಕೆ.ಆರ್. ರಮೇಶಕುಮಾರ, ಬಿಜೆಪಿಯ ವೈ.ಎ ನಾರಾಯಣಸ್ವಾಮಿ, ಬಿ.ಸಿ. ನಾಗೇಶ ಮುಂತಾದವರು ಇದೇ ಸಮಯದಲ್ಲಿ ಸಭೆಯಲ್ಲಿ ಟೀಕಿಸಿದರು.