ಪಿಎಸ್ಐ ಅಕ್ರಮ; ಸಿಐಡಿ ವಶಕ್ಕೆ ಪಡೆದಿರುವ ಗಣಪತಿ ಭಟ್ ಯಾರು?
ಬೆಂಗಳೂರು, ಜು. 12: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸ್ಫೋಟಕ ಬೆಳವಣಿಗೆ ಆಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಪಿಎಸ್ಐ ಹುದ್ದೆ ಡೀಲ್ ಮಾಡಿದ ಆರೋಪ ಸಂಬಂಧ ಗಣಪತಿ ಭಟ್ ಎಂಬುವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಪಿಎಸ್ಐ ಅಕ್ರಮದಲ್ಲಿ ಗಣಪತಿ ಭಟ್ ಶಾಮೀಲಾಗಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಸಿಐಡಿ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ. ಸಾಕ್ಷಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಮಂಗಳವಾರ ಬೆಳಗ್ಗೆಯಿಂದಲೂ ಪ್ರಶ್ನೆ ಮಾಡಲಾಗುತ್ತಿದೆ.
ಗೃಹ ಸಚಿವರ ಸ್ಪಷ್ಟನೆ: ಈ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, "ಪಿಎಸ್ಐ ಅಕ್ರಮದಲ್ಲಿ ವಿಚಾರಣೆಗೆ ಒಳಪಟ್ಟಿರುವ ಶಿರಸಿ ಮೂಲದ ಗಣಪತಿ ಭಟ್ ತಮ್ಮ ಕಾರ್ಯಾಲಯದ ಸಿಬ್ಬಂದಿಯಲ್ಲ" ಎಂದು ಹೇಳಿದ್ದಾರೆ.
ಗಣಪತಿ ಭಟ್ಗೂ ಗೃಹ ಸಚಿವರ ಕಾರ್ಯಾಲಯಕ್ಕೂ ಸಂಬಂಧವಿಲ್ಲ. ಸಿಐಡಿ ವಶಕ್ಕೆ ಪಡೆದಿರುವ ಗಣಪತಿ ಭಟ್ ಖಾಸಗಿ ವ್ಯಕ್ತಿ. ಆತ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಅಲ್ಲ ಎಂದು ಸಿಐಡಿ ಅಧಿಕಾರಿಯೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ಸ್ಪಷ್ಟ ಪಡಿಸಿದ್ದಾರೆ.
ಪಿಎಸ್ಐ ನೇಮಕಾತಿ ಯಲ್ಲಿ ಹಲವು ಅಭ್ಯರ್ಥಿಗಳನ್ನು ಸಂಪರ್ಕಿಸಿ ಡೀಲ್ ಖುದುರಿಸಿದ್ದ ಎಂಬ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದ್ದು, ವಿಚಾರಣೆ ಮುಂದುವರೆದಿದೆ.
ಯಾರೀ ಗಣಪತಿ ಭಟ್ ?: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ 62 ವರ್ಷ ವಯಸ್ಸಿನ ವ್ಯಕ್ತಿ. ಇವರು ಗೃಹ ಸಚಿವರ ಆಪ್ತ ಕಾರ್ಯದರ್ಶಿ ಎಂದೇ ಬಿಂಬಿಸಲಾಗಿತ್ತು. ವಾಸ್ತವದಲ್ಲಿ ಗೃಹ ಸಚಿವರಿಗೂ ಈ ಆರೋಪಿಗೂ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಗಣಪತಿ ಭಟ್ರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಸಂಜೆ ವೇಳೆಗೆ ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಹಲವು ಅಭ್ಯರ್ಥಿಗಳಿಗೆ ಪಿಎಸ್ಐ ಹುದ್ದೆ ನೀಡುವುದಾಗಿ ಭರವಸೆ ನೀಡಿ ನೆರವು ನೀಡಿರುವ ಆರೋಪ ಗಣಪತಿ ಭಟ್ ಮೇಲಿದೆ.
ಗೃಹ ಸಚಿವರ ಹೆಸರು ದುರ್ಬಳಕೆ ಮಾಡಿಕೊಂಡು ಈ ಅಕ್ರಮ ಎಸಗಿದರೇ? ಎಂಬುದು ವಿಚಾರಣೆ ಬಳಿಕ ಬೆಳಕಿಗೆ ಬರಬೇಕಿದೆ.