ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ: ಕಿಂಗ್ಪಿನ್ ರುದ್ರಗೌಡ ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ
ಬೆಂಗಳೂರು, ಮೇ. 25: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಎರಡನೇ ಹಂತದ ತನಿಖೆಗೆ ಚಾಲನೆ ನೀಡಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ರುದ್ರಗೌಡ ಪಾಟೀಲನನ್ನು ಸಿಐಡಿ ಪೊಲೀಸರು ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಏ. 23 ರಂದು ರುದ್ರಗೌಡ ಪಾಟೀಲನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರು. ರುದ್ರಗೌಡನ ವಿಚಾರಣೆ ಬಳಿಕ ಬೆಂಗಳೂರಿನ ಸಿಐಡಿ ಕಚೇರಿಯ ನೇಮಕಾತಿ ವಿಭಾಗದಲ್ಲಿ ಅಕ್ರಮ ನಡೆದಿರುವ ಸಂಗತಿ ಬೆಳಕಿಗೆ ಬಂದಿತ್ತು. ಅಲ್ಲದೇ ರುದ್ರಗೌಡ ನೀಡಿದ ಮಾಹಿತಿ ಮೇರೆಗೆ ಆತನ ಆಪ್ತರು ಸೇರಿ ಹಲವರು ಬಂಧನಕ್ಕೆ ಒಳಗಾಗಿದ್ದರು.
ರುದ್ರಗೌಡನ ವಿಚಾರಣೆ ಪೂರ್ಣಗೊಳಿಸಿದ್ದ ಸಿಐಡಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಮತ್ತೊಮ್ಮೆ ರುದ್ರಗೌಡನನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಸಿಐಡಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.
ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಬಂಧಿತ ಪಿಎಸ್ಐ ಅಭ್ಯರ್ಥಿಗಳು ಹಾಗೂ ಕಿಂಗ್ ಪಿನ್ಗಳು ನೀಡಿರುವ ಮಾಹಿತಿ ಮೇರೆಗೆ ಸಿಐಡಿ ಅಧಿಕಾರಿಗಳು ಪ್ರಶ್ನಾವಳಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಬಗ್ಗೆ ರುದ್ರಗೌಡ ಬಾಯಿ ಬಿಟ್ಟಿರಲಿಲ್ಲ. ಇದೀಗ ಬಾಯಿ ಬಿಡಸಲು ಕೆಲವು ಸಾಕ್ಷಾಧಾರಗಳೊಂದಿಗೆ ಸಿಐಡಿ ಅಧಿಕಾರಿಗಳು ಡ್ರಿಲ್ ಮಾಡುತ್ತಿದ್ದಾರೆ.
ಬುಧವಾರ ರುದ್ರಗೌಡ ಪಾಟೀಲನನ್ನು ಕಲಬುರಗಿಯ ಐವಾನ್ ಇ ಶಾಹಿ ಅತಿಥಿ ಗೃಹ ಕಚೇರಿಯಲ್ಲಿ ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಅಕ್ರಮದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಮಾಹಿತಿ ಪಡೆಯಲು ರುದ್ರಗೌಡನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಐಡಿ ಮೂಲಗಳು ಖಚಿತ ಪಡಿಸಿವೆ. ರುದ್ರಗೌಡನ ವಿಚಾರಣೆ ಪೂರ್ಣ ಬಳಿಕ ಮತ್ತಷ್ಟು ಅಧಿಕಾರಿಗಳು ಮತ್ತು ಕಿಂಗ್ ಪಿನ್ ಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.
Recommended Video