ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿಯಿಂದ 'ಬಿಗ್ ಸರ್'ಗೆ ಡ್ರಿಲ್!
ಬೆಂಗಳೂರು, ಮೇ. 26: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ಗುರುವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ನೇಮಕಾತಿ ವಿಭಾಗದ ಡಿವೈಎಸ್ ಪಿ ಶಾಂತಕುಮಾರ್ ಬಂಧನಕ್ಕೆ ಒಳಗಾಗಿದ್ದುಇದೀಗ 'ಬಿಗ್ ಸರ್ ವಿಚಾರಣೆ' ಶುರುವಾಗಿದೆ.
545 ಪಿಎಸ್ಐ ನೇಮಕಾತಿಯ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಕಿಂಗ್ ಪಿನ್ಗಳಾದ ದಿವ್ಯಾ ಹಾಗರಗಿ, ಆರ್.ಡಿ. ಪಾಟೀಲ್ , ಮಂಜುನಾಥ್ ಮೇಳಕುಂದಿ ಸೇರಿದಂತೆ ಹಲವರು ಬಂಧನಕ್ಕೆ ಒಳಗಾಗಿದ್ದರು. ಅವರ ವಿಚಾರಣೆ ಬಳಿಕ ಪೊಲೀಸ್ ನೇಮಕಾತಿ ವಿಭಾಗದ ಹಲವು ಸಿಬ್ಬಂದಿ ಅಕ್ರಮದಲ್ಲಿ ಶಾಮೀಲಾಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಅಕ್ರಮ ಜಾಲಾಡಿದಾಗ ಸಿಐಡಿ ಕಚೇರಿಯಲ್ಲಿರುವ ಪಿಎಸ್ಐ ನೇಮಕಾತಿ ವಿಭಾಗದ ಕಚೇರಿಯಲ್ಲಿಯೇ ಅಕ್ರಮ ನಡೆದಿರುವುದಕ್ಕೆ ತನಿಖಾಧಿಕಾರಿಗಳು ಸಾಕ್ಷ ಸಂಗ್ರಹಿಸಿದ್ದರು. ಇದರ ಬೆನ್ನಲ್ಲೇ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಪೊಲೀಸ್ ಸಿಬ್ಬಂದಿ ಶ್ರೀಧರ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸಿಐಡಿ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ ನಲ್ಲಿಯೇ ಒಎಂಆರ್ ಶೀಟ್ ತಿದ್ದುಪಡಿ ಮಾಡಿರುವ ಸಂಗತಿ ಸಿಐಡಿ ತನಿಖೆಯಲ್ಲಿ ಅರೋಪಿಗಳು ಬಾಯಿ ಬಿಟ್ಟಿದ್ದರು.
ಅಮ್ರಿತ್ ಪೌಲ್ ವಿಚಾರಣೆ:
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಡಿವೈಎಸ್ಪಿ ಶಾಂತಕುಮಾರ್ ಮುಂದೆ ಸಾಕ್ಷಾಧಾರಗಳು ಮುಂದಿಟ್ಟರೂ ಬಾಯಿ ಬಿಟ್ಟಿರಲಿಲ್ಲ. ಆದ್ರೆ ಕೆಳ ಹಂತದ ಸಿಬ್ಬಂದಿ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ದಾಖಲಿಸಿದ್ದರು. ಅವರ ಹೇಳಿಕೆ ಆಧಾರದ ಮೇಲೆ ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದು, ಅದರ ಆಧಾರದ ಮೇಲೆ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬುಧವಾರ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 7.30 ರ ವರೆಗೂ ವಿಚಾರಣೆ ನಡೆಸಿ ಹೇಳಿಕೆ ಪಡೆದಿರುವ ಸಿಐಡಿ ಅಧಿಕಾರಿಗಳು ಗುರುವಾರ ಪುನಃ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಐಡಿ ಅಧಿಕಾರಿಗಳ ತಂಡ ವಿಚಾರಣೆ ಆರಂಭಿಸಿದ್ದು, ಅಮ್ರಿತ್ ಪೌಲ್ ಬಂಧನಕ್ಕೆ ಒಳಗಾಗುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಹಿರಿಯ ಐಪಿಎಸ್ ಅಧಿಕಾರಿ ಸೂಚನೆ ಮೇರೆಗೆ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಬಿಗ್ ಸರ್ ಗಳಿಗೆ ಇದೀಗ ಬಂಧನದ ಭೀತಿ ಎದುರಾಗಿದೆ.
ಸದ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರುವ ಅಮ್ರಿತ್ ಪೌಲ್ ಅವರ ಹೆಸರು ಅರಂಭದಲ್ಲಿಯೇ ಕೇಳಿ ಬಂದಿತ್ತು. ಸಾಕ್ಷಧಾರಗಳ ಕೊರತೆ ಹಿನ್ನೆಲೆಯಲ್ಲಿ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿರಲಿಲ್ಲ. ಇದೀಗ ಪಿಎಸ್ಐ ನೇಮಕಾತಿ ವಿಭಾಗದ ಸಿಬ್ಬಂದಿ ಮನೆಯಲ್ಲಿಯೇ 2.5 ಕೋಟಿ ರೂ. ಪತ್ತೆಯಾಗಿದ್ದು, ಸಿಐಡಿ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ ನಲ್ಲಿಯೇ ಒಎಂಆರ್ ಶೀಟ್ ತಿದ್ದುಪಡಿ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಪಿಎಸ್ಐ ಅಕ್ರಮದಲ್ಲಿ ಬಿಗ್ ಸರ್ ಗಳ ಪಾತ್ರದ ಹೂರಣ ಹೊರ ತೆಗೆಯಲು ಸಿಐಡಿ ಅಧಿಕಾರಿಗಳು ತನಿಖೆಗೆ ಚುರುಕು ಮುಟ್ಟಿಸಿದ್ದಾರೆ.
Recommended Video