545 ಪಿಎಸ್ಐಗಳಿಗೆ ತೊಂದರೆ ಆಗಿದೆ, 57 ಸಾವಿರ ಮಂದಿಗೆ ಒಳ್ಳೆಯದಾಗಿದೆ!
ಬೆಂಗಳೂರು, ಮೇ. 10: "ನಾನು ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದರಿಂದ 545 ಮಂದಿಗೆ ಅನ್ಯಾಯವಾಗಿರಬಹುದು. ಅವರು ನನಗೆ ಹಿಡಿ ಶಾಪ ಹಾಕುತ್ತಿರಬಹುದು. ಆದರೆ ನಾನು ಮಾಡಿದ ಕೆಲಸದಿಂದ 57 ಸಾವಿರ ಮಂದಿಗೆ ಒಳ್ಳೆಯದು ಆಗಿದೆ, ಅವರ ಆಶೀರ್ವಾದ ನನ್ನಮೇಲಿದೆ"
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಿಂಗ್ಪಿನ್ ಮಂಜುನಾಥ್ ಮೇಳಕುಂದಿ ಸಿಐಡಿ ವಿಚಾರಣೆ ಬಳಿಕ ಮಾಧ್ಯಮಗಳ ಎದುರು ಹೊಡೆದಿರುವ ಡೈಲಾಗ್ ಇದು.
ಕಲಬುರಗಿಯಲ್ಲಿ ಸಿಐಡಿ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿರುವ ಮಂಜುನಾಥ್ ಮೇಳಕುಂದಿ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್. ಈ ಹಿಂದೆ ಇಂಜಿನಿಯರ್ಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದ. ಪಿಎಸ್ಐ ನೇಮಕಾತಿ ಅಕ್ರಮ ಹೊರ ಬರುತ್ತಿದ್ದಂತೆ ಎಸ್ಕೇಪ್ ಅಗಿದ್ದ ಮೇಳಕುಂದಿ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅಂತಿಮವಾಗಿ ಆತನೇ ಪೊಲೀಸರ ಮುಂದೆ ಶರಣಾಗಿದ್ದ.
ಪಿಎಸ್ಐ ನೇಮಕಾತಿ ಹಗರಣದ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಮಂಜುನಾಥ್ ಮೇಳಕುಂದಿಗೆ ಕಿಂಚಿತ್ತೂ ಪಶ್ಚಾತಾಪ ಕಾಡುತ್ತಿಲ್ಲ. ಬದಲಿಗೆ ನಾನು ಮಾಡಿದ್ದೇ ಸರಿ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾನೆ.
ಮಂಜುನಾಥ್ ಮೇಳಕುಂದಿ ನೇರ ಮಾತು
ಪಿಎಸ್ಐ ನೇಮಕಾತಿ ಅಕ್ರಮದಿಂದ 545 ಮಂದಿಗೆ ಅನ್ಯಾಯವಾಗಿದೆ. ಅವರಿಗೆ ಅನ್ಯಾಯ ಆಗಿರುವುದರಿಂದ ನನ್ನ ಮೇಲೆ ಶಾಪ ಹಾಕುತ್ತಿರಬಹುದು. ಅದರೆ ಅವರಿಗೆ ಅನ್ಯಾಯ ಆಗಿರೋದರಿಂದ 57 ಸಾವಿರ ಅಭ್ಯರ್ಥಿಗಳಿಗೆ ಒಳ್ಳೆಯದಾಗಿದೆ. ಅವರ ಆಶೀರ್ವಾದ ನನ್ನ ಮೇಲಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಯಾರಿಗೋ ಒಳ್ಳೆಯದು ಆಗುತ್ತದೆ ಎಂದು ಈ ಅಕ್ರಮ ಮಾಡಿದೆ. ನನ್ನ ತಮ್ಮನ ಪಿಎಸ್ಐ ಎಕ್ಸಾಮ್ ಕ್ಲಿಯರ್ ಮಾಡಿಸೋಕೆ ಆಗಿಲ್ಲ. ಆದರೆ ಉಳಿದವರನ್ನು ಪಿಎಸ್ಐ ಅನ್ನಾಗಿ ಮಾಡಿಸಬೇಕು ಎಂದು ಈ ರೀತಿ ಮಾಡಿದೆ. ಇದರಿಂದ ಉಳಿದವರಿಗೆ ಅನುಕೂಲ ಆಗುತ್ತದೆ ಎಂದು ಸ್ಫೋಟಕ ಸಂಗತಿಯನ್ನು ತಿಳಿಸಿದ್ದಾನೆ.
ಮೂರು ಕೋಟಿ ಮನೆ ಖರೀದಿ
ಸಹಾಯಕ ಇಂಜಿನಿಯರ್ ಆಗಿರುವ ಮಂಜುನಾಥ್ ಮೇಳಕುಂದಿ ಕಲಬುರಗಿಯ ಜಯನಗರದ ಇಂಜಿನಿಯರ್ಸ್ ಕಾಲೋನಿಯಲ್ಲಿ ಮೂರು ಕೋಟಿ ರೂ. ಮನೆ ಖರೀದಿ ಮಾಡಿದ್ದ. ಆ ಮನೆ ಖರೀದಿ ಮಾಡಿದ ಬಳಿಕ ಮಂಜುನಾಥ್ ಮೇಳಕುಂದಿಗೆ ಒಂದರ ಮೇಲೊಂದು ಒಂದು ಅವಘಢ ಎದುರಿಸುತ್ತಿದ್ದಾನೆ. ಈ ಕುರಿತು ಮಂಜುನಾಥ್ ಮೇಳಕುಂದಿ ಹೇಳಿಕೊಂಡಿರುವ ಮಾತುಗಳು ಇಲ್ಲಿವೆ ನೋಡಿ.
