ಪಿಎಸ್ಐ ನೇಮಕಾತಿ ಅಕ್ರಮ: ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಆಪ್ತ ಸೇರಿ ಅರು ಮಂದಿ ಬಂಧನ
ಬೆಂಗಳೂರು, ಮೇ. 11: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರಿನ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿನ ಅಕ್ರಮ ಸಂಬಂಧ 11 ಆರೋಪಿತ ಅಭ್ಯರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮತ್ತೊಂದಡೆ ಪೊಲೀಸ್ ನೇಮಕಾತಿ ವಿಭಾಗದ ನೌಕರರು ಸೇರಿ 6 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕೆಲ ಅಭ್ಯರ್ಥಿಗಳು ಪರಿಚಿತ ರಾಜಕಾರಣಿಗಳ ಮೂಲಕವೇ ಡೀಲಿಂಗ್ ನಡೆಸಿರುವ ಮಾಹಿತಿ ವಿಚಾರಣೆ ವೇಳೆ ಹೊರ ಬಿದ್ದಿದ್ದು, ಕೆಲ ರಾಜಕಾರಣಿಗಳಿಗೆ ನೋಟಿಸ್ ನೀಡಲು ಸಿಐಡಿ ಪೊಲೀಸರು ತಯಾರಿ ನಡೆಸಿದ್ದಾರೆ.
ಕೆಲ ಪರಿಚಯಸ್ಥ ರಾಜಕಾರಣಿಗಳ ಮಧ್ಯಸ್ಥಿಕೆಯಲ್ಲಿ ಕೆಲ ಅಭ್ಯರ್ಥಿಗಳು ಡೀಲ್ ಮಾಡುವರಿಗೆ ಹಣ ನೀಡಿದ್ದು, ಅಭ್ಯರ್ಥಿಗಳ ಜತೆ ಒಡನಾಟ ಹೊಂದಿರುವ ಪ್ರಭಾವಿ ರಾಜಕಾರಣಿಗಳ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಕೆಲ ರಾಜಕಾರಣಿಗಲು ಉನ್ನತ ಸ್ಥಾನದಲ್ಲಿದ್ದು ಅವರಿಗೆ ನೋಟಿಸ್ ನೀಡಲು ಸಿಐಡಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಅಲ್ಲದೇ ಅವರ ಭಾಗಿಯಾಗಿರುವ ಬಗ್ಗೆ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅಭ್ಯರ್ಥಿಗಳ ಲಿಖಿತ ಹೇಳಿಕೆಯನ್ನು ಪಡೆದಿದ್ದು, ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಅದರಲ್ಲಿ ಪೊಲೀಸ್ ಕಸ್ಟಡಿ ಅವಧಿ ಮುಗಿದ 11 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಇಗದೆ. ಉಳಿದ 6 ಅಭ್ಯರ್ಥಿಗಳ ವಿಚಾರಣೆ ಮುಂದುವರೆದಿದೆ.
ವಿಧಿ ವಿಜ್ಞಾನ ಮೊರೆ ಹೋದ ಸಿಐಡಿ
ಪಿಎಸ್ಐ ಅಕ್ರಮದಲ್ಲಿ ಶಾಮೀಲಾಗಿರುವ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ಲಿಂಕ್ ಬೇಧಿಸಲು ಸಿಐಡಿ ಪೊಲೀಸರು ಬೆಂಗಳೂರು ಪ್ರಕರಣದಲ್ಲಿ ನೂರಕ್ಕೂ ಹೆಚ್ಚು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿತ ಅಭ್ಯರ್ಥಿಗಳು ಪ್ರಕರಣ ಹೊರ ಬರುತ್ತಿದ್ದಂತೆ ತಮ್ಮ ಮೊಬೈಲ್ಗಳನ್ನು ಪ್ಲಾಶ್ ಮಾಡಿಸಿ ಸಾಕ್ಷಿಗಳನ್ನು ಮೊದಲೇ ನಾಶ ಪಡಿಸಿದ್ದಾರೆ. ಹೀಗಾಗಿ ಮೊಬೈಲ್ ಗಳಲ್ಲಿ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ಅದರಲ್ಲಿ ಆಯ್ದ ಮೊಬೈಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದು, ಹಿಂದಿನ ಡಾಟಾ ರಿಕವರಿ ಮಾಡಲಾಗುತ್ತಿದೆ. ಬಳಿಕ ಅಕ್ರಮಕ್ಕೆ ಮಹತ್ವದ ಸಾಕ್ಷಿಗಳು ಲಭ್ಯವಾಗಲಿವೆ.
