ಕರ್ನಾಟಕದ ಪದ್ಮಶ್ರೀ ಪುರಸ್ಕೃತರ ವ್ಯಕ್ತಿ ಚಿತ್ರಣ
ಬೆಂಗಳೂರು, ಜನವರಿ 26: ಗಣರಾಜ್ಯೋತ್ಸವ ಮುನ್ನ ದಿನ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದ 5 ಕನ್ನಡಿಗರಿಗರು ಸೇರಿದಂತೆ 112 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ಪೈಕಿ ನಾಲ್ವರಿಗೆ ಪದ್ಮವಿಭೂಷಣ, 14 ಜನರಿಗೆ ಪದ್ಮಭೂಷಣ ಮತ್ತು 94 ಪದ್ಮಶ್ರೀ ಗೌರವ ಸಂದಿದೆ. ಅಚ್ಚರಿಯೆಂದರೆ ಈ ಬಾರಿ ಕರ್ನಾಟಕದ ಒಬ್ಬರಿಗೂ ಪದ್ಮವಿಭೂಷಣವಾಗಲಿ, ಪದ್ಮಭೂಷಣವಾಗಲಿ ಘೋಷಣೆಯಾಗಿಲ್ಲ. ಇನ್ನೂ ವಿಶೇಷವೆಂದರೆ ಪದ್ಮಶ್ರೀ ಪಡೆದ ಐವರ ಪೈಕಿ ಒಬ್ಬರು ಮಹಾರಾಷ್ಟ್ರ ಮೂಲದ ವಿಜ್ಞಾನಿ ಆಗಿದ್ದರೆ , ಮತ್ತೊಬ್ಬರು ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿಗೆ ವಲಸೆ ಹೋಗಿ ನೃತ್ಯಪಟು, ನಾಯಕ ನಟ ಉಳಿದ ಮೂವರಲ್ಲಿ ಸಾಲುಮರದ ತಿಮ್ಮಕ್ಕ ಒಬ್ಬರೇ ಕರ್ನಾಟಕದಲ್ಲೇ ಸಾಧನೆ ಗೈದವರು.
ಪ್ರಣಬ್ ಮುಖರ್ಜಿ, ನಾನಾಜಿ, ಭೂಪೇನ್ ಹಜಾರಿಕಾಗೆ ಭಾರತರತ್ನ
ಸಾಲುಮರದ ತಿಮ್ಮಕ್ಕನ ಸಾಧನೆಗಳು
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಹುಟ್ಟಿ ಬೆಳದ ಕನ್ನಡತಿ, ಚಿಕ್ಕರಂಜಯ್ಯ ಮತ್ತು ವಿಜಯಮ್ಮ ದಂಪತಿಯ ಪುತ್ರಿ, ಮಕ್ಕಳಾಗಿಲ್ಲ ಎಂಬ ಕಾರಣಕ್ಕಾಗಿ ರಸ್ತೆ ಬದಿಗಳಲ್ಲಿ ಸಾವಿರಾರು ಮರಗಳನ್ನು ನೆಟ್ಟು ಬೆಳೆಸಿದ ಹೆಮ್ಮೆಯ ಪರಿಸರವಾದಿ. ಮಾಗಡಿಯ ಚಿಕ್ಕಯ್ಯ ಅವರು ಮದುವೆಯಾದ ತಿಮ್ಮಕ್ಕ ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅನಕ್ಷರಸ್ಥೆಯಾಗಿಯೂ ಪರಿಸರದ ಕಾಳಜಿ ಹೊಂದಿದ್ದರು. ತಿಮ್ಮಕ್ಕನ ಸಾಧನೆಯ ಬಗ್ಗೆ ಬಿಬಿಸಿ ಕೂಡ ವರದಿಮಾಡಿತ್ತು.