ನನ್ನ ತಮ್ಮನ ಪತ್ನಿ ತೀರಿಕೊಂಡಳು
"ನನಗೆ ಆ ಮನೆ ವಾಸ್ತು ಬಗ್ಗೆ ಗೊತ್ತಿರಲಿಲ್ಲ. ಮೂಲ ವಾರಸದಾರ ಅಧಿಕಾರಿಯೊಬ್ಬ ಉದ್ಧಾರವಾಗದೇ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದ. ಆ ಮನೆಯನ್ನು ನಾನು ಖರೀದಿ ಮಾಡಿದ್ದೆ. ಅದರ ವಾಸ್ತು ಸರಿಯಿಲ್ಲ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ಆ ಮನೆ ಖರೀದಿ ಮಾಡಿದ ಬಳಿಕ ನನ್ನ ಸಹೋದರನ ಪತ್ನಿ ಸಾವನ್ನಪ್ಪಿದಳು. ನಾನು ಪಿಡಬ್ಲೂಡಿ ಇಲಾಖೆ ಪರೀಕ್ಷಾ ಅಕ್ರಮದಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದೆ. ಇದೀಗ ಜೈಲಿನಿಂದ ಹೊರ ಬಂದ ಕೂಡಲೇ ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿದ್ದೀನಿ. ನಾನು ಮನೆ ಖರೀದಿ ಮಾಡಿ ಕೆಟ್ಟೆ. ಯಾರಾದರೂ ಖರೀದಿ ಮಾಡಿದರೆ ಎರಡು ಕೋಟಿ ರೂ.ಗೆ ಕೊಟ್ಟು ಬಿಡುತ್ತೇನೆ" ಎಂದು ಮಂಜುನಾಥ್ ಮೇಳಕುಂದಿ ನೋವು ತೋಡಿಕೊಂಡಿದ್ದಾನೆ.
ತುತ್ತು ಅನ್ನಕ್ಕೂ ಪರದಾಡುತ್ತಿದ್ದವ ಲಕ್ಷಾಧೀಶ್ವರ
ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಕಾಶಿನಾಥ್ ಕ್ರಿಮಿನಲ್ ಬುದ್ಧಿ ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಕೆಲಸಕ್ಕೆ ಸೇರಿದ್ದ ಕಾಶಿನಾಥ್ ಈ ಮೊದಲು ಒಂದು ದಿನದ ತುತ್ತಿಗೂ ಪರದಾಡುತ್ತಿದ್ದ. ಶಾಲೆಯ ಓನರ್ ವಿಶ್ವಾಸ ಗಳಿಸಿ ಶಾಲೆ ಉಸ್ತುವಾರಿ ವಹಿಸಿಕೊಂಡಿದ್ದ. ಆ ಬಳಿಕ ತನ್ನ ಪತ್ನಿಗೂ ನೌಕರಿ ಕೊಡಿಸಿ ಎರಡು ಸಂಬಳ ಪಡೆಯುತ್ತಿದ್ದ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಬೇರೆ ಶಿಕ್ಷಕರನ್ನು ಬಳಿಸಿಕೊಂಡಿದ್ದ. ಆತನ ಪತ್ನಿ ಅಕ್ರಮದಿಂದ ದೂರ ಇರುವಂತೆ ಕ್ರಿಮಿನಲ್ ಐಡಿಯಾ ಬಳಿಸಿದ್ದ. ಪಿಎಸ್ಐ ನೇಮಕಾತಿ ಅಕ್ರಮದ ಬಳಿಕ ಲಕ್ಷಾಧೀಶರನಾಗಿದ್ದ ಕಾಶೀನಾಥ್, 50 ಲಕ್ಷ ರೂ. ವೆಚ್ಚ ಮಾಡಿ ಮನೆ ನಿರ್ಮಾಣ ಮಾಡಿದ್ದ. ಐಷಾರಾಮಿ ಕಾರು ಖರೀದಿಸಿ ಬಿಂದಾಸ್ ಜೀವನ ಮಾಡುತ್ತಿದ್ದ.
ಕಾಶಿನಾಥ ನ ಮಹಿಮೆಗೆ ದಿವ್ಯಾ ಜೈಲಿಗೆ
ಮುಖ್ಯ ಶಿಕ್ಷಕ ಕಾಶಿನಾಥ್ ಪಿಎಸ್ಐ ನೇಮಕಾತಿ ಡೀಲ್ ಕೋರರ ಜೊತೆ ಕೈ ಜೋಡಿಸಿದ್ದ. ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದ ಕಾಶೀನಾಥ್, ಅಲ್ಪ ಹಣವನ್ನು ದಿವ್ಯಾ ಹಾಗರಗಿಗೆ ನೀಡಿದ್ದ. ಕಿಂಗ್ಪಿನ್ಗಳ ಜೊತೆ ಸೇರಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ಮಾಡಿಸಿದ್ದಾನೆ. ಒಂದೆಡೆ ಓಎಂಆರ್ ಶೀಟ್ ಟ್ಯಾಂಪರಿಂಗ್ ಮಾಡಿಸಿದ್ದು, ಇನ್ನೊಂದು ಕಡೆ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದಾನೆ.
Recommended Video