ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್ಪಿನ್ ಮಂಜುನಾಥ್ ಮೇಳಕುಂದಿ ಶರಣು!
ಬೆಂಗಳೂರು, ಮೇ. 01: ಪಿಎಸ್ಐ ನೇಮಕಾತಿ ಅಕ್ರಮದ ಮತ್ತೊಬ್ಬ ಕಿಂಗ್ ಪಿನ್ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಳಂದ ತಾಲೂಕಿನ ನೀರಾವರಿ ಇಲಾಖೆಯ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಪಿಎಸ್ಐ ಅಕ್ರಮ ಕುರಿತು ಸಿಐಡಿ ತನಿಖೆ ಆರಂಭಿಸುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮೇಳಕುಂದಿ ವಿರುದ್ಧ ನ್ಯಾಯಾಲಯವೇ ಬಂಧನ ವಾರಂಟ್ ಜಾರಿ ಮಾಡಿತ್ತು. ಭಾನುವಾರ ಬೆಳಗ್ಗೆ ಆಟೋದಲ್ಲಿ ಸಿಐಡಿ ಕಚೇರಿಗೆ ಬಂದು ಮೇಳಕುಂದಿ ಶರಣಾಗಿದ್ದಾನೆ.
ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬರುತ್ತಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ನನಗೆ ಗೊತ್ತಿರ ಮಾಹಿತಿ ತಿಳಿಸಲು ಸಿಐಡಿ ಕಚೇರಿಗೆ ಬಂದಿದ್ದೇನೆ. ಅನಾರೋಗ್ಯ ಸಮಸ್ಯೆಯಿಂದ ಮಂಗಳೂರಿಗೆ ಹೋಗಿದ್ದೆ. ಇವತ್ತು ಅಲ್ಲಿಂದ ಬಂದಿದ್ದೇನೆ. ಅಕ್ರಮದಲ್ಲಿ ಭಾಗಿಯಾಗಿರುವ ಯಾರೂ ನನ್ನ ಸಂಪರ್ಕದಲ್ಲಿಲ್ಲ. ವಕೀಲರ ಸಲಹೆ ಮೇರೆಗೆ ನಾನು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ.
ಮಂಜುನಾಥ್ ಮೇಳಕುಂದಿ ಮತ್ತು ಆತನ ಸಹೋದರ ಏ. 10 ರಿಂದಲೇ ತಲೆ ಮರೆಸಿಕೊಂಡಿದ್ದರು. ಮಂಜುನಾಥ್ ಮೇಳಕುಂದಿ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿ ಹೊರ ಬೀಳುವ ಸಾಧ್ಯತೆಯಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಮಂಜುನಾಥ್ ಮೇಳಕುಂದಿ
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಮಂಜುನಾಥ್ ಮೇಳಕುಂದಿ ಆರ್.ಡಿ. ಪಾಟೀಲ್ ಮತ್ತು ದಿವ್ಯಾ ಹಾಗರಗಿ ಸಂಪರ್ಕ ಸಾಧಿಸಿದ ಆರೋಪವಿದೆ. ಅಭ್ಯರ್ಥಿಗಳನ್ನು ಹುಡುಕಿ ತಂದು ಹಣ ಡೀಲ್ ಖುದುರಿಸುತ್ತಿದ್ದೇ ಈ ಮೇಳಕುಂದಿ ಎಂಬುದು ಸಿಐಡಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪಿಎಸ್ಐ ನೇಮಕಾತಿ ಅಕ್ರಮ ಅಲ್ಲದೇ ಅನೇಕ ಸರ್ಕಾರಿ ನೇಮಕಾತಿ ಪರೀಕ್ಷೆಗಳ ಅಕ್ರಮದಲ್ಲಿ ಮಂಜುನಾಥ್ ಮೇಳಕುಂದಿ ಅಕ್ರಮ ಎಸಗಿರುವ ಮಾಹಿತಿಯಿದ್ದು, ಆತನ ವಿಚಾರಣೆ ಬಳಿಕ ಸತ್ಯಾಂಶಗಳು ಹೊರ ಬರಲಿವೆ.
