ನೇಮಕಾತಿ ವಿಭಾಗದ ಡಿವೈಎಸ್ಪಿ ಬಂಧನ ಬಳಿಕ "ಬಿಗ್ ಸರ್ " ಗಳಿಗೂ ವಿಚಾರಣೆ ಭೀತಿ !
ಬೆಂಗಳೂರು, ಮೇ. 13: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಬಂಧನವಾಗುತ್ತಿದ್ದಂತೆ ಎಡಿಜಿಪಿ ದರ್ಜೆಯ ಬಿಗ್ ಸರ್ ಗಳಿಗೆ ಭಯ ಶುರುವಾಗಿದೆ.
ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಪಿಎಸ್ಐ ದರ್ಜೆಯಿಂದಲೂ ನೇಮಕಾತಿ ವಿಭಾಗದಲ್ಲಿಯೇ ಕಾರ್ಯ ನಿರ್ವಹಿಸಿದ್ದಾರೆ. ಈತನ ಅಕ್ರಮಗಳು ಕೇವಲ ಪಿಎಸ್ಐಗೆ ಸೀಮಿತವಾಗಿಲ್ಲ. 2011 ರಿಂದಲೂ ಪೊಲೀಸ್ ಇಲಾಖೆಯಿಂದ ನಡೆದಿರುವ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವುದು ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಕುಮಾರ್ ಬಂಧನಕ್ಕೆ ಒಳಗಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ!
ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಅರಿವಿಗೆ ಬರದಂತೆ 2011 ರಿಂದಲೂ ಪೊಲೀಸ್ ಇಲಾಖೆ ನೇಮಕಾತಿ ವಿಭಾಗದಲ್ಲಿ ಅಕ್ರಮ ನಡೆದಿದ್ದು ಸಿಐಡಿ ಅಧಿಕಾರಿಗಳು ಮಹತ್ವದ ದಾಖಲೆ ಸಂಗ್ರಹಿಸಿದ್ದಾರೆ. ಡಿವೈಎಸ್ಪಿ ಶಾಂತಕುಮಾರ್ ಅವರೇ ಈ ಅಕ್ರಮದ ಸೂತ್ರಧಾರನಾಗಿದ್ದು, ಇಡೀ ಸೇವಾವಧಿ ಪೂರ್ತಿ ನೇಮಕಾತಿ ವಿಭಾಗದಲ್ಲಿಯೇ ಕಳೆದಿದ್ದಾರೆ. ಇದೀಗ ಪೊಲೀಸ್ ಇಲಾಖೆಯಲ್ಲಿ 2011 ರಿಂದ ನಡೆದಿರುವ ಅಕ್ರಮಗಳ ಬಗ್ಗೆ ಸಿಐಡಿ ಅಧಿಕಾರಿಗಳು ಸಾಕ್ಷಾಧಾರ ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಶರತ್ ರಾಮಣ್ಣ ರಾಜಕೀಯ ನಂಟು ಬಹಿರಂಗ!
ಶಾಂತಕುಮಾರ್ ಬಂಧನ ಖಚಿತವಾಗುತ್ತಿದ್ದಂತೆ 2011 ರಿಂದ ಇವರೆಗೆ ನೇಮಕಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಬಿಗ್ ಸರ್ ಗಳನ್ನು ವಿಚಾರಣೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ವಿಚಾರಣೆಗೂ ಮುನ್ನೂ ಸ್ಪಷ್ಟ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡುವುದು. ಸರ್ಕಾರದ ತೀರ್ಮಾನದ ಬಳಿಕ ಎಡಿಜಿಪಿ ದರ್ಜೆಯ ಬಿಗ್ ಸರ್ ಗಳನ್ನು ವಿಚಾರಣೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಶಾಂತಕುಮಾರ್ ಅಕ್ರಮದ ಹಣ ಎಲ್ಲಿ ?
ಡಿವೈಎಸ್ಪಿ ಶಾಂತ್ ಕುಮಾರ್ನನ್ನು ನೇಮಕಾತಿ ವಿಭಾಗದಿಂದ ದಿವಂಗತ ಐಪಿಎಸ್ ಅಧಿಕಾರಿ ಮಧುಕರಶೆಟ್ಟಿ ಅವರು ಹೊರ ಹಾಕಿದ್ದರು. ಮಧುಕರ ಶೆಟ್ಟಿ ಅವರು ನೇಮಕಾತಿ ವಿಭಾಗದಿಂದ ವರ್ಗಾವಣೆಯಾದ ಬಳಿಕ ಇದೇ ಶಾಂತಕುಮಾರ್ ಮತ್ತೆ ಅದೇ ಸ್ಥಾನಕ್ಕೆ ಬಂದು ಕೂತಿದ್ದ. ಹೀಗಾಗಿ ಈತ ಹಿರಿಯ ಐಪಿಎಸ್ ಅಧಿಕಾರಿಗಳ ಜತೆ ನಿಕಟ ಸಂಪರ್ಕದಲ್ಲಿದ್ದು, ಅಕ್ರಮದ ಪಾಲು ಬಿಗ್ ಸರ್ ಗಳಿಗೂ ಸಂದಾಯವಾಗಿದೆಯಾ ? ಅವರಿಗೂ ಪಿಎಸ್ಐ ನೇಮಕಾತಿ ಅಕ್ರಮ ಉರುಳಾಗಲಿದೆಯಾ ಎಂಬ ಅನುಮಾನ ಮೂಡಿಸಿದೆ.
ಶಾಂತ್ ಕುಮಾರ್ ಹೇಳಿಕೆ ಮಹತ್ವ :
ಸಿಐಡಿ ಆವರಣದಲ್ಲಿರುವ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ ನಲ್ಲಿ ಅಕ್ರಮ ಎಸಗಿರುವ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾದ ಅಮ್ರಿತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಅದಕ್ಕಿಂತಲೂ ಮೊದಲು ಶಾಂತಕುಮಾರ್ ಅವರು ನೀಡುವ ಹೇಳಿಕೆ ಮಹತ್ವ ಪಡೆದುಕೊಳ್ಳಲಿದ್ದು, ಆತ ನೀಡುವ ಹೇಳಿಕೆ ಅನುಗುಣವಾಗಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಅಮ್ರಿತ್ ಪೌಲ್ ಅವರನ್ನು ವಿಚಾರಣೇಗೆ ಒಳಪಡಿಸಲು ಚಿಂತನೆ ನಡೆದಿದೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಶಾಂತ ಕುಮಾರ್ ಅಕ್ರಮ ಬಗ್ಗೆ ಆರೋಪಿಗಳು ಬಾಯಿಬಿಟ್ಟ ಸತ್ಯ:
ಮೂರು ಪ್ರಕರಣದ ಕಿಂಗ್ ಪಿನ್ ಬಾಯಲ್ಲಿ ಶಾಂತಕುಮಾರ್ : ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಬಂಧನವಾಗುತ್ತಿದ್ದಂತೆ ಆರೋಪಿತ ಅಧಿಕಾರಿ ಜತೆ ಸಂಪರ್ಕ ಸಾಧಿಸಿದ್ದ ರಾಜಕಾರಣಿಗಳು ಹಾಗೂ ಕಿಂಗ್ ಪಿನ್ ಗಳಿಗೆ ನಡುಕ ಶುರುವಾಗಿದೆ. ಬಂಧನದ ಭೀತಿ ಎದುರಾಗಿದೆ. 2011 ರಿಂದಲೂ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಸಂಬಂಧ ಸಿಐಡಿ ಅಧಿಕಾರಿಗಳಿಗೆ ಸಾಕ್ಷಾಧಾರಗಳು ಲಭ್ಯವಾಗಿದ್ದು, ಈ ಕುರಿತ ಮಾಹಿತಿ ಕಲೆ ಹಾಕಿದ್ದಾರೆ. ಶಾಂತಕುಮಾರ್ ಪ್ರತಿ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಅನುಮಾನವನ್ನು ಸಿಐಡಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೂ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಮೂರು ಪ್ರಕರಣದಲ್ಲಿ ಬಂಧಿತ ಕಿಂಗ್ಪಿನ್ ಗಳು ಶಾಂತ್ ಕುಮಾರ್ ಸಂಪರ್ಕ ಹಾಗೂ ಹಣ ಪಾವತಿ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಲಡ್ಡು ಜತೆ ಹೋದ ಬಾಯಿ ಇನ್ನೂ ನಾಪತ್ತೆ:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಕಿಂಗ್ಪಿನ್ ಮಂಜುನಾಥ್ ಮೇಳಕುಂದಿಯ ಸಹೋದರ ರವೀಂದ್ರ ಹಾಗೂ ಪಿಎಸ್ಐ ಕ್ಯಾಂಡಿಡೇಟ್ ಶಾಂತಾಬಾಯಿ ಇನ್ನೂ ಸಿಐಡಿ ಪೊಲೀಸರ ಕೈಗೆ ಸಿಕ್ಕಿಲ್ಲ. ಇಬ್ಬರಿಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸಿಐಡಿ ಮುಂದೆ ಶರಣಾಗಿದ್ದ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ ಸಹೋದರ ರವೀಂದ್ರನಿಗಾಗಿ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾಗಿ ಹದಿನೇಳು ದಿನವಾದರೂ ಆತ ಪತ್ತೆಯಾಗಿಲ್ಲ. ಒಂದು ತಿಂಗಳಿನಿಂದ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದಾನೆ. ಅರೆಸ್ಟ್ ವಾರಂಟ್ ಬಳಿಕವೂ ಪತ್ತೆಯಾಗದ ರವೀಂದ್ರನ ಬಗ್ಗೆ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತರಲಿದ್ದು, ಘೋಷಿತ ಅಪರಾಧಿ ಎಂದು ಪರಿಗಣಿಸುವ ಸಾಧ್ಯತೆಯಿದೆ.
ಘೋಷಿತ ಅಪರಾಧಿಗಳು ಎಂದು ಪರಿಗಣನೆ:
ಮಂಜುನಾಥ್ ಮೇಳಕುಂದಿ ಜತೆ ಡೀಲ್ ಕುದುರಿಸಿ ಪಿಎಸ್ಐ ಆಗಿ ನೇಮಕವಾದ ಬಳಿಕ ತಿರುಪತಿ ಲಡ್ಡು ಕೊಟ್ಟಿದ್ದ ಶಾಂತಬಾಯಿ ಮತ್ತು ಆಕೆಯ ಪತಿ ಕೂಡ ಒಂದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದಾರೆ. ಈ ದಂಪತಿ ಕೂಡ ಸಿಐಡಿ ಪೊಲೀಸರ ಕೈಗೆ ಸಿಕ್ಕಿಲ್ಲ. ಮೂಲತಃ ಮಹಾರಾಷ್ಟ್ರ ಮೂಲದ ಶಾಂತಾಬಾಯಿ ಪತಿ ಹಾಗೂ ಮಕ್ಕಳ ಸಮೇತ ಎಸ್ಕೇಪ್ ಆಗಿದ್ದಾರೆ. ಸಣ್ಣ ಸುಳಿವು ಸಿಗದೇ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದಾಳೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಜುನಾಥ್ ಮೇಳಕುಂದಿ ಬಳಿ ಪಿಎಸ್ಐ ಡೀಲ್ ಕುದರಿಸಿದ್ದ ಶಾಂತಾಬಾಯಿ, ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡಿದ್ದರು. ಆನಂತರ ತಿರುಪತಿ ಲಡ್ಡು ಮಂಜುನಾಥ್ ಮೇಳಕುಂದಿಗೆ ಕೊಟ್ಟಿದ್ದಳು. ಡೀಲ್ ಹಣ ಕೊಡುವ ಮೊದಲೇ ಪಿಎಸ್ಐ ಅಕ್ರಮ ಬಯಲಿಗೆ ಬಂದಿದ್ದು, ಅಂದಿನಿಂದಲೇ ಶಾಂತಾಬಾಯಿ ತಲೆ ಮರೆಸಿಕೊಂಡಿದ್ದಾಳೆ.