ರಕ್ತದಲ್ಲಿ ಪತ್ರ ಬರೆದರೂ ಪಿಎಸ್ಐ ಮರು ಪರೀಕ್ಷೆ ಅನಿವಾರ್ಯ: ಆರಗ ಜ್ಞಾನೇಂದ್ರ
ರಾಮನಗರ, ಮೇ. 19: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಾನಾ ರೀತಿಯ ಅಕ್ರಮ ನಡೆದಿರುವ ಕಾರಣ ಮರು ಪರೀಕ್ಷೆ ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಕಷ್ಟು ಪಟ್ಟು ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದ ಗೃಹ ಸಚಿವರು ಕೊನೆಗೂ ಕೈ ಎತ್ತಿದ್ದಾರೆ.
ರಾಮನಗರ ಪೊಲೀಸ್ ಅಧೀಕ್ಷಕ ಕಚೇರಿಯಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರ ಬಳಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಪರೀಕ್ಷೆಯ ಸಂಬಂಧ ಒಂದು ಕೇಂದ್ರದಲ್ಲಿ ಅಕ್ರಮ ನಡೆದಿಲ್ಲ. ನಾನಾ ಕಡೆ ವಿವಿಧ ರೂಪದಲ್ಲಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಕಷ್ಟ ಪಟ್ಟು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ವಿಚಾರದಲ್ಲಿ ನಾವು ಅಸಹಾಯಕರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಿಎಸ್ಐ ಅಭ್ಯರ್ಥಿಗಳು ರಕ್ತದಲ್ಲಿ ಪತ್ರ ಬರೆದಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಕ್ರಮ ಕೇವಲ ಒಂದು ಪರೀಕ್ಷಾ ಕೇಂದ್ರಕ್ಕೆ ಸೀಮಿತವಾಗಿಲ್ಲ. ಒಂದು ಕೇಂದ್ರದಲ್ಲಿ ಅಕ್ರಮ ನಡೆದಿದ್ದರೆ ಕ್ರಮ ಜರುಗಿಸಬಹುದಿತ್ತು. ಆದರೆ ಇಲಾಖೆಯ ಕೇಂದ್ರ ಕಚೇರಿಯ ಒಎಂಆರ್ ಶೀಟ್ ನಲ್ಲಿ ಪ್ರತಿಗಳನ್ನು ತಿದ್ದುಪಡಿ ಮಾಡಲಾಗಿದೆ. ಬ್ಲೂಟೂತ್ ಬಳಿಸಿ ಅಕ್ರಮ ಎಸಗಲಾಗಿದೆ. ಹೀಗಾಗಿ ಮರು ಪರೀಕ್ಷೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಹಿಂದೆ ಕೂಡ ಹಲವು ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ. ಆದ್ರೆ ಸರ್ಕಾರಗಳು ಕ್ರಮ ಜರುಗಿಸಿರಲಿಲ್ಲ. ಈ ಬಾರಿ ಪರೀಕ್ಷಾ ಅಕ್ರಮಕ್ಕೆ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ಡಿವೈಎಸ್ಪಿ ದರ್ಜೆಯ ಅಧಿಕಾರಿಗಳ ಸಮೇತ ಬಂಧಿಸಿದ್ದೇವೆ. ಮುಕ್ತ ತನಿಖೆ ಮಾಡಿ ಕ್ರಮ ಜರುಗಿಸುಲು ಸಿಐಡಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
Recommended Video