ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಂದಿನಿಂದ ಆರಂಭ
ಬೆಂಗಳೂರು, ಜೂನ್ 29: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಇಂದು (ಜೂ.29)ರಿಂದ ಆರಂಭಗೊಳ್ಳಲಿದ್ದು, ಒಟ್ಟು ರಾಜ್ಯದ 301 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
1.33 ಲಕ್ಷ ಬಾಲಕರು ಮತ್ತು 91 ಸಾವಿರ ಬಾಲಕಿಯರು ಒಟ್ಟು 2.24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಒಟ್ಟು 5,700 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಒಟ್ಟು 398 ಮಂದಿ ಜಾಗೃತದಳ ಸಿಬ್ಬಂದಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ನಿಯೋಜಿಸಿದೆ.
ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ
ಪರೀಕ್ಷಾ ಕೇಂದ್ರಗಳ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದ್ದು, ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಜು.10ರವರೆಗೆ ಪರೀಕ್ಷೆ ನಡೆಯಲಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಪೂರಕ ಪರೀಕ್ಷೆ ವೇಳೆ ಆನ್ಲೈನ್ ಮೂಲಕ ಪ್ರಶ್ನೆ ಪತ್ರಿಕೆ ರವಾನೆ ಮಾಡುವ ಯೋಜನೆಯನ್ನು ಮಲ್ಲೇಶ್ವರಂನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ.
ಜೂ.29ರ ಶುಕ್ರವಾರ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ ಹಾಗೂ ಗಣಿತ ಪರೀಕ್ಷೆಗಳು ನಡೆಯಲಿವೆ. ಜೂ.30ರ ಶನಿವಾರ ತರ್ಕಶಾಸ್ತ್ರ, ಶಿಕ್ಷಣ, ಗೃಹ ವಿಜ್ಞಾನ, ಬೇಸಿಕ್ ಮ್ಯಾಥ್ಸ್ , ಮಧ್ಯಾಹ್ನ 2.30ರಿಂದ ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್, ಭಾಷೆಗಳ ಪರೀಕ್ಷೆ ನಡೆಯಲಿದೆ.
ಜು.2ರ ಸೋಮವಾರ ಅರ್ಥಶಾಸ್ತ್ರ, ಭೌತಶಾಸ್ತ್ರ, ಜು.3ರ ಮಂಗಳವಾರ ಊಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪಪ್ಯೂಟರ್ ಸೈನ್ಸ್ ವಿಷಯಗಳು ಹಾಗೂ ಮಧ್ಯಾಹ್ನ ಮಾಹಿತಿ ಮತ್ತು ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್ ವಿಷಯಗಳಿಗೆ ಪರೀಕ್ಷೆ ನಡೆಯಲಿವೆ.
ಜು.4ರಂದು ಬುಧವಾರ ಬೆಳಗ್ಗೆ ಕನ್ನಡ, ಮಧ್ಯಾಹ್ನ ಉರ್ದು ಮತ್ತು ಸಂಸ್ಕೃತ, ಜು.5 ಗುರುವಾರ ಭೂಗೋಳ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಭೂಗರ್ಭ ಶಾಸ್ತ್ರ, ಮಧ್ಯಾಹ್ನ ಹಿಂದಿ ಪರೀಕ್ಷೆಗಳು ನಡೆಯಲಿದೆ. ಜು.6ರ ಶುಕ್ರವಾರ ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಜು.7ರ ಶನಿವಾರ ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ರಸಾಯನಶಾಸ್ತ್ರ, ಜು.9ರ ಸೋಮವಾರ ರಾಜ್ಯ ಶಾಸ್ತ್ರ ಹಾಗೂ ಜು.10 ಮಂಗಳವಾರ ಇಂಗ್ಲಿಷ್ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.