ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಳೆ ರಕ್ಷಣೆಗೆ ಸರಳ ಸೂತ್ರಗಳು
ಬೆಂಗಳೂರು, ಜನವರಿ 06 : ಇತ್ತೀಚಿನ ದಿನಗಳಲ್ಲಿ ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಳೆಗೆ ಎಲೆ ಸುರಂಗ ಹಾಗೂ ಕಾಯಿ ಕೊರೆಯುವ ಹುಳುವಿನ ಕೀಟವು ಹಾನಿ ಮಾಡುತ್ತಿದೆ. ಈ ಕೀಟವು ನಮ್ಮ ದೇಶದಲ್ಲಿ ಹೊಸದಾಗಿ ಪರಿಚಯವಾಗಿದ್ದು ಟೊಮ್ಯಾಟೊ ಜಾತಿಗೆ ಸೇರಿದ ಬೆಳೆಗಳನ್ನು ಹಾಳು ಮಾಡುತ್ತಿದೆ.
ಮೊದಲು ಮರಿಹುಳು ಎಳೆಯ ಎಲೆಗಳು, ಹೂವು ಮತ್ತು ಎಳೆಯ ಕಾಂಡವನ್ನು ಕೊರೆಯಲು ಆರಂಭಿಸುತ್ತವೆ. ಈ ಕೀಟವು ಹಸಿರು ಪದಾರ್ಥವನ್ನು ಕೆರೆದು ತಿನ್ನುವುದರಿಂದ ಎಲೆಯ ಮೇಲೆ ಸುರಂಗಗಳನ್ನು ಮತ್ತು ಜಾಲರಿಯಂತಹ ಪದರವನ್ನು ಕಾಣಬಹುದು.
ಮೋದಿ ಮೆಚ್ಚಿ ಗುಡಿ ಕಟ್ಟಿದ ತಮಿಳುನಾಡು ರೈತ
ರೈತರು ರೋಗ ಲಕ್ಷಣವನ್ನು ಗಮನಿಸಿದರೆ ಎಲೆಯ ಎರಡು ಕಡೆ ಮಚ್ಚೆಗಳನ್ನು ಕಾಣಬಹುದು. ಎಲೆಯ ಬೆಳವಣಿಗೆ ಕುಂಠಿತಗೊಂಡು ನಂತರ ಎಲೆಯು ಒಣಗಿ ಉದುರಿ ಹೋಗುತ್ತದೆ. ಎಲೆಗಳು ತೀವ್ರ ಹಾನಿಗೊಳಗಾಗಿ ಸುಟ್ಟಂತೆ ಕಾಣುತ್ತವೆ. ಈ ಕೀಟಗಳ ಹಾವಳಿಯಿಂದ ಹಣ್ಣುಗಳ ಗುಣಮಟ್ಟ ಕಳಪೆಯಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ.
ರಾಷ್ಟ್ರಪಕ್ಷಿಗಳಿಗೆ ವಿಷವಿಟ್ಟ ರಾಜಸ್ತಾನದ ರೈತ!
ಸರಳ ವಿಧಾನಗಳ ಮೂಲಕ ರೈತರು ಎಲೆ ಸುರಂಗ ಹಾಗೂ ಕಾಯಿಕೊರೆಯುವ ಹುಳುವಿನ ನಿರ್ವಹಣೆಯನ್ನು ಮಾಡಬಹುದು. ಉತ್ತಮ ಗುಣಮಟ್ಟದ ಬೆಳೆಗಳನ್ನು ಪಡೆದು ರೈತರು ಲಾಭ ಪಡೆಯಬಹುದಾಗಿದೆ.
ಪ್ರವಾಹದಿಂದ ಬೆಳೆ ನಷ್ಟ; ರೈತರಿಗೆ 10 ಸಾವಿರ ಹೆಚ್ಚುವರಿ ಪರಿಹಾರ
ಬೇಸಾಯದ ವಿಧಾನಗಳು
ರೈತರು ಏಕ ಬೆಳೆ ಪದ್ಧತಿಯನ್ನು ಅನುಸರಿಸದೇ ಆದಷ್ಟು ಬೆಳೆ ಪರಿವರ್ತನೆ ಮಾಡಬೇಕು. ಸಸಿ ಮಡಿ ಹಂತದಲ್ಲಿಯೇ ಈ ಕೀಟವನ್ನು ನಿಯಂತ್ರಿಸುವುದು ಸೂಕ್ತ ಮತ್ತು ಕೀಟ ರಹಿತ ಸಸಿಗಳನ್ನು ನಾಟಿಗೆ ಬಳಸಬೇಕು. ಸಸಿ ಮಡಿಯಿಂದ ಟ್ರೇನಲ್ಲಿ ಸಸಿಗಳನ್ನು ಸಾಗಿಸುವಾಗ ಟ್ರೇಗಳನ್ನು ನೈಲಾನ್ ಪರದೆಯಿಂದ ಕಡ್ಡಾಯವಾಗಿ ಮುಚ್ಚಿ ಸಾಗಾಣಿಕೆ ಮಾಡಬೇಕು ಹಾಗೂ ಸಸಿಗಳನ್ನು ಇಳಿಸಿದ ಜಾಗದಲ್ಲಿಯೂ ಸಹ ನೈಲಾನ್ ಪರದೆಯನ್ನು ಮುಚ್ಚಿರಬೇಕು. ಆಶ್ರಯ ಬೆಳೆಗಳಾದ ಆಲೂಗಡ್ಡೆ ಹಾಗೂ ಬದನೆ ಬೆಳೆಗಳ ಕಡೆ ಸಹ ಗಮನ ಹರಿಸಬೇಕು.
