ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ 'ಬಿಗ್ ಸರ್'ಶಾಮೀಲು?
ಬೆಂಗಳೂರು, ಮೇ. 1: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ಗಳ ಸಂಪರ್ಕ ಸೇತುವೆಯಾಗಿ ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಕಾರ್ಯ ನಿರ್ವಹಿಸಿರುವುದು ಸಿಐಡಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಪಿಎಸ್ಐ ಅಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಾಮೀಲಾಗಿರುವ ಅರೋಪ ಕೇಳಿ ಬಂದಿದ್ದು, ದಾಖಲೆಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ಹಣ ಪಡೆದು ಪಿಎಸ್ಐ ಹುದ್ದೆ ಕೊಡಿಸುವ ಅಭ್ಯರ್ಥಿಗಳನ್ನು ನೀರಾವರಿ ಇಲಾಖೆಯ ಮಂಜುನಾಥ್ ಮೇಳಕುಂದಿ ಹುಡುಕುತ್ತಿದ್ದ. ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಜತೆಗೆ ಎಲೆಕ್ಟ್ರಿಕ್ ಉಪಕರಣಗಳನ್ನು ಒದಗಿಸುವ ಕಾರ್ಯವನ್ನು ರುದ್ರಗೌಡ ಪಾಟೀಲ್ (ಆರ್.ಡಿ ಪಾಟೀಲ್) ಮಾಡುತ್ತಿದ್ದ. ಇದರ ಜತೆಗೆ ದೊಡ್ಡವರ ಸಂಪರ್ಕ ಕೂಡ ಸಾಧಿಸಿ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಗೂ ಮುನ್ನ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದ. ಇನ್ನು ಪಿಎಸ್ಐ ಪರೀಕ್ಷೆಯಲ್ಲಿ ಯಾವೆಲ್ಲಾ ರೂಪದಲ್ಲಿ ಅಕ್ರಮ ಎಸಗಿ ಹಣ ಕೊಟ್ಟ ಅಭ್ಯರ್ಥಿಗಳನ್ನು ಪಾಸು ಮಾಡಬೇಕು ಎಂಬುದನ್ನು ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆ ಮುಖ್ಯ ಶಿಕ್ಷಕ ಕಾಶಿನಾಥ್ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
Breaking; ಪಿಎಸ್ಐ ಹಗರಣ; ದಿವ್ಯಾ ಹಾಗರಗಿ 11 ದಿನ ಸಿಐಡಿ ವಶಕ್ಕೆ
ಪರೀಕ್ಷಾ ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿ ವಿಚಾರಣೆ ವೇಳೆ ಇಂತಹ ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಪರೀಕ್ಷೆಗೂ ಮೊದಲೇ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸುವ ಬಗ್ಗೆ ಈ ಗ್ಯಾಂಗ್ ಪ್ಲಾನ್ ಮಾಡಿತ್ತು ಎಂಬ ವಿಚಾರವೂ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಿಎಸ್ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸಂಪರ್ಕ'ಸೇತು'ಗಳಿಗೆ ನಡುಕ ಶುರು!
ಸಂಪರ್ಕ ಸೇತುವಾಗಿ ಕಾಶಿನಾಥ್
ದಿವ್ಯಾ ಹಾಗರಗಿ, ರುದ್ರಗೌಡ ಪಾಟೀಲ, ಮಂಜುನಾಥ್ ಮೇಳಕುಂದಿ ಹಾಗೂ ಅಭ್ಯರ್ಥಿಗಳಿಗೆ ಸಂಪರ್ಕ ಸೇತುವಾಗಿ ಕಾಶಿನಾಥ್ ಕಾರ್ಯ ನಿರ್ವಹಿಸಿದ್ದ ವಿಚಾರವನ್ನು ದಿವ್ಯ ಹಾಗರಗಿ ಸಿಐಡಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಅಕ್ರಮದ ಕುರಿತು ಪೂರ್ಣ ಮಾಹಿತಿಯನ್ನು ದಿವ್ಯಾ ಬಾಯಿ ಬಿಡುತ್ತಿಲ್ಲ. ಈಕೆಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದು, ನಿರೀಕ್ಷಿತ ಮಾಹಿತಿಯನ್ನು ಇನ್ನೂ ಪಡೆಯಲಾಗುತ್ತಿಲ್ಲ ಎಂದು ಸಿಐಡಿ ಅಧಿಕಾರಿ ಮೂಲಗಳು ತಿಳಿಸಿವೆ.
