ಪಿಎಸ್ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಜಾಮೀನು ಅರ್ಜಿ ವಜಾ ಏಕೆ?
ಬೆಂಗಳೂರು, ಆಗಸ್ಟ್ 17: ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ ಜಾಮೀನು ಅರ್ಜಿಯನ್ನು ಬೆಂಗಳೂರು ನಗರ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ.
ಇದೀಗ ಅವರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಆದರೆ ಹೈಕೋರ್ಟ್ ಈಗಾಗಲೇ ಇತರೆ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಅಮೃತ್ ಪಾಲ್ ಜಾಮೀನು ಕೋರಿದರೂ ಸಹ ಅದನ್ನು ನ್ಯಾಯಾಲಯ ಪುರಸ್ಕರಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವಿಶ್ಲೇಷಿಸಲಾಗಿದೆ.
ಪಿಎಸ್ಐ ಅಕ್ರಮ: ಒಎಂಆರ್ ಶೀಟ್ ತಿದ್ದುಪಡಿಯಲ್ಲಿ ಅಮೃತ್ ಪೌಲ್ ಕೈವಾಡ-ಸಿಐಡಿ
ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ಅಮಾನತುಗೊಂಡರೂ ಎಡಿಜಿಪಿ ಸ್ಥಾನದಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರಿಗೆ ಮಂಗಳವಾರದಂದು ಬೆಂಗಳೂರು ನಗರ ಮತ್ತು ಸತ್ರ ನ್ಯಾಯಾಲಯದಿಂದ ಶುಭ ಸುದ್ದಿ ಸಿಗಲಿಲ್ಲ. ಅಮೃತ್ ಪೌಲ್ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆ ನಡೆಸಿದ್ದ 51ನೇ ಹೆಚ್ಚುವರಿ ನಗರ ಮತ್ತು ಸತ್ರ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
ಪಿಎಸ್ಐ ಹಗರಣದಲ್ಲಿ ಪೌಲ್ ಅವರು 35ನೇ ಆರೋಪಿಯಾಗಿದ್ದು, ಇನ್ನಷ್ಟೇ ಆರೋಪ ಪಟ್ಟಿ ಸಲ್ಲಿಸಬೇಕಿದೆ. ಪೌಲ್ ಅವರು ಪ್ರಭಾವ ಬೀರುವಂಥ ಸ್ಥಾನದಲ್ಲಿರುವುದರಿಂದ ಹಾಗೂ ಹಗರಣಕ್ಕೆ ಸಂಬಂಧಿಸಿದ ಸಿಸಿಟಿವಿ ತುಣುಕುಗಳನ್ನು ವಿಶ್ಲೇಷಣೆ ನಡೆಸಬೇಕಿದೆ ಎಂಬ ಆಧಾರಗಳನ್ನು ನೀಡಿ ನ್ಯಾಯಾಲಯವು ಜಾಮೀನು ಮನವಿ ತಿರಸ್ಕರಿಸಿದೆ.
ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್ ಟಿ. ಚವ್ಹಾಣ್ ಅವರು ಜುಲೈ 25ರಂದು ಅಮೃತ್ ಪೌಲ್ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿದ್ದರು. ಹೀಗಾಗಿ, ಪೌಲ್ ಅವರು ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದ ಕದತಟ್ಟಿದ್ದರು. ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು.
ಪಿಎಸ್ಐ ನೇಮಕ ಅಕ್ರಮ: ತನಿಖೆಗೆ ಸಹಕರಿಸಿದ ಎಡಿಜಿಪಿ ಅಮೃತ್ ಪಾಲ್ಗೆ ಮಂಪರು ಪರೀಕ್ಷೆ
ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, 'ಆರೋಪಿ ಪೌಲ್ ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯಾಗಿದ್ದು, ಪೊಲೀಸ್ ಇಲಾಖೆಯ ಘನತೆಗೆ ಕುಂದು ತರುವಂತಹ ಕೃತ್ಯ ಎಸಗಿರುವುದು ಮೇಲ್ನೋಟಕ್ಕೇ ಕಂಡು ಬರುತ್ತದೆ. ಇಂತಹವರು ಜಾಮೀನು ಪಡೆದು ಹೊರಗೆ ಹೋದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಆದ್ದರಿಂದ, ಜಾಮೀನು ನೀಡಬಾರದು' ಎಂದು ಬಲವಾದ ಆಕ್ಷೇಪಣೆ ಸಲ್ಲಿಸಿದ್ದರು.
