ರಹಸ್ಯ ಬಯಲು; ದಿವ್ಯಾ ಹಾಗರಗಿ ತಪ್ಪಿಸಿಕೊಳ್ಳಲು ನೆರವಾಗಿದ್ದು ಯಾರು?
ಬೆಂಗಳೂರು, ಜುಲೈ 15: ದೇಶಾದ್ಯಂತ ಸದ್ದು ಮಾಡಿದ್ದ ಮತ್ತು ಮಾಡುತ್ತಿರುವ ಪಿಎಸ್ಐ ನೇಮಕಾತಿ ಹಗರಣದ ಆರೋಪಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗೆ ಮರಳು ಗಣಿಗಾರಿಕೆ ಉದ್ಯಮದವರ ನಂಟು ಇರುವುದು ಬೆಳಕಿಗೆ ಬಂದಿದೆ.
ಅದಕ್ಕಿಂತ ಹೆಚ್ಚಾಗಿ, ಪಿಎಸ್ಐ ನೇಮಕಾತಿ ಹಗರಣ ಬೆಳಕಿಗೆ ಬಂದ ಬಳಿಕ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ಚಳ್ಳೆ ಹಣ್ಣು ತಿನಿಸುತ್ತಿದ್ದ ದಿವ್ಯಾಗೆ ಯಾರು ನೆರವಾಗಿದ್ದರು? ಎಂಬ ರಹಸ್ಯವೂ ಬಯಲಾಗಿದೆ.
ಪಿಎಸ್ಐ ನೇಮಕಾತಿ ಹಗರಣ ಕೊಲೆಗಿಂತ ಗಂಭೀರ ಅಪರಾಧ!
ಕಲಬುರಗಿಯ ಖಾಸಗಿ ಶಾಲೆಯ ಕಾರ್ಯದರ್ಶಿಯೂ ಆಗಿರುವ ದಿವ್ಯಾ ಹಾಗರಗಿ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲು ಸುರೇಶ್ ಕಟಗಾಂವ್ ಎಂಬ ವ್ಯಕ್ತಿಯ ಪಾತ್ರ ಇದೆ. ಮರಳು ಗಣಿಗಾರಿಕೆ ಮತ್ತು ಮರಳು ಸಾಗಾಣಿಕೆ ವ್ಯವಹಾರದಲ್ಲಿರುವ ಸುರೇಶ್ ಕಟಗಾಂವ್ ದಿವ್ಯಾ ಹಾಗರಿಗೆ ಅವರಿಗೆ ಹೇಗೆ ನೆರವಾದರು? ಎಂಬ ಅಂಶವನ್ನು ಪಿಎಸ್ಐ ನೇಮಕಾತಿ ಹಗರಣದ ದೋಷಾರೋಪಣ ಪಟ್ಟಿಯಲ್ಲಿ ವಿವರಿಸಲಾಗಿದೆ.
ಈ ದೋಷಾರೋಪಣ ಪಟ್ಟಿಯ ಸಮೇತ ದಿವ್ಯಾ ಹಾಗರಗಿ ಮತ್ತು ಸುರೇಶ್ ಕಟಗಾಂವ ನಡುವಿನ ಸಂಬಂಧದ ಬಗ್ಗೆ ದಿ ಫೈಲ್ ಜಾಲತಾಣದಲ್ಲಿ ವರದಿ ಪ್ರಕಟವಾಗಿದೆ. ಹಿಂದೊಮ್ಮೆ ದಿವ್ಯಾ ಹಾಗರಗಿ ತನಗೆ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಪಿಎಸ್ಐ ಪ್ರಕರಣದಲ್ಲಿ ಆಕೆ ತಪ್ಪಿಸಿಕೊಳ್ಳಲು ಸುರೇಶ್ ಕಟಗಾಂವ ಸಹಾಯ ಮಾಡಿರುವುದು ದೋಷಾರೋಪಣ ಪಟ್ಟಿಯಿಂದ ತಿಳಿದು ಬರುತ್ತದೆ.
ದಿವ್ಯಾಗೆ ನೆರವಾದ ಸುರೇಶ್ ಯಾರು?
ಪಿಎಸ್ಐ ನೇಮಕಾತಿ ಹಗರಣದಲ್ಲಿ ಸುರೇಶ್ ಕಟಗಾಂವ 21ನೇ ಆರೋಪಿಯಾಗಿದ್ದಾರೆ. ಇವರು ಮಹಾರಾಷ್ಟ್ರ ರಾಜ್ಯದ ಸೊಲ್ಹಾಪುರ ತಾಲೂಕಿನವರು. ಕರ್ನಾಟಕದಲ್ಲಿ ಮರಳು ಸಾಗಾಣಿಕೆ ಕಾರ್ಯ ನಡೆಸುತ್ತಾರೆ. ಅಫ್ಜಲಪುರದ ರವಿಮಾಳಿ ಅವರಿಗೆ ಕರ್ನಾಟಕ ಸರಕಾರದಿಂದ ಮರಳು ಬ್ಲಾಕ್ ಲೀಸ್ ಲೈಸೆನ್ಸ್ ಸಿಕ್ಕಿತ್ತು. ಈ ಪರವಾನಿಗೆಯ ಉಪಗುತ್ತಿಗೆಯನ್ನು ಸುರೇಶ್ ಕಟಗಾಂವ 2019ರಿಂದಲೇ ಪಡೆದುಕೊಂಡಿದ್ದರು.
