ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ!
ಬೆಂಗಳೂರು, ಮೇ. 12: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸ್ ನೇಮಕಾತಿ ವಿಭಾಗದ ಮತ್ತೊಬ್ಬ ಅಧಿಕಾರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಐಡಿ ಸ್ಟ್ರಾಂಗ್ ರೂಮ್ ನಲ್ಲಿದ್ದ ಅಭ್ಯರ್ಥಿಗಳ ಒಎಂಆರ್ ಶೀಟ್ ಗಳ ತಿದ್ದುಪಡಿಗೆ ಈ ಅಧಿಕಾರಿಯೇ ಮೂಲ ಕಾರಣವಾಗಿದ್ದ ಎಂದು ಹೇಳಲಾಗಿದೆ.
2017ರಲ್ಲಿ ನಡೆದಿರುವ ಮೀಲು ಪಡೆ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಸಿಐಡಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅರ್ಎಸ್ಐ ಅಭ್ಯರ್ಥಿಗಳ ನೇಮಕಾತಿ ಅಕ್ರಮವನ್ನೂ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದಿಂದಲೇ ನಡೆಸಿರುವ ಬಗ್ಗೆ ಸಿಐಡಿಗೆ ಮಹತ್ವದ ಮಾಹಿತಿ ಕಲೆ ಹಾಕಿದೆ.
ಒಎಂಆರ್ ಪ್ರತಿ ತುಂಬಿದ್ದ ಬಾಕ್ಸ್ಗಳ ಭದ್ರತೆಗೆ ನಿಯೋಜನೆಗೊಂಡಿದ್ದ ಅಶಸ್ತ್ರ ಮೀಸಲು ಪಡೆಯ ಆರ್ಎಸ್ಐ ಲೋಕೇಶಪ್ಪ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಇವರು ನೀಡಿದ ಮಾಹಿತಿ ಮೇರೆಗೆ ಮತ್ತಷ್ಟು ಮಂದಿಯನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಮೂಲದ ಲೋಕೇಶಪ್ಪ
ಉತ್ತರ ಕರ್ನಾಟಕ ಮೂಲದ ಲೋಕೇಶಪ್ಪ ಹತ್ತು ವರ್ಷಗಳ ಕಾಲ ನಾಗರಿಕ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ 2017-18ನೇ ಸಾಲಿನಲ್ಲಿ ಆರ್ಎಸ್ಐ ನೇಮಕಾತಿಯಲ್ಲಿ ಎರಡನೇ ರ್ಯಾಂಕ್ ಪಡೆದು ಆಯ್ಕೆಗೊಂಡಿದ್ದು, ಮಂಗಳೂರಿನಲ್ಲಿ ಪ್ರೊಬೇಷನರಿಯಾಗಿದ್ದು, ಬಳಿಕ ಬೆಂಗಳೂರಿನ ಸಿಎಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಡಿವೈಎಸ್ಪಿ ಶಾಂತಕುಮಾರ್ ಸಲಹೆ ಮೇರೆಗೆ ನೇಮಕಾತಿ ವಿಭಾಗಕ್ಕೆ ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಡಿವೈಎಸ್ಪಿ ಶಾಂತಕುಮಾರ್ ಹಲವು ವರ್ಷಗಳಿಂದಲೂ ನೇಮಕಾತಿ ವಿಭಾಗದಲ್ಲಿ ಠಿಕಾಣಿ ಹೂಡಿದ್ದರು.
