ಪಿಎಸ್ಐ ನೇಮಕಾತಿ ಅಕ್ರಮ: ಪೊಲೀಸಪ್ಪನ ಬಾಯಿ ಬಿಡಿಸಲು ಸಿಐಡಿ ಹರ ಸಾಹಸ
ಬೆಂಗಳೂರು, ಮೇ. 23: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಡಿವೈಎಸ್ಪಿ ಶಾಂತಕುಮಾರ್ ಬಾಯಿ ಬಿಡಿಸಲು ಸಿಐಡಿ ಪೊಲೀಸರಿಂದಲೇ ಸಾಧ್ಯವಾಗುತ್ತಿಲ್ಲ. ಅಕ್ರಮಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಪ್ರಶ್ನಿಸಿದರೂ ನನಗೆ ಗೊತ್ತಿಲ್ಲ ಎಂಬ ಉತ್ತರ ಕೊಡುತ್ತಿರುವುದು ಸಿಐಡಿ ಅಧಿಕಾರಿಗಳಿಗೆ ತಲೆ ನೋವಗಿ ಪರಿಣಮಿಸಿದೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುವಾಗ ಸಿಐಡಿ ಕಚೇರಿಯ ಸ್ಟ್ರಾಂಗ್ ರೂಂನಲ್ಲಿ ಉತ್ತರ ಪತ್ರಿಕೆಗಳನ್ನು ತಿದ್ದುಪಡಿ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಭದ್ರತಾ ಸಿಬ್ಬಂದಿ ಜೊತೆಗೆ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಕೂಡ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಪುರಾವೆಗಳು ಸಿಕ್ಕಿದ್ದವು.
ಆ ಬಳಿಕ ಶ್ರೀಧರ್ ಸೇರಿದಂತೆ ಭದ್ರತಾ ಸಿಬ್ಬಂದಿ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದಾಗ ಸುಮಾರು 2 ಕೋಟಿ ರೂ. ಅಧಿಕ ಹಣ ಸಿಕ್ಕಿತ್ತು. ಅಲ್ಲದೇ ಕೆಲವು ದಾಖಲೆಗಳು ಲಭ್ಯವಾಗಿದ್ದವು. ಅರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಸಿಐಡಿ ಪೊಲೀಸರು ಇದೀಗ ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ.
ಕೆಲವು ಪಿಎಸ್ಐ ಅಭ್ಯರ್ಥಿಗಳ ಜತೆ ಒಡನಾಟ ಇಟ್ಟುಕೊಂಡಿರುವ ಬಗ್ಗೆ ದಾಖಲೆಗಳಿದ್ದು ಈ ಬಗ್ಗೆ ಶಾಂತ ಕುಮಾರ್ರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಎಷ್ಟೇ ಕೇಳಿದರೂ ಬಾಯಿ ಬಿಡುತ್ತಿಲ್ಲ. ಹೀಗಾಗಿ ಭಾನುವಾರ ಸಹ ಶಾಂತಕುಮಾರ್ ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸ್ ನೇಮಕಾತಿ ವಿಭಾಗದಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿರುವ ಶಾಂತಕುಮಾರ್ ಪಿಎಸ್ಐ ನೇಮಕಾತಿ ಉಸ್ತುವಾರಿ ವಹಿಸಿಕೊಂಡಿದ್ದರು. ಅವರ ಮೂಲಕವೇ ಅಕ್ರಮ ನಡೆದಿರುವುದಕ್ಕೆ ಮಹತ್ವದ ಸಾಕ್ಷಾಧಾರಗಳನ್ನು ಸಿಐಡಿ ಅಧಿಕಾರಿಗಳು ಕಲೆಹಾಕಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡವಿದ್ದು, ಶಾಂತ್ ಕುಮಾರ್ ಬಾಯಿ ಬಿಡುತ್ತಿಲ್ಲ. ಇದು ಸಿಐಡಿ ತನಿಖಾಧಿಕಾರಿಗಳ ಪಾಲಿಗೆ ತಲೆಬಿಸಿ ಉಂಟಾಗಿದೆ.
ಡಿವೈಎಸ್ಪಿ ಶಾಂತ್ ಕುಮಾರ್ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ ಶ್ರೀಧರ್, ಶ್ರೀನಿವಾಸ ಇತರೆ ನೌಕರರು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಆರೋಪಿತರ ಮನೆಯಲ್ಲಿ 2.46 ಕೋಟಿ ರೂ. ಹಣ ಸಿಕ್ಕಿದ್ದು, ಈ ಬಗ್ಗೆ ಸಹ ಶಾಂತಕುಮಾರ್ ಪ್ರಶ್ನಿಸಲಾಗಿದೆ. ಇದು ಯಾವುದೂ ನನಗೆ ಸಂಬಂಧಿಸಿದಲ್ಲ. ನನಗೆ ಗೊತ್ತಿಲ್ಲ ಎಂದೇ ವಾದ ಮಂಡಿಸಿದ್ದಾರೆ. ಇನ್ನು ಒಎಂಆರ್ ಉತ್ತರ ಹಾಳೆಗಳನ್ನು ಸಂಗ್ರಹಿಸಿದ್ದ ಟ್ರಂಕ್ಗಳ ಬೀಗದ ಕೈ ಮನೆಯಲ್ಲಿ ಸಿಕ್ಕಿದ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸಿದಾಗ, ಯಾವುದೇ ಉತ್ತರ ನೀಡಿಲ್ಲ. ಶಾಂತಕುಮಾರ್ ಬಾಯಿ ಬಿಟ್ಟರೆ ಹಲವು ಮೇಲಾಧಿಕಾರಿಗಳಿಗೆ ಕಂಟಕವಾಗಬಹುದು ಎಂದೇ ಹೇಳಲಾಗುತ್ತಿದೆ. ಹೀಗಾಗಿ ಸಿಐಡಿ ತನಿಖೆಗೆ ಹಿನ್ನಡೆಯಾಗಿದೆ.
ಎಡಿಜಿಪಿ ಯಾಕೆ ಅಮಾನತು ಇಲ್ಲ?; ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ನೇಮಕಾತಿ ವಿಭಾಗದಲ್ಲಿಯೇ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್ ಅಮಾನತು ಮಾಡಿ ಅವರನ್ನು ವಿಚಾರಣೆಗೆ ಒಳಪಡಿಸಬೇಕಿತ್ತು. ಆದರೆ ಅವರನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರ ಅವರನ್ನು ರಕ್ಷಣೆ ಮಾಡಿತೇ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು ಅಮ್ರಿತ್ ಪೌಲ್. ನೇಮಕಾತಿ ವಿಭಾಗದ ಕೇಂದ್ರ ಕಚೇರಿಯಲ್ಲಿಯೇ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳು ಲಭ್ಯವಾಗಿವೆ. ಈ ಅಕ್ರಮದಲ್ಲಿ ಅವರ ಪಾತ್ರ ಇಲ್ಲದಿದ್ದರೂ ಈ ವಿಭಾಗದ ಜವಾಬ್ಧಾರಿ ಹೊತ್ತ ಎಡಿಜಿಪಿಯೇ ಹೊಣೆ. ಅವರನ್ನು ಸೇವೆಯಿಂದ ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಬೇಕಿತ್ತು ಎಂಬ ಮಾತುಗಳು ಪೊಲೀಸ್ ವಲಯದಲ್ಲಿಯೇ ಕೇಳಿ ಬರುತ್ತಿವೆ.
Recommended Video