ಶಾರದಾ ಶ್ರೀನಿವಾಸನ್ ಸಾಧನೆಗಳು
ಶಾರದಾ ಶ್ರೀನಿವಾಸನ್ ಅವರು ಅಣು ವಿಜ್ಞಾನಿ ಮಾಲೂರು ಶ್ರೀನಿವಾಸನ್ ಅವರ ಪುತ್ರಿ, ಸದ್ಯ ಬೆಂಗಳೂರಿನ ನ್ಯಾಷನಲ್ ಸ್ಟಡೀಸ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಪ್ರೊಫೆಸರ್ ಆಗಿದ್ದಾರೆ. ಕಲೆ, ಸಂಸ್ಕೃತಿ, ಪುರಾತತ್ವಶಾಸ್ತ್ರದ ವೈಜ್ಞಾನಿಕ ಅಧ್ಯಯನದಲ್ಲಿ ಇವರು ಸಾಧನೆ ಮಾಡಿದ್ದಾರೆ. ಐಐಟಿ ಮುಂಬೈನಲ್ಲಿ ಬಿಟೆಕ್ ಪದವಿ, ಯೂನಿವರ್ಸಿಟಿ ಆಫ್ ಲಂಡನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಭರತನಾಟ್ಯದಲ್ಲೂ ಸಾಧನೆ ಮಾಡಿದ್ದಾರೆ. ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಗೌರವ
ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರ ಸಾಧನೆಗಳು
ಹಿಂದಿ, ತಮಿಳು ಚಿತ್ರರಂತಗದಲ್ಲಿ ಗುರುತಿಸಿಕೊಂಡಿರುವ ಪ್ರಭುದೇವ ಮೈಸೂರು ಮೂಲದವರು, ಮೂಗೂರು ಸುಂದರ್ ಮತ್ತು ಮಹದೇವಮ್ಮ ಸಂಪತಿಯ ಪುತ್ರ. ಪ್ರಭುದೇವ ಬಾಲಿವುಡ್ ಸೇರಿ ದಕ್ಷಿಣ ಭಾರತದ ಸಿನೆಮಾ ಕ್ಷೇತ್ರಗಳಲ್ಲಿ ಭಾರತದ ಮೈಕೆಲ್ ಜಾಕ್ಸನ್ ಎಂದು ಕರೆಸಿಕೊಂಡವರು. ಸಾಂಪ್ರದಾಯಿಕ ನೃತ್ಯ ಭರತನಾಟ್ಯ ಸೇರಿ ಬಹುತೇಕ ನೃತ್ಯ ಪ್ರಕಾರಗಳಲ್ಲಿ ಸಿದ್ಧಹಸ್ತರೆನಿಸಿಕೊಂಡಿದ್ದಾರೆ. ಉತ್ತಮ ನೃತ್ಯ ನಿರ್ದೇಶನಕ್ಕೆ ಫಿಲ್ಮ್ಫೇರ್ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ರಾಜೀವ್ ತಾರಾನಾಥ್ ವ್ಯಕ್ತಿಚಿತ್ರಣ
ಸರೋದ್ ವಾದಕರಾದ ರಾಜೀವ್, ಮೊದಲಿಗೆ ತಮ್ಮ ತಂದೆ ಪಂಡಿತ್ ತಾರಾನಾಥ್ ಅವರಿಂದ ಸಂಗೀತ ತರಬೇತಿಯನ್ನು ಪಡೆದರು. 9ನೇ ವರ್ಷದಲ್ಲೇ ಮೊದಲು ಸಾರ್ವಜನಿಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸಾಹಿತ್ಯದಲ್ಲಿ ಪಿಎಚ್ಡಿ ಪೂರೈಸಿದ ಅವರು ಇಂಗ್ಲಿಷ್ ಉಪನ್ಯಾಸಕರ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಅಲಿ ಅಕ್ಬರ್ ಖಾನ್ ಅವರಿಂದ ಸಂಗೀತ ಕಲಿಯಲೆಂದು ಕೋಲ್ಕತ್ತಕೆ ಹೋದರು.
ರೋಹಿಣಿ ಗೋಡ್ಬೋಲೆ ಸಾಧನೆಗಳು
ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಮಹಾರಾಷ್ಟ್ರ ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಚಿಜ್ಞಾನಿ ಪ್ರೊ. ರೋಹಿಣಿ ಗೋಡ್ಬೋಲೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಮೂರು ದಶಕಗಳಿಂದ ರೋಹಿಣಿ ಭೌತವಿಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 1979ರಲ್ಲಿ ಸ್ಟೋನಿ ಬ್ರೂಕ್ನಲ್ಲಿರುವ ನ್ಯೂಯಾರ್ಕ್ ವಿವಿಯಿಂದ ಥಿಯೋರಾ ಟಿಕಲ್ ಪಾರ್ಟಿಕಲ್ ಫಿಜಿಕ್ಸ್ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.