ಸ್ಟ್ರಾಂಗ್ ಕೊಠಡಿಯ ನಿರ್ವಹಣೆ ಲೋಕೇಶಪ್ಪ
ಸ್ಟ್ರಾಂಗ್ ಕೊಠಡಿಯ ನಿರ್ವಹಣೆ ಲೋಕೇಶಪ್ಪನಿಗೆ ನೀಡಲಾಗಿತ್ತು. ಶಾಂತಕುಮಾರ್ ಕಡೆಯ ಅಭ್ಯರ್ಥಿಗಳ ಒಎಂಆರ್ ಪ್ರತಿಗಳು ಯಾವ ಬಾಕ್ಸ್ನಲ್ಲಿ ಇಡಲಾಗಿದೆ, ಅವರ ರೋಲ್ ನಂಬರ್ ಏನು ಎಂಬುದು ಲೋಕೇಶಪ್ಪನಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸ್ಟ್ರಾಂಗ್ ರೂಮ್ನಲ್ಲಿ ಕೆಲ ಅಭ್ಯರ್ಥಿಗಳು, ಕೋಚಿಂಗ್ ಸೆಂಟರ್ನ ಶಿಕ್ಷಕರು ಹಾಗೂ ಮಧ್ಯವರ್ತಿಗಳ ಮೂಲಕ ಒಎಂಆರ್ ಶೀಟ್ಗಳ ತಿದ್ದುಪಡಿ ಮಾಡಿಸುತ್ತಿದ್ದರು. ಶಾಂತಕುಮಾರ್ ಸೂಚನೆ ಮೇರೆಗೆ ಲೋಕೇಶಪ್ಪ ಈ ಅವ್ಯವಹಾರ ನಡೆಸುತ್ತಿದ್ದರು ಎಂಬ ಸತ್ಯ ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
ಶಾಂತಕುಮಾರ್ಗೆ ಅಪಾರ ನಂಬಿಕೆ.
ಡಿವೈಎಸ್ಪಿ ಶಾಂತಕುಮಾರ್ ಸಶಸ್ತ್ರ ಮೀಸಲು ಪಡೆಯಿಂದ ಬಂದಿದ್ದರಿಂದ ನೇಮಕಾತಿ ವಿಭಾಗದಲ್ಲಿ ತನ್ನ ಕೆಳಗಿರುವ ಅಧಿಕಾರಿ-ಸಿಬ್ಬಂದಿಯನ್ನು ಅದೇ ವಿಭಾಗದಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಆರ್ಎಸ್ಐ ಲೋಕೇಶಪ್ಪ, ಶ್ರೀನಿವಾಸ್ ಹಾಗೂ ಹೆಡ್ ಕಾನ್ಸ್ಟೇಬಲ್ ಲೋಕೇಶ್ ಅವರನ್ನು ನೇಮಿಸಿಕೊಂಡಿದ್ದಾರೆ. ಅದರಲ್ಲೂ ಲೋಕೇಶಪ್ಪನ ಮೇಲೆ ಶಾಂತಕುಮಾರ್ಗೆ ಅಪಾರ ನಂಬಿಕೆ. ಹೀಗಾಗಿ ಸ್ಟ್ರಾಂಗ್ ಕೊಠಡಿಯ ಭದ್ರತೆ, ನಿರ್ವಹಣೆ ಲೋಕೇಶಪ್ಪನಿಗೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ತಡರಾತ್ರಿವರೆಗೂ ಕಾರ್ಯಾಚರಣೆ
ಮಂಗಳವಾರ ನೇಮಕಾತಿ ವಿಭಾಗದ ಎಫ್ಡಿಎ ಹರ್ಷ ಆರ್ಎಸ್ಐ ಶ್ರೀನಿವಾಸ್, ಹೆಡ್ ಕಾನ್ ಸ್ಟೇಬಲ್ ಲೋಕೇಶ್ ಮತ್ತು ಶ್ರೀಧರ್ ಬಂಧನಕ್ಕೆ ಒಳಗಾಗಿದ್ದರು. ಇದೀಗ ಲೋಕೇಶಪ್ಪ ಕೂಡ ಸಿಐಡಿ ಖೆಡ್ಡಾಗೆ ಬಿದ್ದಿದ್ದು, ಈ ಅಕ್ರಮದಲ್ಲಿ ಇನ್ನಷ್ಟು ಮಂದಿ ಬಂಧನಕ್ಕೆ ಒಳಗಾಗಲಿದ್ದಾರೆ. ಲೋಕೇಶಪ್ಪ ಪರಾರಿಯಾಗಲು ಯತ್ನಿಸಿದ್ದ. ಆದರೂ ಸಿಐಡಿ ಪೊಲೀಸರು ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Recommended Video