ಪಿಎಸ್ಐ ನೇಮಕಾತಿ ಅಕ್ರಮ: ಪೇದೆ ಇಸ್ಮಾಯಿಲ್ ಜಾಮ್ದಾರ್ ಸೆರೆ
ಕಲಬುರಗಿ, ಜೂ. 12: ಪಿಎಸ್ಐ ನೇಮಕಾತಿ ಅಕ್ರಮ ಬಯಲಿಗೆ ಬಂದ ಬಳಿಕ ಅದೆಷ್ಟು ಮದುವೆ ಸಂಬಂಧಗಳು ಮುರಿದು ಬಿದ್ದಿವೆಯೋ ಗೊತ್ತಿಲ್ಲ!. ಇಲ್ಲೊಬ್ಬ ಪೇದೆ ಪಿಎಸ್ಐ ಡೀಲ್ಗೆ ಹಣ ಹೊಂದಿಸಲು ಭಾವಿ ಪತ್ನಿಯ ಮನೆಯಲ್ಲಿ 15 ಲಕ್ಷ ವಸೂಲಿಗೆ ಯತ್ನಿಸಿದ್ದ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮದುವೆ ಸಂಬಂಧವನ್ನು ಮುರಿದು ಮೀಸೆ ತಿರುವಿದ್ದ ಪೊಲೀಸ್ ಪೇದೆ ಇದೀಗ ಸಿಐಡಿ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ಇದು ವರದಕ್ಷಿಣೆ ದುಡ್ಡಲ್ಲಿ ಪಿಎಸ್ಐ ಆಗಲು ಹೋಗಿ ಪ್ರಪಾತಕ್ಕೆ ಬಿದ್ದ ಪೊಲೀಸ್ ಪೇದೆಯ ಅಸಲಿ ಕಥೆ. ಅತನ ಹೆಸರು ಇಸ್ಮಾಯಿಲ್ ಜಾಮದಾರ್. ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿದ್ದ ಇಸ್ಮಾಯಿಲ್ ಜಾಮದಾರ್ ಅಡ್ಡ ಮಾರ್ಗದಲ್ಲಿ ಪಿಎಸ್ಐ ಆಗಲು ಹೋಗಿ ಜೈಲು ಕಂಬಿ ಎಣಿಸುವಂತಾಗಿದೆ. ಪಿಎಸ್ಐ ಅಕ್ರಮದಲ್ಲಿ ತಲೆಮರೆಸಿಕೊಂಡಿದ್ದ ಇಸ್ಮಾಯಿಲ್ ಜಾಮದಾರ್ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ: ಕಿಂಗ್ಪಿನ್ ಆರ್.ಡಿ. ಪಾಟೀಲ್ ಗ್ಯಾಂಗ್ ಅರೆಸ್ಟ್
ಇಸ್ಮಾಯಿಲ್ ಜಮಾದಾರ್ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕರ್ಜಗಿ ಗ್ರಾಮದ ನಿವಾಸಿ. ಈತ ಪೊಲೀಸ್ ಪೇದೆಯಾಗಿದ್ದಾನೆ. ಈತನ ಸಹೋದರ ಸೈಫನ್ ಮತ್ತು ಪಿಎಸ್ಐ ಅಕ್ರಮದ ಕಿಂಗ್ಪಿನ್ ಆರ್. ಡಿ ಪಾಟೀಲನ ಆಪ್ತನಾಗಿದ್ದ. ಇಬ್ಬರೂ ಪಿಎಸ್ಐ ನೇಮಕಾತಿ ಡೀಲ್ ಕುದುರಿಸಿ ಕೋಟಿ ಕೋಟಿ ವಸೂಲಿ ಮಾಡಿದ್ದರು. ಸೈಫನ್ ಸಹೋದರ ಇಸ್ಮಾಯಿಲ್ ಪೊಲೀಸ್ ಪೇದೆಯಾಗಿದ್ದು, ಪಿಎಸ್ಐ ಹುದ್ದೆಗೆ ಡೀಲ್ ಕುದುರಿಸಿದ್ದರು. 40 ಲಕ್ಷ ರೂ. ಹಣಕ್ಕೆ ಡೀಲ್ ಕುದುರಿಸಿದ್ದ ಸೈಫನ್ ತನ್ನ ಸಹೋದರ ಇಸ್ಮಾಯಿಲ್ ಪಿಎಸ್ಐ ಆಗಲಿಕ್ಕೆ ಮುಂಗಡವಾಗಿ 15 ಲಕ್ಷ ರೂ. ಹಣವನ್ನು ಕೂಡ ಪಾವತಿಸಿದ್ದರು.
