ದೇವಟ್ ಪರಂಬುವಿನಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ತೀವ್ರ ಖಂಡನೆ
ಭಾಗಮಂಡಲ, ಜೂನ್ 07 : ಟಿಪ್ಪು ಸುಲ್ತಾನನಿಂದ ನರಮೇಧ ನಡೆದಿದೆ ಎನ್ನಲಾದ ಅಯ್ಯಂಗೇರಿ ಬಳಿಯ ದೇವಟ್ ಪರಂಬುವಿನಲ್ಲಿ ಹುತಾತ್ಮರ ಗೌರವಾರ್ಥ ಅಳವಡಿಸಿದ್ದ ಸ್ತಂಭಗಳನ್ನು ಕೆಡವಿರುವುದನ್ನು ಖಂಡಿಸಿ ಭಾಗಮಂಡಲದಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಸಲಾಯಿತು.
ಮರಳಿ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜಗಳ ಸಹಕಾರದೊಂದಿಗೆ ಭಾಗಮಂಡಲದಲ್ಲಿ ಸ್ವಯಂಘೋಷಿತ ಬಂದ್ ನಡುವೆ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.[ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಪ್ರವೇಶ ಶುಲ್ಕ ಏರಿಕೆ]
ಸಿಎನ್ಸಿ ಸಂಘಟನೆಯ ದೇವಟ್ ಪರಂಬು ಸ್ಮಾರಕ ನಿರ್ಮಾಣದ ಬೇಡಿಕೆ ಮತ್ತು ಇದಕ್ಕೆ ಪೂರಕವಾಗಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮವನ್ನು ವಿರೋಧಿಸಿ ಸೋಮವಾರ ಬೆಳಗ್ಗಿನಿಂದ ಸಿಎನ್ಸಿ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಭಾಗಮಂಡಲದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ನಡೆಸಲಾಯಿತು.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಕೊಡವ ಸಮಾಜಗಳ ಸಹಕಾರದೊಂದಿಗೆ ಭಾಗಮಂಡಲದಲ್ಲಿ ನಡೆದ ಮಾನವ ಸರಪಳಿ ಮತ್ತು ಬಹಿರಂಗ ಸಭೆಯಲ್ಲಿ, ಪ್ರಸಕ್ತ ಸಾಲಿನ ಅ.17ರ ತುಲಾ ಸಂಕ್ರಮಣ ಜಾತ್ರೆಯ ಒಳಗಾಗಿ ದೇವಟ್ ಪರಂಬುವಿನಲ್ಲಿ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಸ್ಮಾರಕದ ಪುನರ್ ನಿರ್ಮಾಣವಾಗಬೇಕು. ಇಲ್ಲವಾದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಕೊಡವರಿಂದ ಕರಸೇವೆಯ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು.["ಟಿಪ್ಪು ಮತ್ತು ಕೊಡವರು" ಮಡಿಕೇರಿಯಲ್ಲಿ ಮಂಥನ]
ದೇವಟ್ ಪರಂಬು ಸಂರಕ್ಷಣಾ ಸಮಿತಿ
ದೇವಟ್ ಪರಂಬು ಸಂರಕ್ಷಣಾ ಸಮಿತಿ- ಕೊಡಗಿನ ಕೊಡವರ ಸಾಕ್ಷಿ ಪ್ರಜ್ಞೆಯಾಗಿ ಪರಿಗಣಿಸಲಾಗಿರುವ ದೇವಟ್ ಪರಂಬುವಿನ ಸ್ಮಾರಕ ನಿರ್ಮಾಣ ಮತ್ತು ರಕ್ಷಣೆಗಾಗಿ ಜಿಲ್ಲೆಯ 842ಕ್ಕೂ ಹೆಚ್ಚಿನ ಕೊಡವ ಕುಟುಂಬಗಳ ಸದಸ್ಯರನ್ನು ಒಳಗೊಂಡ ದೇವಟ್ ಪರಂಬು ಸಂರಕ್ಷಣಾ ಸಮಿತಿಯನ್ನು ಇದೇ ಸಂದರ್ಭ ರಚಿಸಲ್ಪಟ್ಟಿತು.
ಕೊಡವ ಸಮುದಾಯದ ಮೇಲೆ ದಬ್ಬಾಳಿಕೆ
ವಿಷಯಾಧಾರಿತವಾಗಿ ದೇವಟ್ ಪರಂಬು ವಿಷಯಕ್ಕೆ ಸಂಬಂಧಿಸಿದಂತೆ ಸಿಎನ್ಸಿಗೆ ಎಲ್ಲಾ ಕೊಡವ ಸಮಾಜಗಳ ಬೆಂಬಲ ದೊರಕಿಸಿಕೊಡುವ ಪ್ರಯತ್ನ ನಡೆಸಿರುವ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಮಾತನಾಡಿ, ಕೊಡವ ಸಮುದಾಯ ತನ್ನ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳ ವಿರುದ್ಧ ರಾಜಕೀಯ ರಹಿತವಾಗಿ ಸಂಘಟಿತವಾಗಬೇಕೆಂದು ಕರೆ ನೀಡಿದರು.
ಕೊಡವರು ಎಂದಿಗೂ ಜಾತಿ ವಾದಿಗಳಲ್ಲ
ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೊಡಗಿನ ಕೊಡವರು ಮತ್ತು ಅರೆಭಾಷಾ ಸಮುದಾಯ ಜಿಲ್ಲೆಯಲ್ಲಿ ಅಣ್ಣತಮ್ಮಂದಿರಂತೆ ಇದ್ದು, ಇವರುಗಳ ನಡುವೆ ಹುಳಿ ಹಿಂಡದಿರಿ ಎಂದು ಒತ್ತಾಯಿಸಿದರು. ಕೊಡವರು ಎಂದಿಗೂ ಜಾತಿ ವಾದಿಗಳಲ್ಲ. ನಾವು ನಮ್ಮ ಹಕ್ಕುಗಳನ್ನಷ್ಟೆ ಕೇಳುತ್ತಿದ್ದೇವೆ ಎಂದು ದೃಢವಾಗಿ ನುಡಿದರು.
ಮುಸ್ಲಿಂರ ವಿರುದ್ಧ ಸೇರಿದ್ದಲ್ಲ
ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಕೊಡಗಿನ ಸಾಕ್ಷಿ ಪ್ರಜ್ಞೆ ಕೊಡವರಾದರೆ, ಕೊಡವರ ಸಾಕ್ಷಿ ಪ್ರಜ್ಞೆ ದೇವಟ್ ಪರಂಬು ಆಗಿದೆ. ಟಿಪ್ಪುವಿನಿಂದ ನರಮೇಧ ನಡೆದ ದೇವಟ್ ಪರಂಬುವಿನಲ್ಲಿ ಸ್ಮಾರಕ ನಿರ್ಮಾಣವಾಗಬೇಕೆನ್ನುವ ಉದ್ದೇಶದಿಂದ ಇಲ್ಲಿ ಸೇರಿದ್ದೇವೆ. ಅರೆಭಾಷಿಕರು, ಮುಸ್ಲಿಂರ ವಿರುದ್ಧ ಸೇರಿದ್ದಲ್ಲವೆಂದು ಸ್ಪಷ್ಟಪಡಿಸಿದರು.
ಎನ್ಐಎ ತನಿಖೆಗೆ ಒತ್ತಾಯ
ತನಿಖೆ ನಡೆಸಬೇಕೆನ್ನುವ ಮಹತ್ವದ ನಿರ್ಣಯ ದೇವಟ್ ಪರಂಬುವಿನಲ್ಲಿ ಹುತಾತ್ಮರ ನೆನಪಿಗಾಗಿ ನೆಡಲಾಗಿದ್ದ ಸ್ತಂಭಗಳನ್ನು ಧ್ವಂಸ ಮಾಡಿದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ) ಮೂಲಕ ತನಿಖೆ ನಡೆಸಬೇಕೆನ್ನುವ ಮಹತ್ವದ ನಿರ್ಣಯವನ್ನು ಸಿಎನ್ಸಿ ವತಿಯಿಂದ ಆಯೋಜಿತ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೈಗೊಳ್ಳಲಾಯಿತು.
ದೇವಟ್ ಪರಂಬುವಿನಲ್ಲಿ ಬಂದೋಬಸ್ತ್
ದೇವಟ್ ಪರಂಬುವಿನಲ್ಲಿ ಬಂದೋಬಸ್ತ್- ಭಾಗಮಂಡಲದಲ್ಲಿ ಸಿಎನ್ಸಿ ಮಾನವ ಸರಪಳಿ ನಡೆಸುವ ಹಂತದಲ್ಲೆ ಅಯ್ಯಂಗೇರಿ ಸಮೀಪದ ದೇವಟ್ ಪರಂಬುವಿನಲ್ಲಿ ಡಿಎಆರ್ ತುಕಡಿಯನ್ನು ಒಳಗೊಂಡಂತೆ ಬಿಗಿ ಪೊಲೀಸ್ ಬಂದೋಬಸ್ತ್ ಅಳವಡಿಸಲಾಗಿತ್ತು.