ಪಿಎಸ್ಐ ನೇಮಕಾತಿ ಅಕ್ರಮ: ಹೈದರಾಬಾದ್ನಲ್ಲಿ ಗಂಡನ ಜತೆ ಲಾಕ್ ಆದ 'ಲಡ್ಡುಬಾಯಿ'!
ಬೆಂಗಳೂರು, ಮೇ. 30: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ತನಿಖೆಗೂ ಮುನ್ನ ಕಿಂಗ್ಪಿನ್ ಕೈಗೆ ತಿರುಪತಿ ಲಡ್ಡು ಕೊಟ್ಟು ಎಸ್ಕೇಪ್ ಆಗಿದ್ದ ಶಾಂತಾಬಾಯಿ ಹಾಗೂ ಆಕೆಯ ಪತಿ ಕೊನೆಗೂ ಸಿಐಡಿ ಪೊಲೀಸರಿಗೆ ಹೈದರಾಬಾದ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತಣ್ಣಗಾಗುತ್ತಿದ್ದಂತೆ ಹೈದರಾಬಾದ್ನಲ್ಲಿ ಈ ಆರೋಪಿ ದಂಪತಿಯನ್ನು ಭಾನುವಾರ ಬಂಧಿಸಿದ್ದಾರೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆದಿದ್ದಾರೆ. 40 ಲಕ್ಷ ರೂ.ಗೆ ಪಿಎಸ್ಐ ಡೀಲ್ ಖುದುರಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಪಾಸಾಗಿದ್ದ ಶಾಂತಾಬಾಯಿ ಪಿಎಸ್ಐ ಆದ ಖುಷಿಯಲ್ಲಿ ತಿರುಪತಿಗೆ ಹೋಗಿದ್ದಳು. ಖಾಕಿ ತೊಡುವ ಖುಷಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದು ವಾಪಸು ಬಂದಿದ್ದಳು. ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿಗೆ ಹಣ ಕೊಡುವ ಬದಲಿಗೆ ತಿರುಪತಿ ಲಡ್ಡು ಕೊಟ್ಟು ಎಸ್ಕೇಪ್ ಆಗಿದ್ದಳು. ಈಕೆಗಾಗಿ ಪೊಲೀಸರು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ.
ಜೋಡಿ ಬಂಧನ :
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಪಿಎಸ್ಐ ಅಭ್ಯರ್ಥಿ ಶಾಂತಾಬಾಯಿ ಮತ್ತು ಆಕೆಯ ಪತಿ ಬಸ್ಯಾ ನಾಯ್ಕ ನನ್ನು ಸಿಐಡಿ ಪೊಲೀಸರು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಈ ದಂಪತಿ ತಲೆ ಮರೆಸಿಕೊಂಡಿದ್ದರು. ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಶಾಂತಾಬಾಯಿ ಉತ್ತಿರ್ಣರಾಗಿದ್ದಳು. ನೀರಾವರಿ ಇಲಾಖೆಯ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಸಂಪರ್ಕ ಸಾಧಿಸಿದ್ದ ಶಾಂತಾಬಾಯಿ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಸಂಬಂಧ 50 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದಳು.
ಪಿಎಸ್ಐ ಆಗಿ ಆಯ್ಕೆಯಾಗಿದ್ದ ಶಾಂತಬಾಯಿ ಪೂರ್ಣ ಹಣವನ್ನು ಕಿಂಗ್ಪಿನ್ ಮಂಜುನಾಥ್ ಮೇಳಕುಂದಿಗೆ ನೀಡಿರಲಿಲ್ಲ. ಹಣ ಕೇಳಿದ್ದ ಮೇಳಕುಂದಿಗೆ ತಿರುಪತಿ ಲಡ್ಡು ಕೊಟ್ಟು ಕಾಲಾವಕಾಶ ಕೇಳಿದ್ದಳು. ಪಿಎಸ್ಐ ಆದ ಸಂಭ್ರಮದಲ್ಲಿ ತೇಲಾಡುತ್ತಿದ್ದಂತೆ, ನೇಮಕಾತಿ ಅಕ್ರಮ ಸಂಬಂಧ ಸಿಐಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ತನಿಖೆ ಆರಂಭವಾಗುತ್ತಿದ್ದಂತೆ ತನ್ನ ಇಬ್ಬರ ಮಕ್ಕಳೊಂದಿಗೆ ಶಾಂತಾಬಾಯಿ ಮತ್ತು ಬಸ್ಯಾ ನಾಯ್ಕ ಪರಾರಿಯಾಗಿದ್ದರು. ಒಂದೂವರೆ ತಿಂಗಳ ಬಳಿಕ ಇದೀಗ ಸಿಕ್ಕಿಬಿದ್ದಿದ್ದು, ಬಂಧಿತರ ಸಂಖ್ಯೆ 35 ಕ್ಕೇರಿದೆ.
ಆರ್.ಡಿ. ಪಾಟೀಲ್ ಸಿಐಡಿ ವಶಕ್ಕೆ:
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಲೂಟೂತ್ ಕಿಂಗ್ ಪಿನ್ ಆರ್.ಡಿ. ಪಾಟೀಲನನ್ನು ಸಿಐಡಿ ಪೊಲೀಸರು ಪುನಃ ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದಾರೆ. ಈ ಹಿಂದೆ ಏಳು ದಿನ ಸಿಐಡಿ ಕಸ್ಟಡಿಗೆ ಪಡೆದಿದ್ದ ತನಿಖಾಧಿಕಾರಿಗಳು, ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಹೆಚ್ಚುವರಿ ವಿಚಾರಣೆಗೆ ನಾಲ್ಕು ದಿನ ಕಸ್ಟಡಿ ಅವಧಿ ಪಡೆದಿದ್ದಾರೆ.
Recommended Video