ಕರ್ನಾಟಕ: ಮಕ್ಕಳ ಅಪೌಷ್ಠಿಕತೆ ಸಮರ್ಪಕ ನಿವಾರಣೆ ಆಗಿಲ್ಲ: ಸುಧಾಕರ್
ಬೆಂಗಳೂರು, ಡಿಸೆಂಬರ್ 07: ಅಪೌಷ್ಟಿಕತೆ ಹಾಗೂ ರಕ್ತಹೀನತೆ ನಿವಾರಣೆಗೆ ಆರಂಭಿಕ ಹಂತದಲ್ಲೇ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಆದರೆ ಆರೋಗ್ಯ ಇಲಾಖೆಯಿಂದ ಈ ಕೆಲಸವಾಗಿಲ್ಲ. ಈ ಬಗ್ಗೆ ಗಂಭೀರ ಕ್ರಮ ವಹಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಬುಧವಾರ ನಡೆದ ಅಪೌಷ್ಟಿಕತೆ ಮತ್ತು ರಕ್ತಹೀನತೆ ಮುಕ್ತ ಕರ್ನಾಟಕ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಶಾಲೆ ಸೇರಿದಂತೆ ಮಕ್ಕಳಿರುವ ಜಾಗಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮಾಡಬೇಕು. ಈ ಕುರಿತು ನಾವು ತಪಾಸಣೆ ಗುರಿ ತೋರಿಸುತ್ತೇವೆ. ಆದರೆ ಆತ್ಮಾವಲೋಕ ಮಾಡಿಕೊಂಡರೆ ಸಮರ್ಪಕ ತಪಾಸಣೆ ನಡೆಸದಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಅವೈಜ್ಞಾನಿಕ ರೋಡ್ ಹಂಪ್ಸ್ನಿಂದ ವಾಹನ ಸವಾರರಿಗೆ ಶೀಘ್ರವೇ ಮುಕ್ತಿ
ಮಕ್ಕಳ ಆರೋಗ್ಯ ತಪಾಸಣೆ ಬಗ್ಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಟ್ಟುಗೂಡಿಸಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ) ವ್ಯಾಪ್ತಿಯಲ್ಲಿ ವೈದ್ಯರು ಶಾಲೆಗಳಿಗೆ ಹೋಗುವುದು ಅಥವಾ ಮಕ್ಕಳೇ ಪಿಎಚ್ಸಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕಿದೆ ಎಂದರು.
ತಾಯಂದಿರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
ಆರೋಗ್ಯ ಇಲಾಖೆ ಸುಧಾರಣೆ ಕಾಲದಲ್ಲೂ ತಾಯಂದಿರು ಸಾವನ್ನಪ್ಪುತ್ತಿರುವುದು ಅಪಮಾನದ ಸಂಗತಿಯಾಗಿದೆ. ರಾಜ್ಯದ ಪ್ರತಿ ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ಒಳಪಡಬೇಕು. ಮಹಿಳೆಯರು ಮತ್ತು ತಾಯಂದಿರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಪರಂಪರೆಯಾಗಿ ನಡೆಸಬೇಕು. ಇದಕ್ಕಾಗಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸುಧಾಕರ್ ಮನವಿ ಮಾಡಿದರು.
ಕರ್ನಾಟಕವು ಆರೋಗ್ಯ ವಲಯದಲ್ಲಿ ಉತ್ತಮ ಸುಧಾರಣೆ ಮಾಡಿದೆ. ಆರೋಗ್ಯ ಸೂಚ್ಯಂಕದಲ್ಲೂ ಉತ್ತಮ ಪ್ರಗತಿ ಸಾಧಿಸಿದೆ.
ಆದರೆ ಅಪೌಷ್ಟಿಕತೆ ಹಾಗೂ ರಕ್ತಹೀನತೆ ವಿಚಾರದಲ್ಲಿ ಹಿಂದಿದ್ದೇವೆ. ಈ ಸವಾಲು ಎದುರಿಸಲು ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಮಕ್ಕಳ ಅಪೌಷ್ಠಿಕತೆ ನಿವಾರಿಸದಿದ್ದರೆ ಅನಾರೋಗ್ಯ
ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಪ್ರಕಾರ 2018-2020 ರಲ್ಲಿ ದೇಶದ ತಾಯಿ ಮರಣ ಪ್ರಮಾಣ ಶೇ.97 ರಷ್ಟಿತ್ತು.
2001-2003 ರಲ್ಲಿ ಶೇ.301 ಇತ್ತು. ಅದೇ ರೀತಿ, ಶಿಶು ಮರಣ ಪ್ರಮಾಣ 2005ರಲ್ಲಿ ಶೇ.58 ಆಗಿದ್ದು, 2021 ರಲ್ಲಿ 27ಕ್ಕೆ ಇಳಿಕೆ ಆಯಿತು. ಈ ಬಗ್ಗೆ ಸ್ವಲ್ಪ ಸಮಾಧಾನವಿದ್ದರೂ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಬೇಕಿದೆ ಎಂದು ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಮಗು ಜನಿಸಿದ ನಂತರದ ಎರಡು ವರ್ಷಗಳಲ್ಲೇ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲೇ ಸಮಸ್ಯೆ ಪತ್ತೆ ಮಾಡಿ ಪರಿಹರಿಸದಿದ್ದರೆ ಅದು ಮೆದುಳಿನ ಆರೋಗ್ಯ ಮೇಲೆ ಹಾಗೂ ಶರೀರದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಮಗು ಜನಿಸಿದ ಮೊದಲ 1,000 ದಿನಗಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ನಿವಾರಣೆ ಮಾಡಲು ಕ್ರಮ ವಹಿಸಬೇಕಾಗುತ್ತದೆ. ಹೆಣ್ಣುಮಕ್ಕಳು ಅಪೌಷ್ಟಿಕತೆಗೆ ಒಳಗಾದರೆ, ಅವರು ಭವಿಷ್ಯದಲ್ಲಿ ಮಗುವಿಗೆ ಜನ್ಮ ನೀಡುವಾಗ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವಿವರಿಸಿದರು.
ಆರೋಗ್ಯಕ್ಕಾಗಿ ಇಲಾಖೆಗಳ ಮಧ್ಯೆ ನಮನ್ವಯತೆ ಮುಖ್ಯ
'ಸ್ವಸ್ಥ ಕರ್ನಾಟಕ, ಸುಸ್ಥಿರ ಕರ್ನಾಟಕ' ಎಂಬ ಘೋಷಣೆಯೊಂದಿಗೆ ಪ್ರತಿ ಕನ್ನಡಿಗರು ಆರೋಗ್ಯದಿಂದ ಇರಬೇಕು. ಅಪೌಷ್ಟಿಕತೆ ನಿವಾರಣೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇಲಾಖೆ ನಡುವೆ ಸಮನ್ವಯತೆ ಬೇಕಾಗುತ್ತದೆ. ಇಲ್ಲದಿದ್ದರೆ ಅಪೌಷ್ಟಿಕತೆ ನಿವಾರಣೆ ಸಾಧ್ಯವಿಲ್ಲ. ಆರೋಗ್ಯ ಇಲಾಖೆಯಲ್ಲಿ ಪ್ರತಿ ಬಾರಿ ಸಭೆ ಮಾಡುವಾಗಲೂ, ಐಇಸಿ ಚಟುವಟಿಕೆ ಬಗ್ಗೆ ಹೇಳುತ್ತಿರುತ್ತೇವೆ. ಆದರೂ ಐಇಸಿ ಚಟುವಟಿಕೆಗಳಿಗೆ ಹೆಚ್ಚು ಗಮನ ನೀಡುತ್ತಿಲ್ಲ ಎಂದು ಸುಧಾಕರ್ ಅಭಿಪ್ರಾಯ ಹೊರಹಾಕಿದರು.
ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ
ಬಜೆಟ್ನಲ್ಲಿ ಆರೋಗ್ಯ ವಲಯಕ್ಕೆ ಶೇ.5ರಷ್ಟು ಇಟ್ಟಿರುವ ಮೀಸಲನ್ನು ಶೇ.8ಕ್ಕೆ ಏರಿಸಬೇಕು ಎಂಬುದು ತಜ್ಞರ ಅಭಿಪ್ರಾಯ. ಕೋವಿಡ್ ಕಾಲದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ದೊರೆತಿದೆ. ಆರೋಗ್ಯ ಮೂಲ ಸೌಕರ್ಯವನ್ನು 5ರಿಂದ 6 ಪಟ್ಟು ಹೆಚ್ಚಿಸಲಾಗಿದೆ. ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯದಲ್ಲಿ 6,000 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಗುರಿ ನೀಡಿದೆ. ರಾಜ್ಯದಲ್ಲಿ 8,250 ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಿದ್ದೇವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.