ಪಿಎಸ್ಐ ನೇಮಕ ಅಕ್ರಮ: ತನಿಖೆಗೆ ಸಹಕರಿಸಿದ ಎಡಿಜಿಪಿ ಅಮೃತ್ ಪಾಲ್ಗೆ ಮಂಪರು ಪರೀಕ್ಷೆ
ಬೆಂಗಳೂರು ಜು.20. ಪಿಎಸ್ ಐ ಅಕ್ರಮ ನೇಮಕ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್ ಪಾಲ್ ತನಿಖೆಗೆ ಸಹಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಮಂಪರು ಪರೀಕ್ಷಗೆ ಒಳಪಡಿಸಲು ವಿಚಾರಣಾ ಕೋರ್ಟ್ ಅನುಮತಿಯನ್ನು ಕೋರಲಾಗಿದೆ.
ಈ ವಿಷಯವನ್ನು ಎಸ್ ಪಿಪಿ ವಿ.ಎಸ್. ಹೆಗಡೆ ಬುಧವಾರ ಹೈಕೋರ್ಟ್ಗೆ ತಿಳಿಸಿದರು. ಅಲ್ಲದೆ, ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಇದಲ್ಲದೇ ಇನ್ನೂ ಹಲವು ಕಪ್ಪು ಕುರಿಗಳು ಹಗರಣದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಹಚ್ಚಬೇಕಿದೆ. ಅಮೃತ್ ಪೌಲ್ ತನಿಖೆಗೆ ಸಹಕರಿಸದ ಕಾರಣ ಮಂಪುರು ಪರೀಕ್ಷೆಗೆ ಅನುಮತಿ ಕೋರಲಾಗಿದೆ ಎಂದರು.
ಈ ಮಧ್ಯೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮದ ಏಳು ಮಂದಿ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಆರೋಪಿಗಳಾದ ಸಿ.ಎನ್.ಶಶಿಧರ್, ಆರ್.ಶರತ್ ಕುಮಾರ್, ಎಚ್.ಯು. ರಘವೀರ್, ಕೆ.ಸಿ. ದಿಲೀಪ್ ಕುಮಾರ್, ಎಚ್.ಆರ್. ಪ್ರವೀಣ್ ಕುಮಾರ್, ಕೆ.ಸೂರಿ ನಾರಾಯಣ್ ಅವರು ಜಾಮೀನು ಕೋರಿ ಮತ್ತು ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ ಪ್ರಸಾದ್ ನಿರೀಕ್ಷಣಾ ಜಾಮೀನುಗಾಗಿ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಅರ್ಜಿದಾರರ ಪರ ವಕೀಲರು ಜಾಮೀನು ನೀಡುವಂತೆ ಬಲವಾಗಿ ಮನವಿ ಮಾಡಿದರು. ಅದನ್ನು ಆಕ್ಷೇಪಿಸಿದ ರಾಜ್ಯ ಸರ್ಕಾರ ಅಭಿಯೋಜಕ ವಿ.ಎಸ್. ಹೆಗ್ಡೆ ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದರು.
ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್:
ಎಲ್ಲಾ ಅರ್ಜಿದಾರರ ಪರ ವಕೀಲರ ವಾದ ಮತ್ತು ಸರ್ಕಾರದ ಪರ ಎಸ್ಪಿಪಿ ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು. ಅಲ್ಲದೆ, ಸಾಧ್ಯವಾದರೆ ಶುಕ್ರವಾರ ತೀರ್ಪು ಪ್ರಕಟಿಸಲಾಗುವುದು. ಇಲ್ಲವೇ ತೀರ್ಪಿನ ಉಕ್ತಲೇಖನ ನೀಡಲಾಗುವುದು ಎಂದು ನ್ಯಾಯಪೀಠ ಇದೇ ವೇಳೆ ತಿಳಿಸಿದೆ.
ಭಾರಿ ಅಕ್ರಮ:
ಎಸ್ಪಿಪಿ ವಾದ ಮಂಡಿಸಿ, ಅರ್ಜಿದಾರರು ಎಸಗಿರುವುದು ಸಾಮಾನ್ಯ ಅಪರಾಧ ಕೃತ್ಯವಲ್ಲ. ಇದೊಂದು ದೊಡ್ಡ ಹಗರಣ ಹಾಗೂ ಸಮಾಜದ ಮೇಲಿನ ಭಯೋತ್ಪಾದನೆ. ಒಟ್ಟು 545 ಪಿಎಸ್ಐ ಹುದ್ದೆಗಳಿಗೆ 50 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆದರೆ, ಅರ್ಜಿದಾರರು, ಕೆಲ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ಅಕ್ರಮ ನಡೆಸಿ ಇಡೀ ನೇಮಕ ಪ್ರಕ್ರಿಯೆ ರದ್ದುಮಾಡುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ತಿದ್ದಲಾಗಿದೆ ಎಂದು ವಿವರಿಸಿದರು.
ಆಗ ನ್ಯಾಯಪೀಠ, ಬೇಲಿಯೇ ಎದ್ದು ಹೊಲ ಮೇಯಲು ಏಕೆ ಬಿಟ್ಟಿರಿ? ಕಪ್ಪು ಕುರಿಗಳನ್ನು ಪತ್ತೆ ಹಚ್ಚುವುದು ಸರ್ಕಾರದ ಕರ್ತವ್ಯವಲ್ಲವೇ? ಅಧಿಕಾರಿಗಳೇ ಅಕ್ರಮ ನಡೆಸಲು ಬಾಗಿಲು ತೆರೆದಿದ್ದಾರಲ್ಲವೇ? ಅವರನ್ನು ಉಕ್ಕಿನ ಕೈಗಳಿಂದ ದಂಡಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನಿಸಿತು.
ಎಸ್ಪಿಪಿ ಉತ್ತರಿಸಿ, ಯಾವುದೇ ಲೋಪಕ್ಕೆ ಅವಕಾಶವಿಲ್ಲದೆ ಅತ್ಯಂತ ವೈಜ್ಞಾನಿಕ, ವೃತ್ತಿಪರ ಮತ್ತು ಕಾನೂನಾತ್ಮಕವಾಗಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಕಪ್ಪು ಕುರಿಗಳನ್ನು ಪತ್ತೆ ಹಚ್ಚಲಾಗುವುದು. ಇನ್ನೂ ಅಕ್ರಮದಲ್ಲಿ ಎಲ್ಲಾ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎಂಬುದಾಗಿ ಹೇಳಲಾಗುವುದು. ಕೆಲ ಅಭ್ಯರ್ಥಿಗಳ ಪಾತ್ರವಿದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಹಾಗೆಯೇ, ಸದ್ಯ ಪ್ರಕರಣ ತನಿಖೆಯಲ್ಲಿದೆ. ಅಮೃತ್ ಪೌಲ್ ಅವರ ಮೊಬೈಲ್ ಪೋನ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಅದನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಿದರೆ ಮತ್ತಷ್ಟು ಸಂಗತಿಗಳು ಬಯಲಾಗಬಹುದು ಎಂದು ಹೇಳಿದರು.