ವಿದೇಶದಲ್ಲಿದ್ದಾನೆ ವಿಚಾರವಾದಿ ಎಂ. ಎಂ. ಕಲಬುರ್ಗಿ ಹಂತಕ
ಬೆಂಗಳೂರು, ಜೂನ್ 2: ವಿಚಾರವಾದಿ ಎಂ. ಎಂ. ಕಲಬುರ್ಗಿ ಕೊಲೆಗೀಡಾಗಿ ಎರಡು ವರ್ಷಗಳು ಸಂದಿವೆ. ಇದೀಗ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಒಂದಷ್ಟಾದರೂ ಪ್ರಗತಿ ಕಾಣಿಸಿಕೊಂಡಿದೆ. ನಿರ್ಗಮಿತ ಗೃಹ ಸಚಿವ ಡಾ ಜಿ ಪರಮೇಶ್ವರ್, 'ಕಲಬುರ್ಗಿ ಹಂತಕ ವಿದೇಶಗಳಲ್ಲಿ ಅಡಗಿಕೊಂಡಿದ್ದು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ' ಎಂದು ಹೇಳಿದ್ದಾರೆ.
ತಮ್ಮ ರಾಜೀನಾಮೆ ದಿನ ಮಾಧ್ಯಮಗಳ ಜತೆ ಮಾತನಾಡಿದ ಅವರು ಕರ್ನಾಟಕದ ಸಿಐಡಿ ಇತಿಹಾಸದಲ್ಲೇ ಅತೀ ದೊಡ್ಡ ಹುಡುಕಾಟ ಜಾರಿಯಲ್ಲಿದೆ. "ನಮಗಿರುವ ಮಾಹಿತಿಗಳ ಪ್ರಕಾರ ಕಲಬುರ್ಗಿ ಹಂತಕರು ವಿದೇಶಗಳಲ್ಲಿದ್ದಾರೆ. ಸಿಐಡಿ ಇತಿಹಾಸದಲ್ಲೇ ಅತೀ ದೊಡ್ಡ ಹುಡುಕಾಟವೊಂದು ನಡೆಯುತ್ತಿದೆ. ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ ಎನ್ನುವುದು ಸರಿಯಲ್ಲ," ಎಂದು ಅವರು ಹೇಳಿದ್ದಾರೆ. ಆದರೆ, ತನಿಖೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.[ಎಂ.ಎಂ.ಕಲಬುರ್ಗಿ ಅವರ ಮೇಲೆ ದಾಳಿ ನಡೆದಿದ್ದು ಹೇಗೆ?]
ಇಲ್ಲಿಯವರೆಗೆ ಕೊಲೆ ಪ್ರಕರಣದಲ್ಲಿ ಸಿಐಡಿ ಯಾರನ್ನೂ ಬಂಧಿಸಿಲ್ಲ. ಇನ್ನು ನರೇಂದ್ರ ಧಾಬೋಲ್ಕರ್, ಗೋವಿಂದ್ ಪನ್ಸಾರೆ ಮೊದಲಾದ ವಿಚಾರವಾದಿಗಳ ಕೊಲೆ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರು ಹಾಗೂ ಸಿಬಿಐ ಜತೆಗೂ ಕರ್ನಾಟಕದ ಪೊಲೀಸರು ಸಂಪರ್ಕದಲ್ಲಿದ್ದಾರೆ.[ಕಲಬುರ್ಗಿ ಹತ್ಯೆಗೆ ಒಂದು ವರ್ಷ, ತನಿಖೆ ಎತ್ತ ಸಾಗಿದೆ?]
ಕಲಬುರ್ಗಿಯವರ ಮೇಲೆ ಹಾರಿಸಲಾದ ಗುಂಡಿನ ಮಾದರಿಗಳನ್ನು ಸ್ಕಾಟ್ಲಾಂಡ್ ಯಾರ್ಡ್ ಪೊಲೀಸರಿಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಕಲಬುರ್ಗಿಯವರ ಮೇಲೆ ಹಾರಿಸಲಾದ ಗುಂಡು ಹಾಗೂ ವಿಚಾರವಾದಿಗಳ ಮೇಲೆ ಹಾರಿಸಲಾದ ಗುಂಡು ಒಂದೇ ರೀತಿಯದ್ದು ಎಂದು ಸಿಐಡಿ ಪೊಲೀಸರು ಪ್ರತಿಪಾದಿಸಿದ್ದಾರೆ. ನಾಡ ಬಂದೂಕಿನಿಂದ ಈ ಗುಂಡುಗಳನ್ನು ಹಾರಿಸಲಾಗಿದೆ ಎಂಬುದು ಸಿಐಡಿ ವಾದ.['ಆಗ ಬರಹಗಾರರೆಲ್ಲ ದಿವ್ಯ ಮೌನಕ್ಕೆ ಶರಣಾಗಿದ್ದರಂತೆ']
ಧಾಬೋಲ್ಕರ್ ಹಾಗೂ ಪನ್ಸಾರೆ ಕೊಲೆ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದರೆ ಕಲಬುರ್ಗಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿಲ್ಲ. ಮಾತ್ರವಲ್ಲ ಕೊಲೆಗೆ ಕಾರಣಗಳು ಏನು ಎಂಬುದೂ ಪತ್ತೆಯಾಗಿಲ್ಲ. (ಒನ್ ಇಂಡಿಯಾ ಸುದ್ದಿ)