ಹದಿನೆಂಟು ದಿನ ದೇವರ ಮೊರೆ:
ಪ್ರಭಾವಿ ರಾಜಕೀಯ ನಾಯಕರ ನಂಟಸ್ತನ ಇದೆ ಎಂದು ಬಿಂಬಿಸಿಕೊಂಡಿದ್ದ ದಿವ್ಯಾ ಹಾಗರಗಿ ಅಕ್ರಮ ಆಗುತ್ತಿದ್ದಂತೆ ಪರಾರಿಯಾಗಿದ್ದರು. ಹದಿನೆಂಟು ದಿನ ಸಿಐಡಿ ಪೊಲೀಸರ ಕಣ್ಣಿಗೆ ಬಿದ್ದಿರಲಿಲ್ಲ. ಅಂತಿಮವಾಗಿ ಪುಣೆಯ ಉದ್ಯಮಿ ಮನೆಯಲ್ಲಿ ತಲೆ ಮರೆಸಿಕೊಂಡಿದ್ದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದರು. ಅದಕ್ಕೂ ಮುನ್ನ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಭೇಟಿ ಮಾಡಿ ಸಿದ್ದರಾಮೇಶ್ವರ ದರ್ಶನ ಪಡೆದು ಸಂಕಷ್ಟದಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದಾರೆ. ಆ ಬಳಿಕ ಗುಜರಾತ್ಗೆ ಹೋಗಿದ್ದು ಅಲ್ಲಿ ಕೆಲವು ದಿನ ತಲೆ ಮರೆಸಿಕೊಂಡಿದ್ದರು. ದಿವ್ಯಾ ಹಾಗರಗಿ ಬಂಧಿತ ಸಹಚರೆ ನೀಡಿದ ಮಾಹಿತಿ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ.
ಹಿರಿಯ ಸರ್ ಶಾಮೀಲು
ಇನ್ನು ಅಕ್ರಮದ ಕಿಂಗ್ಪಿನ್ ದಿವ್ಯಾ ಹಾಗರಗಿ ಬಂಧನಕ್ಕೆ ಒಳಗಾಗುತ್ತಿದ್ದಂತೆ ಕಿಂಗ್ ಪಿನ್ ಆರ್. ಡಿ. ಪಾಟೀಲ್ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾನೆ. ಭಾನುವಾರ ಪಾಟೀಲ ಸಹೋದರರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ.
ಹಿರಿಯ ಸರ್ ಗಳ ಶಾಮೀಲು: 545 ಪಿಎಸ್ಐ ನೇಮಕಾತಿಗಳ ಅಕ್ರಮಕ್ಕೆ ಸಂಬಂಧಿಸಿದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಂದ ಸಂಗ್ರಹಿಸಿದ ಲಕ್ಷ ಲಕ್ಷ ಹಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಂದಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತ ದಾಖಲೆಗಳ ಸಂಗ್ರಹಕ್ಕೆ ಸಿಐಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಅಭ್ಯರ್ಥಿಗಳಿಂದ ನಗದು ರೂಪ
ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಪಾಟೀಲ್ ಸಹೋದರರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕವಿದೆ. ಅಭ್ಯರ್ಥಿಗಳಿಂದ ಸಂಗ್ರಹಿಸಿದ ಹಣದಲ್ಲಿ ಅವರಿಗೂ ಸಂದಾಯ ಆಗಿರುವ ಸಂಶಯ ತನಿಖೆಯಲ್ಲಿ ವ್ಯಕ್ತವಾಗಿದೆ. ವೀರೇಶ್ ನಿಡಗುಂದಾ, ಅರುಣ ಪಾಟೀಲ್, ಪ್ರವೀಣ್ ಕುಮಾರ್, ಚೇತನ್ ನಂದಗಾವ್ ಸೇರಿದಂತೆ ಅಭ್ಯರ್ಥಿಗಳಿಂದ ನಗದು ರೂಪದಲ್ಲಿ ಪಾಟೀಲ್ ಸಹೋದರರು ಪಡೆದಿದ್ದು, ಈ ಕುರಿತ ಸಾಕ್ಷಾಧಾರಗಳ ಸಂಗ್ರಹಕ್ಕೆ ಸಿಐಡಿ ಮುಂದಾಗಿದೆ.
ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸೇರಿದಂತೆ 23 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆಯಿಂದ ಬಯಲಾಗಿರುವ ದೊಡ್ಡ ದೊಡ್ಡ ಕುಳಗಳು ಮತ್ತು ಹಿರಿಯ ಸರ್ ಗಳ ಮೂಲ ಪತ್ತೆ ಮಾಡುವುದು ಸಿಐಡಿ ಅಧಿಕಾರಿಗಳಿಗೆ ಕಗ್ಗುಂಟು ಶುರುವಾಗಿದೆ. ಬಂಧಿತ ಆರೋಪಿ ಆರ್. ಡಿ. ಪಾಟೀಲ್ ಬೆಂಗಳೂರಿಗೆ ಹೋಗುತ್ತಿದ್ದ. ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಸರ್ ಗಳನ್ನು ಭೇಟಿ ಮಾಡಿ ಬೇಕಾದ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಹಾಕಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಆರ್. ಡಿ .ಪಾಟೀಲ ಹಿರಿಯ ಸರ್ ಗಳ ಭೇಟಿಯ ಆಡಿಯೋವನ್ನು ಶಾಸಕ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿದ್ದು ಇಲ್ಲಿ ಉಲ್ಲೇಖಾರ್ಹ.