ತಪ್ಪೊಪ್ಪಿಕೊಂಡ ಹಾಗರಗಿ:
ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ದೊಡ್ಡ ಮೊತ್ತದ ಹಣ ಪಡೆದಿದ್ದು ನಿಜ ಎಂದು ಜ್ಞಾನ ಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಸಿಐಡಿ ಪೊಲೀಸರ ಮೂಲಗಳಿಂದ ತಿಳಿದು ಬಂದಿದೆ. ಆರ್.ಡಿ ಪಾಟೀಲ್ ಮತ್ತು ಮಂಜುನಾಥ್ ಗ್ಯಾಂಗ್ನಿಂದ ದೊಡ್ಡ ಮಟ್ಟದ ಹಣ ಸಂದಾಯವಾಗಿದೆ. ಇನ್ನು ಇವರ ಸಂಪರ್ಕಕ್ಕೆ ಮುಖ್ಯ ಕಾರಣ ಮುಖ್ಯ ಶಿಕ್ಷಕ ಕಾಶಿನಾಥ್ ಎಂದು ಹೇಳಲಾಗಿದೆ.
ಒಎಂಆರ್ ತಿದ್ದಲು ದಿವ್ಯಾ ಸಮ್ಮತಿ:
ಇನ್ನು ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನೇಮಕಾತಿ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ತಿದ್ದಲು ದಿವ್ಯಾ ಹಾಗರಗಿ ಸಮ್ಮತಿಸಿದ್ದಾಳೆ. ಇದಕ್ಕೆ ಮುಖ್ಯ ಶಿಕ್ಷಕ ಕಾಶಿನಾಥ್ ನಾಂದಿ ಹಾಡಿದ್ದಾನೆ. ಕಾಶಿನಾಥ್ ಮೂಲಕನವೇ ಮಂಜುನಾಥ್ ಮೇಳಕುಂದಿ ದಿವ್ಯಾ ಸಂಪರ್ಕಕ್ಕೆ ಬಂದು ಅಕ್ರಮ ಎಸಗಿದ್ದಾರೆ. ಇಡೀ ಪರೀಕ್ಷಾ ಕೇಂದ್ರವನ್ನು ಮೇಲ್ವಿಚಾರಣೆ ನಡೆಸುತ್ತಿದ್ದ ಕಾಶಿನಾಥ್ ಹಣಕೊಟ್ಟ ಅಭ್ಯರ್ಥಿಗಳ ಉತ್ತರ ಪತ್ರಿಕೆ ಪಡೆದು ಮೇಲ್ವಿಚಾರಕ ಸಿಬ್ಬಂದಿಯಿಂದಲೇ ಒಎಂಆರ್ ಶೀಟ್ ತಿದ್ದಲು ಯೋಜನೆ ರೂಪಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದ. ಎಫ್ಐಆರ್ ಆಗುತ್ತಿದ್ದಂತೆ ಕಾಶಿನಾಥ್ ತಲೆ ಮರೆಸಿಕೊಂಡಿದ್ದಾನೆ.
ಸಂಪರ್ಕ ಸೇತುವಾಗಿ ಕಾಶಿನಾಥ್
ದಿವ್ಯಾ ಹಾಗರಗಿ, ರುದ್ರಗೌಡ ಪಾಟೀಲ, ಮಂಜುನಾಥ್ ಮೇಳಕುಂದಿ ಹಾಗೂ ಅಭ್ಯರ್ಥಿಗಳಿಗೆ ಸಂಪರ್ಕ ಸೇತುವಾಗಿ ಕಾಶಿನಾಥ್ ಕಾರ್ಯ ನಿರ್ವಹಿಸಿದ್ದ ವಿಚಾರವನ್ನು ದಿವ್ಯ ಹಾಗರಗಿ ಸಿಐಡಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಅಕ್ರಮದ ಕುರಿತು ಪೂರ್ಣ ಮಾಹಿತಿಯನ್ನು ದಿವ್ಯಾ ಬಾಯಿ ಬಿಡುತ್ತಿಲ್ಲ. ಈಕೆಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದು, ನಿರೀಕ್ಷಿತ ಮಾಹಿತಿಯನ್ನು ಇನ್ನೂ ಪಡೆಯಲಾಗುತ್ತಿಲ್ಲ ಎಂದು ಸಿಐಡಿ ಅಧಿಕಾರಿ ಮೂಲಗಳು ತಿಳಿಸಿವೆ.
Recommended Video