ಪಿಎಸ್ಐ ನೇಮಕಾತಿ ಅಕ್ರಮ: ಹೈದರಾಬಾದ್ನಲ್ಲಿ ಗಂಡನ ಜತೆ ಲಾಕ್ ಆದ 'ಲಡ್ಡುಬಾಯಿ'!
ಗೋವಾದಲ್ಲಿ ಮಸ್ತ್ ಮಜಾ
ಇಸ್ಮಾಯಿಲ್ ಜಾಮದಾರ್ ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ಪಿನ್ ಆರ್.ಡಿ ಪಾಟೀಲ್ನಿಂದ ಬ್ಲೂಟೂತ್ ಪಡೆದು ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಪಿಎಸ್ಐ ಆಗಿ ಆಯ್ಕೆಯಾಗಿರುವ ವಿಷಯ ತಿಳಿದು ಇಸ್ಮಾಯಿಲ್ ಜಾಮದಾರ್ ಕುಣಿದು ಕುಪ್ಪಳಿಸಿದ್ದ. ಪಿಎಸ್ಐ ಆಗಿ ನೇಮಕವಾದ ಬಳಿಕ ಗೋವಾಗೆ ಹೋಗಿ ಮಜಾ ಉಡಾಯಿಸುತ್ತಿದ್ದ. ಗೋವಾದಲ್ಲಿ ಇಸ್ಮಾಯಿಲ್ ಮೋಜು ಮಸ್ತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಹಣ ಕೊಡಲಿಲ್ಲ ಅಂತ ಮದುವೆ ಕ್ಯಾನ್ಸಲ್ :
ಪೊಲೀಸ್ ಪೇದೆ ಇಸ್ಮಾಯಿಲ್ ಜಾಮದಾರ್, ಪಿಎಸ್ಐ ಆಗುವ ಜತೆಗೆ ಮದುವೆಯಾಗಲು ತಯಾರಿಸಿ ನಡೆಸಿದ್ದ. ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಅವರ ಕಾರು ಚಾಲಕನಾಗಿದ್ದ ಮೋದಿನ್ಗೆ 15 ಲಕ್ಷ ರೂ. ನೀಡುವಂತೆ ಇಸ್ಮಾಯಿಲ್ ಬೇಡಿಕೆ ಇಟ್ಟಿದ್ದ. ನಾನು ಪಿಎಸ್ಐ ಆಗಿದ್ದೇನೆ. ನನಗೆ ಈಗ ಅರ್ಜೆಂಟಾಗಿ 15 ಲಕ್ಷ ಹಣ ಬೇಡಿಕೆ ಎಂದು ಬೇಡಿಕೆ ಇಟ್ಟಿದ್ದ. ಹದಿನೈದು ಲಕ್ಷ ಹಣ ಹೊಂದಿಸಲು ಮೋದಿನ್ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಕುಪಿತಗೊಂಡಿದ್ದ ಇಸ್ಮಾಯಿಲ್, ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ್ದ. ನಾನು ಪಿಎಸ್ಐ ಆಗಲಿಕ್ಕೆ ಹಣ ಬೇಕು. ಅದು ಕೊಡಲಿಕ್ಕೆ ಅಗಲಿಲ್ಲ ಅಂದ್ರೆ ನಿಮಗೆ ಯಾಕೆ ಈ ಸಂಬಂಧ ಎಂದು ಕಡ್ಡಿ ಮುರಿದಂತೆ ಹೇಳಿದ್ದ. ಈ ಮಾತು ಕೇಳಿ ಹೆಣ್ಣು ಮಗಳು ಮತ್ತು ತಂದೆ ಕಣ್ಣೀರು ಹಾಕಿದ್ದರು.
