ರಾಮನಗರದಲ್ಲಿ ವಾಲ್ಮೀಕಿ ಮುಖಂಡರ ಪ್ರತಿಭಟನೆ, ಕುರ್ಚಿಗಳು ಖಾಲಿ
ರಾಮನಗರ, ಅಕ್ಟೋಬರ್ 5 : ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ವಾಲ್ಮೀಕಿ ಸಮುದಾಯದ ಮುಖಂಡರು ಸಮಾರಂಭವನ್ನು ಬಹಿಷ್ಕರಿಸಿ, ತಲೆಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.
ವಾಲ್ಮೀಕಿ ಜಯಂತಿ: ಟ್ವಿಟ್ಟರ್ ನಲ್ಲಿ ಶುಭಹಾರೈಸಿದ ಗಣ್ಯರು
ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ವಾಲ್ಮೀಕಿ ಜನಾಂಗದ ನಾಯಕರನ್ನು ಜಿಲ್ಲಾಡಳಿತ ಪರಿಗಣಿಸದೆ ಕಾಟಾಚಾರಕ್ಕೆ ಜಯಂತಿಯನ್ನು ಆಚರಣೆ ಮಾಡುತ್ತಿದೆ ಎಂದು ಇಲ್ಲಿನ ಅಂಬೇಡ್ಕರ್ ಭವನದ ಬಳಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.
ವಾಲ್ಮೀಕಿ ಸಂಘದ ಮುಖಂಡರು, ದಲಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ತಲೆಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಜನಾಂಗದ ನಾಯಕರನ್ನು ಪರಿಗಣಿಸದೆ ಕೆಲವೇ ದಲಿತ ಮುಖಂಡರ ಜೊತೆ ಚರ್ಚೆ ನಡೆಸಿ ಜಿಲ್ಲಾಧಿಕಾರಿ ಡಾ.ಬಿ.ಆರ್. ಮಮತಾ ಅವರು ಕಾಟಾಚಾರಕ್ಕೆ ಆಚರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.