ಪಿಎಸ್ಐ ಹಗರಣ; ಬಂಧಿತ ಅಧಿಕಾರಿಗಳ ಮಂಪರು ಪರೀಕ್ಷೆಗೆ ಒತ್ತಾಯ
ದಿವ್ಯಾ ಮತ್ತು ಸುರೇಶ್ ಪರಿಚಯ
ಮರಳು ಗಣಿಗಾರಿಕೆ ಮತ್ತು ಮರಳು ಸಾಗಾಣಿಕೆ ಕಾರ್ಯದಲ್ಲಿ ಸುರೇಶ್ ಕಟಗಾಂವಗೆ ಕೆಲ ತೊಡಕುಗಳು ಎದುರಾಗುತ್ತಿರುತ್ತದೆ. ದಿವ್ಯಾ ಹಾಗರಗಿ ಆಗ ಕಲಬುರಗಿ ವಲಯದ ಬಿಜೆಪಿ ಪಕ್ಷದೊಳಗೆ ಪ್ರಭಾವಿ ಎನಿಸಿಕೊಂಡಿದ್ದರೆಂಬ ಕಾರಣಕ್ಕೆ ಅವರ ಸಹಾಯವನ್ನು ಸುರೇಶ್ ಯಾಚಿಸುತ್ತಾರೆ. ಆಗ ಸುರೇಶ್ ಕಟಗಾಂವಗೆ ದಿವ್ಯಾ ಹಾಗರಗಿ ಸಹಾಯ ಮಾಡುತ್ತಾರೆ. ಆಗಿನಿಂದ ಇಬ್ಬರ ನಡುವೆ ಒಡನಾಟ ಹೆಚ್ಚಿತು ಎಂದು ಸಿಐಡಿ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.
ಉಪಕಾರಕ್ಕೆ ತಕ್ಕ ಪ್ರತ್ಯುಪಕಾರ
ಮರಳು ಸಾಗಾಣಿಕೆಯಲ್ಲಿ ಅಡೆತಡೆಗಳನ್ನು ನಿವಾರಿಸಲು ತನಗೆ ನೆರವಾಗಿದ್ದ ದಿವ್ಯಾ ಹಾಗರಗಿಗೆ ಸುರೇಶ್ ಕಟಗಾಂವ ಪಿಎಸ್ಐ ಹಗರಣದ ವೇಳೆ ಸಹಾಯ ಮಾಡುವ ಮೂಲಕ ಪ್ರತ್ಯುಪಕಾರ ತೋರುತ್ತಾರೆ. ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿದ್ದ ಸಿಐಡಿ ಪೊಲೀಸರ ಕೈಗೆ ಸಿಗದಂತೆ ಆರೋಪಗಳಾದ ದಿವ್ಯಾ ಹಾಗರಗಿ, ಕಾಶಿನಾಥ ಚಿಳ್ಳ ಮೊದಲಾದವರು ತಪ್ಪಿಸಿಕೊಂಡು ತಿರುಗಲು ಸುರೇಶ್ ನೆರವಾಗುತ್ತಾನೆ.
ಈ ಆರೋಪಿಗಳನ್ನು ಸೊಲ್ಲಾಪುರದಿಂದ ಪುಣೆಗೆ ಹೋಗಲು ಸುರೇಶನೇ ವ್ಯವಸ್ಥೆ ಮಾಡುತ್ತಾನೆ. ಪುಣೆಯಲ್ಲಿ ತನ್ನ ಪರಿಚಯವಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿ ಈ ಆರೋಪಿಗಳಿಗೆ ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡುತ್ತಾನೆ ಎಂದು ಸಿಐಡಿ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಲಾಗಿದೆ.
ಸುರೇಶ್ಗೆ ಜಾಮೀನು
ಏಪ್ರಿಲ್ 29ರಂದು ಸಿಐಡಿ ಪೊಲೀಸರು ಪುಣೆಯಲ್ಲಿ ದಿವ್ಯಾ ಹಾಗರಗಿ ಮತ್ತಿತರ ಆರೋಪಿಗಳನ್ನು ಬಂಧಿಸುತ್ತಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ದಿವ್ಯಾ 18ನೇ ಆರೋಪಿಯಾಗಿದ್ದಾರೆ. ಈಕೆಯ ಗಂಡ ರಾಜೇಶ್ ಹಾಗರಗಿ ಕೂಡ ಒಬ್ಬ ಆರೋಪಿಯಾಗಿದ್ದಾರೆ. ಬಹುತೇಕ ಎಲ್ಲಾ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ಧಾರೆ.
ಈ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಸುರೇಶ್ ಕಟಗಾಂವಗೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಸುರೇಶ್ಗೆ ಮಾತ್ರವೇ ಜಾಮೀನು ಸಿಕ್ಕಿರುವುದು.
(ಒನ್ಇಂಡಿಯಾ ಸುದ್ದಿ)