ಗೋವಾದಲ್ಲಿ ಲಾಕ್ ಆದ ಜಾಮದಾರ್
ಅಡ್ಡದಾರಿ ಹಿಡಿದು ಪಿಎಸ್ಐ ಪರಿಕ್ಷೆಯಲ್ಲಿ ಪಾಸಾಗಿದ್ದಕ್ಕೆ ನಿಶ್ಚಿತಾರ್ಥವಾಗಿದ್ದ ಯುವತಿ ಜತೆಗಿನ ಮದುವೆ ಮುರಿದಿದ್ದ ಇಸ್ಮಾಯಿಲ್ ಜಾಮದಾರ್ ನನ್ನು ಸಿಐಡಿ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಇಸ್ಮಾಯಿಲ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ಮುಗಿದ ಬಳಿಕ ಆರೋಪಿ ಇಸ್ಮಾಯಿಲ್ ಜಾಮಾದಾರ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಸಿಐಡಿ ಪೊಲೀಸರು ತಿಳಿಸಿದ್ದಾರೆ.
ಇಸ್ಮಾಯಿಲ್ ಕೆಟ್ಟ ತೀರ್ಮಾನದಿಂದ ಆಕೆಗೆ ಒಳಿತು:
ಕೆಲವೊಮ್ಮೆ ಕೆಲವರು ತೆಗೆದುಕೊಳ್ಳುವ ತೀರ್ಮಾನಗಳು ಅವರ ಪಾಲಿಗೆ ಕೆಟ್ಟದಾಗುತ್ತವೆ. ತಾನೊಂದು ಬಗೆದರೆ ದೇವರೊಂದು ಬಗೆಯುತ್ತಾನೆ ಎಂಬುದಕ್ಕೆ ಈ ಪ್ರಕರಣ ಹೇಳಿ ಮಾಡಿಸಿದಂತಿದೆ. ಪೊಲೀಸ್ ಪೇದೆಯಾಗಿದ್ದ ಇಸ್ಮಾಯಿಲ್ ಗೆ ಶಾಸಕ ಎಂ.ವೈ. ಪಾಟೀಲ್ ಕಾರು ಚಾಲಕ ಮೋದಿನ್ ಅವರ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದರು. ಇಸ್ಮಾಯಿಲ್ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ಆದರೆ ಯಾವಾಗ ಆರ್.ಡಿ. ಪಾಟೀಲ್ ನ ಸಂಪರ್ಕದಿಂದ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಅವಕಾಶ ಸಿಕ್ಕಿತ್ತು. ಅದರ ಹಿಂದೆ ಹೋದ ಇಸ್ಮಾಯಿಲ್ ಪಿಎಸ್ಐ ಆಗಿಯೂ ನೇಮಕವಾಗಿದ್ದ. ಆಗ ಪಿಎಸ್ಐ ಡೀಲಿಂಗ್ ಗೆ ಹಣ ನೀಡಲು 15 ಲಕ್ಷ ರೂ. ನೀಡುವಂತೆ ಇಸ್ಮಾಯಿಲ್ ತನ್ನ ಭಾವಿ ಪತ್ನಿಯ ತಂದೆ ಮೋದಿನ್ ಬಳಿ ಬೇಡಿಕೆ ಇಟ್ಟಿದ್ದ. ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ಇಸ್ಮಾಯಿಲ್ ರದ್ದು ಮಾಡಿದ್ದ. ನಿಶ್ಚಿತಾರ್ಥ ಬಳಿಕ ಮದುವೆ ಮುರಿದು ಬಿದ್ದ ಕಾರಣ ಯುವತಿ ಕಣ್ಣೀರು ಹಾಕಿದ್ದರು. ಇದೀಗ ಇಸ್ಮಾಯಿಲ್ ಜೈಲಿಗೆ ಹೋಗಿದ್ದಾನೆ. ಸದ್ಯ ಇಂತಹ ಪಾಪಿ ಜತೆ ನನ್ನ ಮಗಳ ಮದುವೆಯಾಗದಿರುವುದು ಒಳಿತು ಎಂದು ಯುವತಿಯ ತಂದೆ ಖುಷಿಯಲ್ಲಿದ್ದಾರೆ. ಮದುವೆ ಮುನ್ನವೇ 15 ಲಕ್ಷ ರೂ. ಕೇಳಿದ ಇಸ್ಮಾಯಿಲ್ ಜೈಲು ಸೇರಿದ್ದು ಇದೀಗ ಕೆಟ್ಟದ್ದು ಬಯಸಿದ ಇಸ್ಮಾಯಿಲ್ಗೆ ಕೆಟ್ಟಾದಾಗಿರುವದನ್ನು ನೋಡಿ ಯುವತಿ ಕುಟುಂಬ ಸಂತಸದಲ್ಲಿ ತೇಲಾಡುತ್ತಿದೆ.
ಗೇಲಿ ಮಾಡಿದ್ದ ಜಾಮದಾರ್ ಕೈಗೆ ಕೋಳ
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಪೇದೆ ಇಸ್ಮಾಯಿಲ್ ಜಾಮದಾರ್ ಮತ್ತು ಹೀರೋಹಳ್ಳಿ ಮಹೇಶ ಎಂಬುವರನ್ನು ಬಂಧಿಸಿದ್ದರು.ಅವರ ಬಂಧನದ ಬಳಿಕ ಇದೀಗ ಇಸ್ಮಾಯಿಲ್ ಬಂಧನಕ್ಕೆ ಒಳಗಾಗಿದ್ದಾನೆ. ಡೀಲ್ ಕುದುರಿಸಿ ಪಿಎಸ್ಐ ಆಗಿದ್ದ ಪೊಲೀಸ್ ಪೇದೆ ಮದುವೆಗೂ ಮುನ್ನವೇ ಭಾವಿ ಪತ್ನಿಯ ತಂದೆಗೆ ತನ್ನ ಹವಾ ತೋರಿಸಿದ್ದ! 'ನಾನು ಪಿಎಸ್ಐ ಆಗಿದ್ದೇನೆ, ನನಗೆ ಹದಿನೈದು ಲಕ್ಷ ಕೊಡಬೇಕು ಎಂದು ಪೊಲೀಸ್ ಪೇದೆ ಇಸ್ಮಾಯಿಲ್ ಜಾಮದಾರ್ ಬೇಡಿಕೆ ಇಟ್ಟಿದ್ದ. ನೀನು ದೊಡ್ಡು ಕೊಟ್ಟಿಲ್ಲ ಅಂದ್ರೆ ಪರವಾಗಿಲ್ಲ ಬಿಡು, ಪಿಎಸ್ಐ ಅಂದ್ರೆ 50 ಲಕ್ಷ ರೂ. ಕೊಡೋರು ಸಿಗ್ತಾರೆ ಎಂದು ಗೇಲಿ ಮಾಡಿ ಮದುವೆ ಸಂಬಂಧ ಮುರಿದುಕೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಇಸ್ಮಾಯಿಲ್ ಸಿಐಡಿ ಪೊಲೀಸರ ಅತಿಥಿಯಾಗಿದ್ದಾನೆ.