ಬೇಲಿಯೇ ಹೊದ್ದು ಹೊಲ ಮೇಯ್ದಂಗಾಯ್ತು
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಅವರ ಆಪ್ತ ಸಹಾಯಕ ಶ್ರೀನಿವಾಸ್, ಎಫ್ಡಿಎ ಹರ್ಷ, ಭದ್ರತೆಗೆ ನಿಯೋಜನೆಗ ಗೊಂಡಿದ್ದ ಪಿಎಸ್ಐ ಲೋಕೇಶ್, ಮಂಜುನಾಥ್, ಶ್ರಿಧರ್ ಹಾಗೂ ಮಧ್ಯವರ್ತಿ ಶರತ್ರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ 9 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಜಿ ಸಚಿವನ ಆಪ್ತ ಅಂದರ್
ಬೆಂಗಳೂರಿನಲ್ಲಿ ನಡೆದಿರುವ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮಧ್ಯವರ್ತಿ ಶರತ್ ಎಂಬಾತ ತಲಾ 60 ರಿಂದ 80 ಲಕ್ಷ ರೂ. ಸಂಗ್ರಹಿಸಿದ್ದು, ಅರ್ಧ ಮೊತ್ತವನ್ನು ನೇಮಕಾತಿ ವಿಭಾಗವ ನೌಕರರಿಗೆ ನೀಡಿದ್ದಾನೆ. ನಾಗಮಂಗಲ ಮೂಲದ ಶರತ್ ಕೆಲ ಅಭ್ಯರ್ಥಿಗಳಿಂದ ಡೀಲಿಂಗ್ ಕುದುರಿಸಿದ್ದಾನೆ. ಈತ ಮಾಜಿ ಶಾಸಕ ಚಲುವನಾರಾಯಣಸ್ವಾಮಿ ಅವರ ಆಪ್ತ ಎಂದು ಹೇಳಲಾಗುತ್ತಿದೆ. ಇದೇ ರೀತಿ ಅನೇಕ ಮಧ್ಯವರ್ತಿಗಳು ನೇಮಕಾತಿ ವಿಭಾಗದ ಸಿಬ್ಬಂದಿಯ ಜೊತೆ ಶಾಮೀಲಾಗಿದ್ದು, ಅಕ್ರಮ ಎಸಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.
ಪೊಲೀಸ್ ನೇಮಕಾತಿ ವಿಭಾಗದಲ್ಲೇ ಅಕ್ರಮ
ನೇಮಕಾತಿ ವಿಭಾಗದ ಭದ್ರತಾ ಕೊಠಡಿಯಲ್ಲಿ ಒಎಂಆರ್ ಶೀಟ್ ಪ್ರತಿಗಳನ್ನು ಇರಿಸಲಾಗಿತ್ತು. ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ ಭದ್ರತಾ ಕೊಠಡಿಯಲ್ಲಿ ಒಎಂಆರ್ ಪ್ರತಿಗಳನ್ನು ತಿದ್ದಲು ಸಹಕಾರ ನೀಡಿರುವುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ. ಭದ್ರತಾ ಕೊಠಡಿಯಲ್ಲಿರುವ ಒಎಂಆರ್ ಶೀಟ್ಗಳನ್ನು ಬೇರೆಡೆ ತೆಗೆದುಕೊಂಡು ಹೋಗಿ ಭರ್ತಿ ಮಾಡಿರುವ ಸಾಧ್ಯತೆಯಿದ್ದು, ಈ ಕುರಿತ ತನಿಖೆ ಮುಂದುವರೆದಿದೆ. ಇನ್ನೂ ಹಲವರು ಈ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.
Recommended Video