ಪೌಲ್ ಕೈವಾಡ: ಆರೋಪಿ ಪೌಲ್ ತಮ್ಮ ಬಳಿಯಿದ್ದ ಪಿಎಸ್ಐ ನೇಮಕಾತಿಗೆ ಸಂಬಂಧಿಸಿದ ಒಎಂಆರ್ ಉತ್ತರ ಪತ್ರಿಕೆಗಳ ಕಿಟ್ ಬಾಕ್ಸ್ಗಳನ್ನು ಇಡಲಾಗಿದ್ದ ಅಲ್ಮೇರಾದ ಕೀಯನ್ನು ಒಎಂಆರ್ ಪತ್ರಿಕೆ ತಿದ್ದುಪಡಿ ಮಾಡಲು ಒಂದನೇ ಆರೋಪಿಗೆ ನೀಡಿದ್ದಾಗಿ 31ನೇ ಆರೋಪಿ ಹೇಳಿಕೆ ನೀಡಿರುತ್ತಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ.
ಪೌಲ್ ಅವರಿಂದ ವಶಪಡಿಸಿಕೊಂಡಿರುವ ಮೊಬೈಲ್ ಫೋನ್ಗಳನ್ನು ಎಫ್ಎಸ್ಎಲ್ ವಿಶ್ಲೇಷಣೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ. ಆರೋಪಿತ ಅಧಿಕಾರಿಯೊಂದಿಗೆ ಪಿಎಸ್ಐಗೆ ಆಯ್ಕೆಯಾದ ಯಾರೆಲ್ಲಾ ಅಭ್ಯರ್ಥಿಗಳು, ಸಂಪರ್ಕ ಹೊಂದಿದ್ದರು ಎನ್ನುವ ಬಗ್ಗೆ ಸಾಕ್ಷ್ಯಾಧಾರ ಸಂಗ್ರಹಿಸಬೇಕಿದ್ದು, ಜಾಮೀನು ಅರ್ಜಿ ಪುರಸ್ಕರಿಸಬಾರದು' ಎಂದು ವಾದ ಮಂಡಿಸಿದ್ದರು.
ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಬಂಧಿತರಾಗಿದ್ದವರ ಪೈಕಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿ.ಎನ್. ಶಶಿಧರ್, ದಿಲೀಪ್ ಕುಮಾರ್, ಸೂರ್ಯ ನಾರಾಯಣ, ರಘುವೀರ್, ನವೀನ್ ಪ್ರಸಾದ್ ಅವರ ಅರ್ಜಿ ವಜಾ ಮಾಡಿದೆ.
ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಆರೋಪಿಗಳಾದ ಸಿ.ಎನ್.ಶಶಿಧರ್, ಆರ್.ಶರತ್ ಕುಮಾರ್, ಎಚ್.ಯು. ರಘವೀರ್, ಕೆ.ಸಿ. ದಿಲೀಪ್ ಕುಮಾರ್, ಎಚ್.ಆರ್. ಪ್ರವೀಣ್ ಕುಮಾರ್, ಕೆ.ಸೂರಿ ನಾರಾಯಣ್ ಅವರು ಜಾಮೀನು ಕೋರಿ ಮತ್ತು ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ ಪ್ರಸಾದ್ ನಿರೀಕ್ಷಣಾ ಜಾಮೀನುಗಾಗಿ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.
Recommended Video
''ಒಟ್ಟು 545 ಪಿಎಸ್ಐ ಹುದ್ದೆಗಳಿಗೆ 50 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆದರೆ, ಅರ್ಜಿದಾರರು, ಕೆಲ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ಅಕ್ರಮ ನಡೆಸಿ ಇಡೀ ನೇಮಕ ಪ್ರಕ್ರಿಯೆ ರದ್ದುಮಾಡುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ತಿದ್ದಲಾಗಿದೆ'' ಎಂದು ಆರೋಪಿಸಲಾಗಿದೆ.