ಪಿಎಸ್ಐ ನೇಮಕಾತಿ ಹಗರಣ; ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಮೇ 4 : ಪಿಎಸ್ಐ ಅಕ್ರಮ ನೇಮಕಾತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಚಿವ ಅಶ್ವತ್ಥ ನಾರಾಯಣ ವಿರುದ್ದ ಹರಿಹಾಯ್ದಿದ್ದಾರೆ. ಹಗರಣದ ಬಗ್ಗೆ ಸಿಐಡಿ ತನಿಖೆ ಬದಲು ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸರ್ಕಾರ ಜನಸಮಾನ್ಯರ ಪೀಡಕ ಸರ್ಕಾರ, 40% ಭ್ರಷ್ಟಾಚಾರದ ಸರ್ಕಾರ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪಿಎಸ್ಐ ನೇಮಕಾತಿ ಹಗರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಡಾ. ಅಶ್ವತ್ಥ್ ನಾರಾಯಣ ರಾಜೀನಾಮೆಗೂ ಒತ್ತಾಯಿಸಿದರು.
ಬುಧವಾರ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. "ನಿನ್ನೆ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರು. ಬೊಮ್ಮಾಯಿ ಸರ್ಕಾರಕ್ಕೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಅರುಣ್ ಸಿಂಗ್ ಬೊಮ್ಮಾಯಿ ಜನಸಾಮಾನ್ಯರ ಸಿಎಂ ಅಂದಿದ್ದಾರೆ, 40% ಕಮಿಷನ್ ಸರ್ಕಾರ ರಾಜ್ಯದಲ್ಲಿ ಇದೆ. ಅಮಿತ್ ಶಾ, ಮೋದಿ, ಅರುಣ್ ಸಿಂಗ್ ಭ್ರಷ್ಟಾಚಾರಕ್ಕೆ ಮುದ್ರೆ ಒತ್ತಿದ್ದಾರೆ" ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪಿಎಸ್ಐ ಅಕ್ರಮ: ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
"ಗುತ್ತಿಗೆದಾರರು ಭ್ರಷ್ಟಾಚಾರ ಇದೆ ಅಂದಿದ್ದಾರೆ. ಸಂತೋಷ ಪಾಟೀಲ್ ಭ್ರಷ್ಟಾಚಾರ ಇದೆ ಅಂತ ಆತ್ಮಹತ್ಯೆ ಮಾಡಿಕೊಂಡರು, ದಿಂಗಾಲೇಶ್ವರ ಸ್ವಾಮೀಜಿ ಕೂಡ ಭ್ರಷ್ಟಾಚಾರ ಬಗ್ಗೆ ಮಾತನಾಡಿದರು, ಗೋಶಾಲೆ ಗುತ್ತಿಗೆಗೆ 40% ಕಮಿಷನ್ ಆರೋಪ ಬಂತು, ಜನಸಾಮಾನ್ಯರು ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. 40% ಕಮಿಷನ್ ಸರ್ಕಾರ ಅಂತಿದ್ದಾರೆ. ಕೇಂದ್ರ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದೆ" ಎಂದು ಸಿದ್ದರಾಮಯ್ಯ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ದ ಆರೋಪ ಮಾಡಿದರು.
ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ
"ಪ್ರಧಾನಿ ಮೋದಿ 40% ಕಮಿಷನ್ ಪಡೆಯೋಕೆ ಪರ್ಮಿಷನ್ ಕೊಟ್ಟಿದ್ದಾರೆ. ಗುತ್ತಿಗೆದಾರರು ಮೋದಿಗೆ ಪತ್ರ ಬರೆದರೂ ಕ್ರಮ ಆಗಿಲ್ಲ, ಯಾವುದೇ ತನಿಖೆಗೆ ಆದೇಶ ಮಾಡಿಲ್ಲ. ಮೋದಿ ಕಾವೂಂಗಾ ಕಾನೆದೂಂಗಾ ಅಂತಾರೆ, ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಾರೆ, ಚೌಕಿದಾರ ಅಂತ ಬಿಲ್ಡಪ್ ಕೊಡುತ್ತಾರೆ. ಈಗ ಬೊಮ್ಮಾಯಿ ಗೆ ಬೆನ್ನು ತಟ್ಟುತ್ತಿದ್ದಾರೆ. ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ, ಪಿಎಸ್ಐ ಪರೀಕ್ಷೆಯಲ್ಲಿ ಹಗರಣ ಆಗಿದೆ. 545 ಜನರು ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆದಿದೆ ಅಂತ ಸರ್ಕಾರ ಒಪ್ಪಿಕೊಂಡಿದೆ. ಆಯ್ಕೆ ಲಿಸ್ಟ್ ಸರ್ಕಾರ ರದ್ದು ಮಾಡಿದೆ. ಮರು ಪರೀಕ್ಷೆಗೆ ಅವಕಾಶ ಕೊಟ್ಟಿದ್ದಾರೆ. ಇದರ ಅರ್ಥ ಭ್ರಷ್ಟಾಚಾರವನ್ನು ಸರ್ಕಾರ ಒಪ್ಪಿಕೊಂಡಿದೆ. ಅಮೃತ ಪೌಲ್ ಎಂಬ ಎಡಿಜಿಪಿ ವರ್ಗಾವಣೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಇಲಾಖೆಗೆ ವರ್ಗಾವಣೆ ಆಗಿದೆ, ಶಾಂತ ಕುಮಾರ್ ಎಂಬ ಅಧಿಕಾರಿ ಕೂಡ ವರ್ಗಾವಣೆ ಮಾಡಿದ್ದಾರೆ. ಇದರ ಅರ್ಥ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ" ಎಂದು ಸಿದ್ದರಾಮಯ್ಯ ದೂರಿದರು.
ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ
"ಪರೀಕ್ಷಾ ಕೇಂದ್ರ ಇವರೇ ಸೆಲೆಕ್ಟ್ ಮಾಡಿದ್ದಾರೆ. ದಿವ್ಯಾ ಹಾಗರಗಿ ಮೇಲೆ ಕೇಸ್ ಆಗಿದೆ. ಕೇವಲ ಕೆಲವು ಜನರ ಮೇಲೆ ಕೇಸ್ ಆಗಿದೆ. ಉಳಿದವರ ಮೇಲೆ ಯಾಕೆ ಕ್ರಮ ಆಗಿಲ್ಲ?. ಇದಕ್ಕೆ ಜವಾಬ್ದಾರಿ ಯಾರ ಮೇಲಿದೆ ಗೃಹ ಸಚಿವ ಆರಗ ಜ್ಞಾನೆಂದ್ರ ಏನು ಮಾಡುತ್ತಿದ್ದಾರೆ?. ಫೆಬ್ರವರಿ ತಿಂಗಳಲ್ಲಿ ಪ್ರಭು ಚೌವ್ಹಾಣ್ ಕೂಡ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸಿಎಂಗೆ ಪತ್ರ ಬರೆದು ಪರೀಕ್ಷೆ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಎಂಎಲ್ಸಿ ಸಂಕನೂರು ಕೂಡ ಪತ್ರ ಬರೆದು ಯಾದಗಿರಿ ಒಬ್ಬ ವ್ಯಕ್ತಿ ಸೂತ್ರಧಾರಿ ಆಗಿದ್ದಾನೆ. ಅಕ್ರಮದ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಎಲ್ಲಾ ಅವರ ಪಕ್ಷದ ಸದಸ್ಯರು ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಸದಸ್ಯ ಎಸ್. ರವಿ ಕೂಡ ಪರಿಷತ್ನಲ್ಲಿ ಪ್ರಶ್ನೆ ಕೇಳಿದ್ದರು. ಅಭ್ಯರ್ಥಿಗಳು ಅರ್ಹತೆ ಮೇಲೆ ಅಂಕ ಪಡೆದಿದ್ದಾರೆ ದೂರಿನಲ್ಲಿ ಯಾವುದೇ ಹುರಲಿಲ್ಲ ಅಂತ ತನಿಖೆ ಮಾಡದೇ ಉತ್ತರ ಕೊಟ್ಟಿದ್ದಾರೆ" ಎಂದು ಸಿದ್ದರಾಮಯ್ಯ ಆರೋಪಿಸಿದರು.
ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ ರಾಜೀನಾಮೆ ಆಗ್ರಹ
"ಸರ್ಕಾರ ಬಂದ ಮೇಲೆ ಒಂದಾದ ಮೇಲೆ ಒಂದು ಹಗರಣ ನಡೆದಿವೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಗರಣ ಆಗಿದೆ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮ ಆಗಿದೆ. ಸೌಮ್ಯ ಮತ್ತು ನಾಗರಾಜ್ ಬಂಧನ ಆಗಿದೆ. ಹೀಗಾಗಿ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು. ಪಿಎಸ್ಐ ಹಗರಣದಲ್ಲಿ ಅಶ್ವತ್ಥ ನಾರಾಯಣ ಕೈವಾಡವಿದೆ, ದರ್ಶನ ಗೌಡಗೆ 5ನೇ ಶ್ರೇಯಾಂಕ ಬಂದಿದೆ, ಮೊದಲ ಪೇಪರ್ನಲ್ಲಿ 50 ಕ್ಕೆ 19 ಮಾರ್ಕ್ಸ್ ಬಂದಿದೆ. 2ನೇ ಪತ್ರಿಕೆಯಲ್ಲಿ 150 ಕ್ಕೆ 141 ಅಂಕ ಬಂದಿದೆ. ನೋಡಿ ಅವನು ಎಷ್ಟು ಬುದ್ದಿವಂತ ಅಂತ ಇದು ಹೇಗೆ ಸಾಧ್ಯ ಆಯ್ತು?. ನಾಗೇಶ್ಗೆ ಮೊದಲ ಪೇಪರ್ನಲ್ಲಿ 29 ಅಂಕ, 2ನೇ ಪೇಪರ್ನಲ್ಲಿ 119 ಅಂಕ ಬಂದಿದೆ. ಒಂದು ಬ್ಲೂಟೂತ್ ಕೊಟ್ಟು ಬರೆಸಿದ್ದಾರೆ, ಇಲ್ಲವೇ ಖಾಲಿ ಪೆಪರ್ ಮೇಲೆ ಇವರೇ ಬರೆಸಿದ್ದಾರೆ. ಇಬ್ಬರನ್ನೂ ವಿಚಾರಣೆಗೆ ಕರೆದು ವಾಪಸ್ಸು ಬಿಟ್ಟಿದ್ದಾರೆ. ಒಬ್ಬ ಮಾಗಡಿ, ಮತ್ತೊಬ್ಬ ಕುಣಿಗಲ್ನವನು ಸಾಕ್ಷ್ಯ ಇಲ್ಲದೇ ನೋಟಿಸ್ ಕೊಡಲು ಸಾಧ್ಯವಿಲ್ಲ. ವಿಚಾರಣೆಗೆ ಕರೆದ ಮೇಲೆ ಆರೋಪಿಗಳನ್ನು ಬಿಟ್ಟು ಬಿಟ್ಟಿದ್ದಾರೆ" ಎಂದು ಹಗರಣದ ವಿಚಾರವಾಗಿ ಸರ್ಕಾರವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಅಕ್ರಮದಲ್ಲಿ ರಾಜಕಾರಣಿ ಮತ್ತು ಅಧಿಕಾರಿಗಳು ಶಾಮೀಲು
"ಅಕ್ರಮದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. 300 ಕೋಟಿ ಅವ್ಯವಹಾರ ನಡೆದಿದೆ, ಈಗ ಸಿಐಡಿಯಿಂದ ತನಿಖೆ ಆಗುತ್ತಿದೆ. ಹಾಗಾಗಿ ಸರಿಯಾಗಿ ತನಿಖೆ ನಡೆಯಲು ಸಾಧ್ಯವಿಲ್ಲ. ಆದರಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆಗಬೇಕು" ಎಂದು ಸಿದ್ದರಾಮಯ್ಯ ಒತ್ತಾಯಸಿದರು.
"ಜನರು ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ಜನಸಾಮಾನ್ಯರ ಪೀಡಕ ಸರ್ಕಾರವಿದು. ಮೋದಿ ಇನ್ನೂ ಮುಂದೆ ನಾಟಕ ಮಾಡಬಾರದು ಕೂಡಲೇ ಈ ಪ್ರಕರಣದ ತನಿಖೆಯಾಗಬೇಕು" ಎಂದು ಸಿದ್ದರಾಮಯ್ಯ ಹೇಳಿದರು.
Recommended Video