ಗೌರಿ ಆಯಿತು, ಚೌತಿ ಮುಗಿಯಿತು: ಬಿಎಸ್ವೈ ರಾಜ್ಯ ಪ್ರವಾಸದ ಚಕ್ರ ತಿರುಗಲೇ ಇಲ್ಲ, ಕಾರಣ?
"ನಾನು ದುಃಖದಿಂದಲ್ಲ, ಸಂತೋಷದಿಂದಲೇ ರಾಜೀನಾಮೆ ನೀಡುತ್ತಿದ್ದೇನೆ. ರಾಜ್ಯ ಪ್ರವಾಸ ಮಾಡಿ, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ"ಎಂದು ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ವಿದಾಯ ಭಾಷಣದಲ್ಲಿ ಹೇಳಿದಾಗಲೇ, ವರಿಷ್ಠರಿಗೆ ಇನ್ನೊಂದು ಸುತ್ತಿನ ತಲೆನೋವು ಆರಂಭವಾಗಿತ್ತು.
ಯಡಿಯೂರಪ್ಪನವರು ಸಕ್ರಿಯ ರಾಜಕಾರಣದಿಂದ ದೂರ ಇರಬೇಕು ಎನ್ನುವುದು ವರಿಷ್ಠರ ಆಪೇಕ್ಷೆ, ಆದರೆ, ಸದಾ ಹೋರಾಟದ ಬದುಕನ್ನೇ ಕಂಡಿರುವ ಯಡಿಯೂರಪ್ಪನವರಿಗೆ ಸುಮ್ಮನೆ ಕೂರುವುದೆಂದರೆ ಆಗುವುದಿಲ್ಲ. ಹಾಗಾಗಿ, ಮತ್ತೆಮತ್ತೆ ರಾಜ್ಯ ಪ್ರವಾಸದ ಬಗ್ಗೆ ಮಾತನಾಡುತ್ತಿದ್ದಾರೆ.
ಸದನದಲ್ಲಿ ಸಿದ್ದರಾಮಯ್ಯ ಆರ್ಭಟ: ಮೂಲೆಯಲ್ಲಿ ಮಗುಮ್ಮಾಗಿ ಕೂತ ಬಿಎಸ್ವೈ
ರಾಜ್ಯ ಪ್ರವಾಸಕ್ಕಾಗಿ ದುಬಾರಿ ಕಾರ್ ಅನ್ನು ಯಡಿಯೂರಪ್ಪನವರು ಖರೀದಿ ಮಾಡಿರುವುದು ಗೊತ್ತಿರುವ ವಿಚಾರ. ಗೌರಿ ಗಣೇಶ ಹಬ್ಬದ ನಂತರ ರಾಜ್ಯ ಪ್ರವಾಸ ಆರಂಭಿಸುವುದಾಗಿ ಬಿಎಸ್ವೈ ಹೇಳಿದ್ದರು. ಆದರೆ, ಹಬ್ಬ ಮುಗಿದು ಒಂದು ವಾರ ಆದರೂ, ಪ್ರವಾಸದ ಬಗ್ಗೆ ಸುದ್ದಿಯಿಲ್ಲ.
ಸುತ್ತೂರು ಮಠಕ್ಕೆ ಶುಕ್ರವಾರ (ಸೆ 17) ಭೇಟಿ ನೀಡಿ, ಮೈಸೂರಿನ ಬಿಜೆಪಿಯ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು ಭಾಗವಹಿಸಿದ್ದರೂ, ಇದು ಅವರ ಅಧಿಕೃತ ರಾಜ್ಯ ಪ್ರವಾಸದ ಭಾಗವಲ್ಲ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಬಿಎಸ್ವೈ ರಾಜ್ಯ ಪ್ರವಾಸಕ್ಕೆ ತೊಡಕಾಗಿರುವುದು ಏನು?
ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಹತ್ವದ ಹೇಳಿಕೆ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವೊಲಿಕೆಯ ಜವಾಬ್ದಾರಿ
ಯಡಿಯೂರಪ್ಪನವರು ಪದತ್ಯಾಗ ಮಾಡಿದಾಗ ಲಿಂಗಾಯತ ಸಮುದಾಯದ ನಾಯಕರು, ಬಿಜೆಪಿ ವರಿಷ್ಠರ ವಿರುದ್ದ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತ ಪಡಿಸಿದ್ದರು. ಈಗ, ರಾಜ್ಯ ಪ್ರವಾಸಕ್ಕೆ ಹೋಗುವುದನ್ನು ತಡೆದರೆ, ಇನ್ನಷ್ಟು ಸಮಸ್ಯೆಯಾಗಬಹುದು ಎನ್ನುವುದನ್ನು ಅರಿತಿರುವ ಹೈಕಮಾಂಡ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೂಲಕ, ಪ್ರವಾಸ ಸದ್ಯಕ್ಕೆ ಹೋಗದಂತೆ ಅವರ ಮನವೊಲಿಸಿ ಎನ್ನುವ ಜವಾಬ್ದಾರಿಯನ್ನು ಸಿಎಂಗೆ ನೀಡಿದೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ನಳಿನ್ ಕಟೀಲ್ ಜೊತೆಗೆ ಬಿಎಸ್ವೈ ಪ್ರವಾಸ ಕೈಗೊಳ್ಳಲಿದ್ದಾರೆ - ಅರುಣ್ ಸಿಂಗ್
"ಯಡಿಯೂರಪ್ಪನವರು ನಮ್ಮ ನಾಯಕರು, ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಜೊತೆಗೆ ಅವರು ಪ್ರವಾಸ ಕೈಗೊಳ್ಳಲಿದ್ದಾರೆ" ಎಂದು ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದರು. ಇದನ್ನು ನಳಿನ್ ಕಟೀಲ್ ಕೂಡಾ ಪುನರುಚ್ಚಿಸಿದ್ದರು. ಎಲ್ಲಾ ಲೆಕ್ಕಾಚಾರದ ಪ್ರಕಾರ, ಗಣೇಶ ಹಬ್ಬದ ನಂತರ ಪ್ರವಾಸ ಆರಂಭವಾಗಿತ್ತು. ಆದರೆ, ಹೈಕಮಾಂಡ್ ಸಂದೇಶ ಬಂದ ನಂತರವಷ್ಟೇ ಪ್ರವಾಸ ಕೈಗೊಳ್ಳಿ ಎನ್ನುವ ಮೆಸೇಜ್ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಯಡಿಯೂರಪ್ಪನವರು ಅಸೆಂಬ್ಲಿ ಅಧಿವೇಶನದಲ್ಲೂ ಭಾಗವಹಿಸುತ್ತಿದ್ದಾರೆ.
ಹಿಂದೂ ಎಜೆಂಡಾ ಮುಂದಿಟ್ಟುಕೊಂಡು ಬಿಜೆಪಿ ಜನರ ಮುಂದೆ ಹೋಗಲು ಬಯಸಿದೆ
ಮೂಲಗಳ ಪ್ರಕಾರ, ಹಿಂದೂ ಎಜೆಂಡಾ ಮುಂದಿಟ್ಟುಕೊಂಡು ಬಿಜೆಪಿ ಜನರ ಮುಂದೆ ಹೋಗಲು ಬಯಸಿದೆ. ಯಡಿಯೂರಪ್ಪನವರು ಪ್ರವಾಸ ಕೈಗೊಂಡರೆ ಒಂದು ಸಮುದಾಯದ ನಾಯಕರಾಗಿ ಅವರು ಪ್ರವಾಸ ಕೈಗೊಳ್ಳಬಹುದು. ಇದರಿಂದ ಮುಂದಿನ ದಿನಗಳಲ್ಲೂ ಯಡಿಯೂರಪ್ಪನವರ ಪ್ರಭಾವ ರಾಜ್ಯ ಬಿಜೆಪಿಯಲ್ಲಿ ಹಾಗೇ ಉಳಿಯಲಿದೆ ಎನ್ನುವುದು ಒಂದು ಕಡೆಯಾದರೆ, ಇನ್ನೊಂದು ಶಕ್ತಿಕೇಂದ್ರವಾಗುವುದು ಬಿಜೆಪಿ ವರಿಷ್ಠರಿಗೆ ಬೇಕಾಗಿಲ್ಲ. ಇದರಿಂದ ಬೊಮ್ಮಾಯಿಯವರ ಪ್ರಭಾವ ಕಮ್ಮಿಯಾಗಬಹುದು ಎನ್ನುವ ಭಯ ಬಿಜೆಪಿ ದೊಡ್ಡವರಿಗಿದೆ.
ಯಡಿಯೂರಪ್ಪನವರ ಪಕ್ಷ ಬಲವರ್ಧನೆಗಾಗಿ ರಾಜ್ಯ ಪ್ರವಾಸ ವಿಚಾರ, ವರಿಷ್ಠರಿಗೆ ಸದ್ಯಕ್ಕೆ ಬೇಕಾಗಿಲ್ಲ
ಸೆಪ್ಟಂಬರ್ ಮೊದಲ ವಾರದಲ್ಲಿ ಅರುಣ್ ಸಿಂಗ್ ಮೂರು ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಿದ್ದೇ, ಯಡಿಯೂರಪ್ಪನವರು ರಾಜ್ಯ ಪ್ರವಾಸ ಹೋಗದಂತೆ ತಡೆಯುವ ಸಂಬಂಧ ಮಾತುಕತೆ ನಡೆಸಲು ಎಂದು ಹೇಳಲಾಗುತ್ತಿದೆ. ರಾಜ್ಯದ ವಿವಿಧ ಮುಖಂಡರ ಮೂಲಕ, ಯಡಿಯೂರಪ್ಪನವರನ್ನು ಮನವೊಲಿಸುವ ಕೆಲಸ ನಡೆದಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ. ಒಟ್ಟಿನಲ್ಲಿ, ಯಡಿಯೂರಪ್ಪನವರ ಪಕ್ಷ ಬಲವರ್ಧನೆಗಾಗಿ ರಾಜ್ಯ ಪ್ರವಾಸ ವಿಚಾರ, ವರಿಷ್ಠರಿಗೆ ಸದ್ಯಕ್ಕೆ ಬೇಕಾಗಿಲ್ಲ. ಯಡಿಯೂರಪ್ಪ ಏನು ಮಾಡುತ್ತಾರೋ?
Recommended Video