Breaking: ಅಮೃತ್ ಪೌಲ್ ಐಪಿಎಸ್ ಎಡಿಜಿಪಿ ಸ್ಥಾನದಿಂದ ಅಮಾನತು
ಬೆಂಗಳೂರು, ಜುಲೈ 04: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದೆ. ಸದ್ಯ 10 ದಿನಗಳ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಈ ನಡುವೆ ಸೋಮವಾರ ರಾತ್ರಿ ವೇಳೆಗೆ ಬೊಮ್ಮಾಯಿ ಸರ್ಕಾರ ಮತ್ತೊಂದು ಮಹತ್ವ ನಡೆ ಇಟ್ಟಿದ್ದು, ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಸೋಮವಾರದಂದು ಪ್ರಮುಖ ಅಧಿಕಾರಿಯನ್ನು ಸಿಐಡಿ ಅಧಿಕಾರಿ ಬಂಧನವಾಗಿದ್ದೇ ಹೊಸ ಇತಿಹಾಸ ನಿರ್ಮಾಣವಾದ ಸುದ್ದಿಯಾಗಿತ್ತು. ಇದಕ್ಕೆ ಪೂರಕವಾದ ಬೆಳವಣಿಗೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಡಿಜಿಪಿ ಸ್ಥಾನದಿಂದ ಅಮೃತ್ ಪೌಲ್ ರನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. 95ರ ಕೇಡರ್ ಅಧಿಕಾರಿ ಅಮೃತ್ ಪೌಲ್ ರನ್ನು ಅಮಾನತುಗೊಳಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಎಸ್ಐ ನೇಮಕಾತಿ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ ಸೋರಿಕೆಯಾಗಿದೆ ಎಂಬ ಸ್ಫೋಟಕ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪೊಲೀಸ್ ನೇಮಕಾತಿ ವಿಭಾಗದ ಕಚೇರಿ ಅಂದರೆ, ಅಮೃತ್ ಪಾಲ್ ಅವರ ಅಧಿಕೃತ ಕಚೇರಿಯಲ್ಲಿ ಒಎಂಆರ್ ಶೀಟ್ ತಿದ್ದಲಾಗಿದೆ ಎಂಬುದು ಇದೀಗ ಸಾಬೀತಾಗಿದ್ದು, ಈ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಬಂಧನ ಮಾಡಲಾಗಿದೆ.
1995 ನೇ ಬಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಮಂಗಳೂರು ಸೇರಿದಂತೆ ವಿವಿಧ ರೇಂಜ್ ಗಳ ಐಜಿಪಿಯಾಗಿ ಅಮೃತ್ ಪೌಲ್ ಕಾರ್ಯ ನಿರ್ವಹಿಸಿದ್ದರು. ಪೊಲೀಸ್ ಕಮೀಷನರ್ ಹುದ್ದೆ ನಿರೀಕ್ಷೆಯಲ್ಲಿದ್ದರು. ಆರಂಭದಲ್ಲಿ ಅಮೃತ್ ಪೌಲ್ ಕೈವಾಡದ ಬಗ್ಗೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿರಲಿಲ್ಲ. ಡಿವೈಎಸ್ಪಿ ಶಾಂತಕುಮಾರ್ ಬಂಧನದ ಬಳಿಕ ನೇಮಕಾತಿ ವಿಭಾಗದಲ್ಲಿ ನಡೆದಿರುವ ಅಕ್ರಮ ಬೆಳಕಿಗೆ ಬಂದಿತ್ತು
ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ ನಲ್ಲಿಯೇ ಒಎಂಆರ್ ಶೀಟ್ ಗಳನ್ನು ತಿದ್ದುಪಡಿ ಮಾಡಲಾಗಿದೆ. ಕಿಂಗ್ ಪಿನ್ ಗಳು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಅವರ ಜತೆ ನಿರಂತರ ಸಂಪರ್ಕದಲ್ಲಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಬಂಧನಕ್ಕೆ ಒಳಗಾಗಿರುವ ಶಾಂತಕುಮಾರ್ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥರ ನಡುವೆ ಅನೇಕ ದೂರವಾಣಿ ಕರೆಗಳ ವಿನಿಮಯ ಆಗಿರುವುದನ್ನು ಸಿಐಡಿ ಪತ್ತೆ ಮಾಡಿದೆ. ಪಿಎಸ್ಐ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾನಾ ಬಗೆಯ ಅಕ್ರಮಗಳು ನಡೆದಿವೆ.
ಒಂದೆಡೆ ಪರೀಕ್ಷಾ ಕೇಂದ್ರದಲ್ಲಿಯೇ ವಿದ್ಯಾರ್ಥಿಗಳ ಉತ್ತರ ಹಾಳೆಗಳನ್ನು ಪಡೆದು ಸರಿ ಉತ್ತರ ತುಂಬಿಸಿ ಅಕ್ರಮ ಎಸಗಲಾಗಿದೆ. ಇನ್ನೊಂದೆಡೆ ಬ್ಲೂಟೂತ್ ಉಪಕರಣ ಇಟ್ಟುಕೊಂಡು ಪರೀಕ್ಷೆ ಬರೆದು ಪಿಎಸ್ಐ ಹುದ್ದೆಗೆ ನೇಮಕವಾಗಿದ್ದಾರೆ. ಇಷ್ಟೆಲ್ಲಾ ಅಕ್ರಮಗಳು ನಡೆಯಲು ಕಾರಣ ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದಿಂದ ಎತ್ತಂಗಡಿ ಮಾಡಲಾಗಿತ್ತು. ನಂತರ ಬಂಧನ ಹಾಗೂ ಅಮಾನತು ಮಾಡಲಾಗಿದೆ.
ಒಂದು ವೇಳೆ ನೇಮಕಾತಿ ವಿಭಾಗದಲ್ಲಿ ಸರಿಯಾಗಿ ಬಿಗಿ ಕ್ರಮ ಜರುಗಿಸಿದ್ದರೆ ಈ ಅಕ್ರಮ ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಪೊಲೀಸ್ ವಲಯದಲ್ಲಿ ಚರ್ಚ್ ನಡೆದಿದೆ. ಎಡಿಜಿಪಿ ದರ್ಜೆಯ ಅಧಿಕಾರಿಯಾಗಿ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ಮಾಡಿಸಬೇಕಿತ್ತು. ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಕರ್ತವ್ಯಲೋಪದಿಂದಲೇ ಪರೀಕ್ಷೆಯಲ್ಲಿ ಅಕ್ರಮ ನಡೆಯಲು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Recommended Video