ಹತೋಟಿ ವಿಧಾನಗಳು
ಆರಂಭಿಕ ಹಂತದಲ್ಲಿ ಹಾವಳಿಗೆ ತುತ್ತಾಗಿರುವ ಎಲೆಗಳು ಮತ್ತು ಕಾಯಿಗಳನ್ನು ಕಿತ್ತು ನಾಶಪಡಿಸಬೇಕು. ಬೆಳೆಯ ಕಟಾವಿನ ನಂತರ ಕೂಳೆ ಮತ್ತು ಉಳಿಕೆ ಕಸ ಕಡ್ಡಿಗಳನ್ನು ಸುಟ್ಟು ನಾಶಪಡಿಸಬೇಕು.
60 ವ್ಯಾಟ್ ವಿದ್ಯುತ್ ಬಲ್ಬ್ ಬೆಳಕಿನ ಬಲೆಗಳನ್ನು ಪ್ರತಿ ಎಕರೆಗೆ 4 ರಂತೆ ಬೆಳೆ ಬಿತ್ತುವ ಅಥವಾ ನಾಟಿ ಮಾಡುವುದಕ್ಕೂ 7 ರಿಂದ 10 ದಿನ ಮುಂಚಿತವಾಗಿ ಅಳವಡಿಸಿ ಬೆಳೆಯ ಕೊನೆವರೆಗೂ ಅಳವಡಿಸುವುದರಿಂದ ಕೀಟ ಬಾಧೆ ಹರಡದಂತೆ ತಡೆಯಬಹುದು.
ಮೋಹಕ ಬಲೆಗಳು ಭೂಮಿಯಿಂದ 2 ರಿಂದ 3 ಅಡಿ ಎತ್ತರದಲ್ಲಿ ಕಟ್ಟಬೇಕು. ಪ್ರತಿ ಎಕರೆಗೆ 6 ರಿಂದ 10 ಗಂಡು ಮೋಹಕ ಬಲೆಗಳನ್ನು ಅಳವಡಿಸುವುದು. ಟೊಮ್ಯಾಟೊ ಬೆಳೆಯನ್ನು ನಾಟಿ ಮಾಡಿದ 20 ದಿನಗಳ ನಂತರ ಮೋಹಕ ಬಲೆಗಳನ್ನು ಕಡ್ಡಾಯವಾಗಿ ಬಳಸಬೇಕು.
ಜೈವಿಕ ವಿಧಾನಗಳು
ನಾಟಿ ಮಾಡಲು ಸಿದ್ಧಪಡಿಸಿದ ತಾಕು/ಜಮೀನಿಗೆ ಬೇವಿನ ಹಿಂಡಿ/ ಹೊಂಗೆ ಹಿಂಡಿ ಹಾಕುವುದರಿಂದ ಪ್ರಾರಂಭಿಕ ಹಂತದ ಹಾವಳಿಯಿಂದ ತಡೆಯಬಹುದು (ಒಂದು ಎಕರೆಗೆ 100 ಕೆ.ಜಿ ಬೇವಿನ ಹಿಂಡಿ). ವಾರಕ್ಕೊಮ್ಮೆ (5 ವಾರಗಳು) ಪರಾವಲಂಬಿ ಜೀವಿ, ಟ್ರೈಕೊಗ್ರಾಮಾ ಪ್ರಿಟಿಯೊಸಂನ ಮೊಟ್ಟೆಯ (ಪ್ರತಿ ಎಕರೆಗೆ 40 ಸಾವಿರ ಮೊಟ್ಟೆ) ಚೀಟಿಗಳನ್ನು ಕಟ್ಟಬೇಕು ಹಾಗೂ ಪ್ರಕೃತಿ ದತ್ತವಾಗಿ ಬರುವ ಪರಭಕ್ಷಕ ಕೀಟ, ಜೇಡ ಇತರೆ ಜೀವಿಗಳನ್ನು ಉಳಿಸಿಕೊಳ್ಳುವುದರಿಂದ ಈ ಪತಂಗವನ್ನು ತಡೆಗಟ್ಟಬಹುದು.
ರಾಸಾಯನಿಕ ವಿಧಾನಗಳು
ಈ ಕೀಟದ ಹಾವಳಿಯು ಕಾಯಿ ಕಚ್ಚಿದ ಸಮಯದಲ್ಲಿ ಹೆಚ್ಚಾದರೆ 0.25 ಮಿ.ಲೀ. ಕೋರಾಜೆನ್ ಅಥವಾ 0.25 ಮಿ.ಲೀ. ಸೈಂಟ್ರಾನಿಲಿಪ್ರೋಲ್ ಅಥವಾ 2 ಮಿ.ಲೀ. ಪ್ರೊಪೆನೋಫಾಸ್ ಅಥವಾ 0.60 ಮಿ.ಲೀ. ಲ್ಯಾಂಬ್ಡಾಸೆಹಲೊಥ್ರೀನ್ ಅಥವಾ 1 ಮಿ.ಲೀ. ಡೆಕಾಮೆಥ್ರಿನ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬಹುದು. ಮೇಲಿನ ಕೀಟನಾಶಕಗಳನ್ನು 10-15 ದಿನಗಳ ಅಂತರದಲ್ಲಿ ಎರಡ ರಿಂದ ಮೂರು ಸಲ ಸಿಂಪರಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236. ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೋಲಾರ.