ರಾಮನು ದೇವರಾ ಎಂದು ಪ್ರಶ್ನಿಸುವ ಪ್ರೊ ಕೆಎಸ್ ಭಗವಾನ್ ಸಂದರ್ಶನ
ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರು ರಾಮನ ಬಗ್ಗೆ ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಹೋಗುವವರು ದಡ್ಡರಾಗ್ತಾರೆ ಎಂದು ಆಡಿದ ಮಾತುಗಳು ಮತ್ತೆ ಚರ್ಚೆಗೆ ಕಾರಣವಾಗಿವೆ. ಆ ಹಿನ್ನೆಲೆಯಲ್ಲಿ ಅವರ ಸಂದರ್ಶನ ಮಾಡಿ, ಯಥಾವತ್ ಪ್ರಕಟಿಸಲಾಗುತ್ತಿದೆ.
ಭಗವಾನ್ ರೇ ಈ ಜಗತ್ತು ಹುಚ್ಚಾಸ್ಪತ್ರೆ ಆಗುವ ಅಪಾಯದಿಂದ ತಪ್ಪಿಸಿ...
"ನಮಗೆ ಆದರ್ಶ ಎನಿಸುವ ವ್ಯಕ್ತಿಯನ್ನು ಗೌರವಿಸಿ, ಪೂಜಿಸಿ ಮತ್ತೊಂದು ಮಾಡಿ ಅದು ವೈಯಕ್ತಿಕ ವಿಚಾರ. ಆದರೆ ಎಲ್ಲರೂ ರಾಮನನ್ನು ದೇವರು ಅಂತಾರೆ. ಗರ್ಭಿಣಿಯಾದ ಪತ್ನಿಯನ್ನು ಕಾಡಿಗೆ ಕಳಿಸುವ ಕೆಲಸವನ್ನು ಮನುಷ್ಯತ್ವ ಇರುವವರೇ ಮಾಡುವುದಿಲ್ಲ. ಇನ್ನು ಅಂಥ ಕೆಲಸ ರಾಮ ಮಾಡಿದ ಅಂದರೆ ಆತನನ್ನು ಹೇಗೆ ನೋಡಬೇಕು?" ಎಂದು ಪ್ರಶ್ನಿಸಿದರು ಸಾಹಿತಿ ಹಾಗೂ ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್.
ದೇವಸ್ಥಾನಗಳಿಗೆ ಹೋಗಬೇಡಿ. ಹೋದ್ರೆ ದಡ್ಡರಾಗುತ್ತೀರಿ ಎಂದ ಭಗವಾನ್
ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಅವರಾಡಿದ ಮಾತುಗಳ ವಿಚಾರವಾಗಿ ಆಧಾರವೇನು ಎಂದು ಪ್ರಶ್ನೆ ಮಾಡಲು ಒನ್ ಇಂಡಿಯಾದಿಂದ ಭಗವಾನ್ ಅವರ ಸಂದರ್ಶನ ಮಾಡಲಾಗಿದೆ. ಆ ವೇಳೆ ಮೂಲ ವಾಲ್ಮೀಕಿ ರಾಮಾಯಣದ ಯಾವ ಕಾಂಡ, ಯಾವ ಸರ್ಗ ಹಾಗೂ ಎಷ್ಟನೇ ಶ್ಲೋಕದಲ್ಲಿ ರಾಮನ ವಿಚಾರದ ಬಗ್ಗೆ ಹೀಗೆ ಹೇಳಲಾಗಿದೆ ಎಂಬುದನ್ನು ಹೇಳಿದರು.
'ಚಾಮುಂಡೇಶ್ವರಿ ಅಭಿಸಾರಿಕೆ': ಯೋಗೇಶ್ ಮಾಸ್ಟರ್
"ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋದರೆ ಪೆದ್ದರಾಗ್ತೀರಿ, ದಡ್ಡರಾಗ್ತೀರಿ ಎಂದು ಹೇಳಿದ್ದು ಹೌದು. ಇಂಥ ಶ್ರೀರಾಮನನ್ನು ದೇವರು ಅಂತ ಹೇಳಿದಾಗ ಆ ವ್ಯಕ್ತಿಗೆ ರಾಮನ ಕೆಲಸಗಳೇ ಆದರ್ಶ ಆಗಲ್ಲವೆ? ರಾಮ ಮದಿರೆ ಸೇವಿಸುತ್ತಿದ್ದುದು ಹೌದು. ಗರ್ಭಿಣಿ ಪತ್ನಿಯನ್ನು ಕಾಡಿಗೆ ಅಟ್ಟಿದ್ದು ಹೌದು. ಶಂಭೂಕನನ್ನು ಶೂದ್ರ ಎಂಬ ಕಾರಣಕ್ಕೆ ಕೊಂದಿದ್ದು ಹೌದು. ಇಂಥ ರಾಮನನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬಹುದೆ?" ಎಂದು ಪ್ರಶ್ನಿಸಿದರು.
ವಾಲ್ಮೀಕಿ ರಾಮಾಯಣದ ಉತ್ತರ ಕಾಂಡ
"ದೇವಸ್ಥಾನಗಳಿಗೆ ಹೋದರೆ ಡಿಗ್ರಿಯಂತೂ ಸಿಗಲ್ಲ. ನನ್ನ ಮಾತನ್ನೂ ಪರೀಕ್ಷಿಸದೆ ಖಂಡಿತಾ ಒಪ್ಪಿಕೊಳ್ಳಬೇಡಿ. ವಾಲ್ಮೀಕಿ ರಾಮಾಯಣದಲ್ಲಿ ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿವೆ. ನಾನು ಹೇಳಿದ ವಿಚಾರ ಉತ್ತರ ಕಾಂಡದ 42ನೇ ಸರ್ಗದ 18, 19 ಹಾಗೂ 21, 22ನೇ ಶ್ಲೋಕದಲ್ಲಿ ಏನಿದೆ ಎಂದು ಓದಿಕೊಳ್ಳಿ" ಎಂದು ಹೇಳಿದರು.
ನೀನು ಕೀಳು- ನಾನು ಮೇಲು ಎಂಬ ತಾರತಮ್ಯ
"ನಾನೂ ನಿಮ್ಮಂತೆಯೇ ರಾಮನನ್ನು ದೇವರು ಎಂದು ನಂಬಿದ್ದವನು. ಆದರೆ ಉತ್ತರ ಕಾಂಡವನ್ನು ಓದಿದ ನಂತರ ನನ್ನ ನಂಬಿಕೆಗಳು ಬದಲಾದವು. ಚಾತುರ್ವರ್ಣದ ರಕ್ಷಣೆಯೇ ನನ್ನ ಜವಾಬ್ದಾರಿ ಅಂತ ಹೇಳಿಕೊಳ್ಳುವಾತ ತಾರತಮ್ಯವನ್ನು ಪೋಷಿಸುತ್ತಾನೆ. ನೀನು ಕೀಳು- ನಾನು ಮೇಲು ಎಂದು ಸಮಾಜವನ್ನು ಶ್ರೇಣೀಕರಣ ಮಾಡುವುದು ತಪ್ಪಲ್ಲವಾ?"
ಬ್ರಾಹ್ಮಣನು ದೇವರಿಗೆ ದೇವರೆ?
"ರಾಮನಾಗಲಿ, ಕೃಷ್ಣನನ್ನಾಗಲಿ ನೀವು ದೇವರು ಎಂದು ಕರೆದಿದ್ದೀರಿ. ಆಯಿತು, ನಿಮ್ಮ ನಂಬಿಕೆ ಅದು. ಆದರೆ ಇವರು ಬ್ರಾಹ್ಮಣನ ಪಾದವನ್ನು ತೊಳೆದರು ಎಂಬ ಪ್ರಸ್ತಾವವನ್ನು ಏಕೆ ತರ್ತೀರಿ? ಅಂದರೆ ಬ್ರಾಹ್ಮಣನಾದವನು ದೇವರಿಗೆ ದೇವರು ಅಂತ ಬಿಂಬಿಸುವ ಪ್ರಯತ್ನವೇ? ನೀವು ಮನುಷ್ಯರು, ನಾನೂ ಮನುಷ್ಯ ಅಂದ ಮೇಲೆ ಕೂಡ ಅಲ್ಲಿ ತಾರತಮ್ಯ, ಮೇಲು- ಕೀಳು ಇರಬಾರದು ಅಲ್ಲವಾ?"
ತನ್ನನ್ನೇ ರಕ್ಷಿಸಿಕೊಳ್ಳಲಾಗದ ದೇವರು
ಯಾರಾದರೂ ಸರಿ ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು 'ನನ್ನ ಕಾಪಾಡಪ್ಪ, ರಕ್ಷಿಸಪ್ಪ' ಅಂತ ತಾನೆ? ಈ ದೇಶದ ಮೇಲೆ ಅದೆಷ್ಟು ಸಲ ದಂಡೆತ್ತಿ ಬಂದ ಮಹಮ್ಮದ್ ಘಜ್ನಿ ದೇವಾಲಯಗಳನ್ನು ನಾಶ ಮಾಡಿದ. ವಿಗ್ರಹಗಳನ್ನು ಭಂಗ ಮಾಡಿದ. ಕೆಲವು ಹೊತ್ತೊಯ್ದ. ಆಗ ತನ್ನನ್ನು ತಾನು ಕಾಪಾಡಿಕೊಳ್ಳಲಾಗದ ಆ ದೇವರು ನಿಮ್ಮನ್ನು ರಕ್ಷಿಸುತ್ತಾನೆ ಎಂದು ಯಾವ ತರ್ಕದ ಮೇಲೆ ನಂಬ್ತೀರಿ?
ಆಧಾರ, ಸಾಕ್ಷ್ಯ ಕೇಳಿ
ನೂರಾರು-ಸಾವಿರಾರು ಕೋಟಿ ರುಪಾಯಿ ದೇವಾಲಯ, ಚರ್ಚು, ಮಸೀದಿ ಮತ್ತೊಂದಕ್ಕೆ ಅಂತ ಖರ್ಚು ಮಾಡುತ್ತಿದ್ದಾರೆ. ಅದೇ ಹಣದಲ್ಲಿ ಹಸಿದವರಿಗೆ ಅನ್ನ, ಉಚಿತ ಶಿಕ್ಷಣ, ಅಗತ್ಯ ಇರುವವರಿಗೆ ಮನೆ ಕಟ್ಟಿಸಿಕೊಡುವುದಕ್ಕೆ ಖರ್ಚು ಮಾಡಿ. ಯಾವುದನ್ನೂ ಪರೀಕ್ಷಿಸದೆ ನಂಬಬೇಡಿ. ಆಧಾರವನ್ನು ಕೇಳಿ. ಸಾಕ್ಷ್ಯವನ್ನು ಕೇಳಿ. ಇದು ನನ್ನ ವಿಚಾರ.
ವಿವಾದ ಹೌದೋ ಅಲ್ಲವೋ ಜನ ತೀರ್ಮಾನಿಸಲಿ
ನಾನು ಹೇಳಬೇಕೆನಿಸಿದ ವಿಚಾರ ಸಾಕ್ಷ್ಯ, ಆಧಾರ ಸಮೇತವೇ ಹೇಳ್ತೀನಿ. ಮಾಧ್ಯಮಗಳಲ್ಲಿ ಸುದ್ದಿ ಮಾಡುವಾಗ ಶೀರ್ಷಿಕೆಯಲ್ಲೇ ವಿವಾದಾತ್ಮಕ ಹೇಳಿಕೆ ಅಂದುಬಿಡ್ತಾರೆ. ಪೂರ್ತಿಯಾಗಿ ವಿಚಾರ ತಿಳಿಸುವುದಿಲ್ಲ. ಆಯ್ದ ವಿಚಾರವನ್ನಷ್ಟೇ ಅರೆಬರೆಯಾಗಿ ವರದಿ ಮಾಡ್ತಾರೆ. ತಿಳಿಸಿದ ವಿಚಾರವನ್ನು ಪೂರ್ತಿಯಾಗಿ ನನ್ನ ಭಾಷೆಯಲ್ಲಿ ದಾಟಿಸಬೇಕು. ವಿವಾದ ಹೌದೋ ಅಲ್ಲವೋ ಅದನ್ನು ಜನರು ಪರೀಕ್ಷಿಸಲಿ ಅನ್ನೋದು ನನ್ನ ಅಭಿಪ್ರಾಯ.
ಬೌದ್ಧ ಧರ್ಮ ಹೃದಯಕ್ಕೆ ಹತ್ತಿರ
ಬೌದ್ಧ ಧರ್ಮದಲ್ಲಿ ಹೇಳಿರುವ ವಿಚಾರಗಳು ಮಾನವೀಯತೆಗೆ ಪೂರಕವಾಗಿವೆ ಹಾಗೂ ಸಾಧನೆಗೆ ಹತ್ತಿರದಲ್ಲಿದೆ. ಆ ಕಾರಣಕ್ಕೆ ಆ ಧರ್ಮದಲ್ಲಿ ಹೇಳಿದ ವಿಚಾರ ನನ್ನ ಹೃದಯಕ್ಕೆ ತುಂಬ ಹತ್ತಿರ. ಇಷ್ಟು ಸಾವಿರ ವರ್ಷಗಳ ನಂತರ ಕೂಡ ಆ ಧರ್ಮ ಗಟ್ಟಿಯಾಗಿ ಉಳಿದಿದೆ ಅಂದರೆ ತತ್ವಗಳ ಕಾರಣಕ್ಕೆ. ಹಿಂದೂ ಧರ್ಮದ ಆಚರಣೆಗೆ ಸಂಬಂಧಿಸಿದಂತೆ ಕೂಡ ನಾನು ಹೇಳುವುದು, ಧರ್ಮದ ಹೇರಿಕೆಯನ್ನು ಸಹಿಸಬೇಡಿ. ಮೌಢ್ಯ ಬಿತ್ತುವಾಗ ಪ್ರಶ್ನೆ ಮಾಡಿ. ಒಂದು ನಿರ್ದಿಷ್ಟ ಗುಂಪು ಅಥವಾ ಸಮುದಾಯ ದಾರಿ ತಪ್ಪಿಸುತ್ತಿದೆ. ಅದರ ಬಗ್ಗೆ ಎಚ್ಚರವಾಗಿ. ಪೂಜೆ-ಪುನಸ್ಕಾರಗಳಿಂದ ಏನೂ ಸಾಧನೆ ಆಗಲ್ಲ. ಭಾವ ಸಮಾಧಿ, ಸವಿಕಲ್ಪ ಸಮಾಧಿ, ನಿರ್ವಿಕಲ್ಪ ಸಮಾಧಿ ಬಗ್ಗೆ ತಿಳಿದುಕೊಳ್ಳಿ.