ಆರೋಪಿ ಮನೆಯಲ್ಲಿ ಗೊಡಂಬಿ ತಿಂದ ಹೋಮ್ ಮಿನಿಸ್ಟರ್ಗೂ ನೋಟಿಸ್ ಕೊಡಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಏ. 25: ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಅರೋಪಿ ದಿವ್ಯಾ ಹಾಗರಗಿ ಮನೆಗೆ ಹೋಗಿ ಹೋಮ್ ಮಿನಿಸ್ಟರ್ ಸನ್ಮಾನ ಮಾಡಿಸಿಕೊಂಡು, ಬಾದಾಮಿ ಗೋಡಂಬಿ ತಿಂದು ಬಂದಿದ್ದಾರೆ. ಅವರೇ ಪೊಲೀಸ್ ನೇಮಕಾತಿಯ ಮುಖ್ಯಸ್ಥರು. ಹಾಗಿದ್ದ ಮೇಲೆ ಹೊಮ್ ಮಿನಿಸ್ಟರ್ ಮೇಲೆ ಯಾಕೆ ಎಫ್ಐಆರ್ ಮಾಡಿಲ್ಲ. ನೀವೇನು ಕತ್ತೆ ಕಾಯ್ದಿದ್ದೀರಾ ? ಕಳ್ಳೆಪುರಿ ತಿಂತಿದ್ದೀರಾ? ಹೋಮ್ ಮಿನಿಸ್ಟರ್ ನ್ನು ಯಾಕೆ ಈವೆರೆಗೂ ವಿಚಾರಣೆಗೆ ನಡೆಸಿಲ್ಲ?
ಶಾಸಕ ಪ್ರಿಯಾಂಕ್ ಖರ್ಗೆ ಅವರ ಆಕ್ರೋಶದ ಮಾತುಗಳಿವು. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನೀಡಿರುವ ನೋಟಿಸ್ ಬಗ್ಗೆ ಸಿಡಿಮಿಡಿಗೊಂಡಿರುವ ಸಿಐಡಿ ಪೊಲೀಸರು ನೋಟಿಸ್ ನೀಡಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ನೋಟಿಸ್ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ ಗೃಹ ಸಚಿವರ ವಿರುದ್ಧ ಹಾಗೂ ಸಿಐಡಿ ವಿರುದ್ಧ ಕಿಡಿ ಕಾರಿದರು.
ನೀವೇನು ಕತ್ತೆ ಕಾಯ್ತಿದ್ದೀರಾ? ಕಳ್ಳೆಪುರಿ ತಿನ್ನುತ್ತಿದ್ದೀರಾ? ಆರೋಪಿ ಮೇಲೆ ಯಾಕೆ ಎಫ್ಐಆರ್ ಮಾಡಿಲ್ಲ. ಇಡೀ ಇಲಾಖೆ ಇದರಲ್ಲಿ ಶಾಮೀಲಾಗಿದೆ ಎಂದು ತಿಳಿಯಬಹುದಾ? ಈ ಪಕರಣದಲ್ಲಿ ಶಾಮೀಲಾಗಿರುವರು ಯಾರು? ಯಾಕೆ ಅವರನ್ನು ವಿಚಾರಣೆ ನಡೆಸಿಲ್ಲ. ನೇಮಕಾತಿ ಮುಖ್ಯಸ್ಥರೇ ಗೃಹ ಸಚಿವರು. ಇಲ್ಲಿಯವರೆಗೆ ಅವರನ್ನು ಯಾಕೆ ವಿಚಾರಣೆಗೆ ಕರೆದಿಲ್ಲ ಎಂದು ಪ್ರಶ್ನಿಸಿದರು.
ನನ್ನ ಬಳಿ ಇರೋ ಸಾಕ್ಷಿ ಮತ್ತು ದಾಖಲೆ ನೀಡುವಂತೆ ಸೂಚಿಸಿದ್ದಾರೆ. ನಾನು ಎರಡು ಮೂರು ವಾರದಿಂದ ಪ್ರಸ್ತಾಪ ಮಾಡಿದ್ದೆ. ನನಗೆ ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದರಿಂದಲೇ ಸರ್ಕಾರದ ಕಾರ್ಯ ವೈಖರಿ ಅರ್ಥವಾಗುತ್ತದೆ. ಇದೊಂದು ಅಸಮರ್ಥ ಸರ್ಕಾರ. ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ಪೊಲೀಸರ ಬಳಿ ಮಾಹಿತಿ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
'ನಾನು ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದೇನೆ. ನನಗಿಂತೂ ಮೊದಲೇ ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಬಗ್ಗೆ ಸಿಐಡಿ ಪೊಲೀಸರಿಗೆ ಗೊತ್ತಿಲ್ಲವೇ? ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಚಿವ ಪ್ರಭು ಚವ್ಹಾಣ್ ಪತ್ರ ಬರೆಯುತ್ತಾರೆ. ಇದಾದ ಕೂಡಲೇ ನೇಮಕಾತಿ ಆದೇಶ ತಡೆ ಹಿಡಿಯುತ್ತಾರೆ. ಸದನದಲ್ಲಿ ಕೂಡ ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಪ್ರಸ್ತಾಪವಾಗಿದ್ದು, ಗೃಹ ಸಚಿವರು ಉತ್ತರಿಸುತ್ತಾರೆ. ಇಷ್ಟೆಲ್ಲಾ ಸಾಕ್ಷಿಗಳಿರುವ ಹೋಮ್ ಮಿನಿಸ್ಟರ್ ಅವರನ್ನು ಯಾಕೆ ಸಿಐಡಿ ಪೊಲೀಸರು ವಿಚಾರಣೆ ನಡೆಸಿಲ್ಲ,' ಎಂದು ಕಿಡಿ ಕಾರಿದ್ದಾರೆ.
ಆಯ್ಕೆಗೆ ಮೊದಲೇ ಸಮವಸ್ತ್ರ ತೊಟ್ಟಿದ್ದು ಹೇಗೆ?
ಅರುಣ್ ಎಂಬಾತ ಎಬಿವಿಪಿ ಕಾರ್ಯಕರ್ತ. ಅವನು ಹೇಗೆ ಆಯ್ಕೆ ಮೊದಲೇ ಸಮವಸ್ತ್ರ ಧರಿಸಿ ಓಡಾಡ್ತಾನೆ. ಅವನಿಗೆ ಮೆಡಿಕಲ್ ಟೆಸ್ಟ್ ಆಗಿಲ್ಲ. ಅವನು ಹೇಗೆ ಆಯ್ಕೆಯಾದ? ಇದರ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಯಾಕೆ ಇದರ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲವೇ? ಅಡಿಯೋದಲ್ಲಿ ಹಣದ ಬಗ್ಗೆ ಮಾತಾಡ್ತಾರೆ. ಇದೆಲ್ಲವೂ ನಾನು ಸೃಷ್ಟಿ ಮಾಡಿರೋದಾ? ಈ ಇಂದೆ ಇಂಟಲ್ ಜೆನ್ಸಿ ಅಂತ ಇತ್ತು, ಬಹಳ ಮಾಹಿತಿ ಕಲೆ ಹಾಕುತ್ತಿತ್ತು. ಈಗ ಪೇಪರ್ ನೋಡಿ ಮಾಹಿತಿ ಕಲೆ ಹಾಕುತ್ತಾರೆ. ಎಂದು ಹೇಳಿದರು.
'ಈ ನೇಮಕಾತಿಯ ಮುಖ್ಯಸ್ಥರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು. ಆರೋಪಿ ದಿವ್ಯ ಹಾಗರಗಿ ಮನೆಗೆ ಹೋಗಿ ಸನ್ಮಾನ ಮಾಡಿಸಿಕೊಂಡು ಹೊರಗೆ ಬರ್ತಾರೆ. ಯಾಕೆ ಅವರನ್ನು ನೀವು ವಿಚಾರಣೆಗೆ ಕರೆದಿಲ್ಲ.? ಗೃಹ ಸಚಿವರು ಆರೋಪಿ ಮನೆಗೆ ಹೋಗಿ ಬಾದಾಮಿ ಗೋಡಂಬಿ ತಿಂದು ಬರ್ತಾರೆ. ಅಲ್ಲಿ ಸನ್ಮಾನ ಮಾಡಿಸಿಕೊಂಡು ಬರ್ತಾರೆ. ಯಾಕೆ ಗೃಹ ಸಚಿವರೇ ಈ ಅಕ್ರಮದಲ್ಲಿ ಶಾಮೀಲಾಗಿರುವುದಿಲ್ಲವೇ,' ಎಂದು ಪ್ರಿಯಾಂಕ ಖರ್ಗೆ ಸಿಡಿಮಿಡಿಗೊಂಡರು.
ಯತ್ನಾಳ್ ಮಾತಿನಂತೆ ಹೊಸ ಹೋಮ್ ಹಾಕಿ:
''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಪಕ್ಷದ ಬಸವರಾಜ ಪಾಟೀಲ್ ಯತ್ನಾಳ್ ಅವರ ಮಾತು ಕೇಳಿ. ಹೋಮ್ ಮಿನಿಸ್ಟರ್ ಸರಿಯಿಲ್ಲ. ನಮಗೆ ಸ್ಟ್ರಾಂಗ್ ಹೋಮ್ ಮಿನಿಸ್ಟರ್ ಬೇಕು ಎಂದು ಜಾಹೀರಾತು ಕೊಡಬೇಕು ಎಂದು ಯತ್ನಾಳ್ ಹೇಳಿದ್ದಾರೆ. ಅವರ ಮಾತು ಕೇಳಿ ಹೋಮ್ ಮಿನಿಸ್ಟರನ್ನು ಬದಲಿಸಿ. ಪ್ರಮೋದ್ ಮುತಾಲಿಕ್ ಅವರು ಸಹ ಹೋಮ್ ಮಿನಿಸ್ಟರ್ಗೆ ಬಯ್ಯುತ್ತಿದ್ದಾರೆ. ಗಂಡಸ್ತನ ತೋರಿಸಿ ಎಂದು ಸವಾಲು ಹಾಕಿದ್ದಾರೆ. ಅಡಿಯೋ ಬಿಡುಗಡೆ ಮಾಡಿದ ಬಳಿಕ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನಗೆ ಬೆದರಿಕೆ ಬರುತ್ತಿದೆ. ಅದಕ್ಕೆ ತಾಳೆಯಾಗುವಂತೆ ಸಿಐಡಿಯಿಂದ ನೋಟಿಸ್ ಬರುತ್ತೆ. ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಡಲಾಗುತ್ತಿದೆ,' ಎಂದು ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.
ದಿವ್ಯಾ ಹಾಗರಗಿ ಎಲ್ಲಿ ಎಂಬುದು ಇನ್ನೂ ಪತ್ತೆಯಿಲ್ಲ. ಇಲ್ಲಿಯವರೆಗೆ ಅವರನ್ನು ರಕ್ಷಣೆ ಮಾಡ್ತಿರೋದು ಯಾಕೆ ? ಪ್ರಮುಖ ಆರೋಪಿ ಎಲ್ಲಿದ್ದಾರೆ ಎಂಬುದನ್ನು ಮೊದಲು ಪತ್ತೆ ಮಾಡಿ. ಅವರನ್ನು ರಕ್ಷಣೆ ಮಾಡೋ ಕೆಲಸ ಮಾಡಬೇಡಿ. ಪ್ರಕರಣದ ತನಿಖೆಯನ್ನು ಗಂಭೀರವಾಗಿ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.
Recommended Video