ಶ್ರೀರಾಮ ಸ್ತ್ರೀಲೋಲನಂತೆ, ಮದ್ಯ ಸೇವಿಸುತ್ತಿದ್ದನಂತೆ!
ರಾತ್ರಿ ಬೆಳಗಾಗುವುದರೊಳಗೆ ಹೆಸರು ಮಾಡಲು ಏನು ಮಾಡಬೇಕು? ಹಿಂದೂ ದೇವಾನುದೇವತೆಗಳನ್ನು ಮನಬಂದಂತೆ ಟೀಕಿಸಿದರೆ ಇದು ಸಾಧ್ಯ ಎನ್ನುವುದನ್ನು ಕೆಲ ವಿಚಾರವಾದಿಗಳು ಕಂಡುಕೊಂಡಿರುವ ಸತ್ಯ.
ಇಂತಹ ವಿಚಾರವಾದಿಗಳಿಗೆ ಇತರ ಕೋಮಿನಲ್ಲಿನ ನಂಬಿಕೆಯನ್ನು ಪ್ರಶ್ನಿಸುವ ತಾಕತ್ತಿಲ್ಲವೇ ಎನ್ನುವುದು ಇಲ್ಲಿ ಪ್ರಶ್ನೆಯಲ್ಲದಿದ್ದರೂ, ಬಹುಸಂಖ್ಯಾತ ಹಿಂದೂ ಧರ್ಮೀಯರ ಧಾರ್ಮಿಕ ನಂಬಿಕೆಗಳನ್ನು ಟೀಕಿಸುವ ಹಕ್ಕನ್ನು ಇಂತಹ ವಿಚಾರವಾದಿಗಳಿಗೆ ನೀಡಿದವರು ಯಾರು ಎನ್ನುವುದು?
ಹಿಂದೂ ಪೂಜಾಪದ್ದತಿ, ದೇವರು, ಗ್ರಂಧಗಳ ಬಗ್ಗೆ ಎಲುಬಿಲ್ಲದ ನಾಲಿಗೆಯ ಇವರ ಹೇಳಿಕೆಗಳಿಗೆ, ಟೀಕೆ ಪ್ರತಿಭಟನೆ ವ್ಯಕ್ತವಾದರೂ ಮತ್ತೆ ಮತ್ತೆ ಬಹುಧರ್ಮೀಯರ ಮನಸ್ಸು ನೋಯಿಸುವ, ತಾಳ್ಮೆ ಪರೀಕ್ಷಿಸುವ ಹೇಳಿಕೆಗಳಿಗೆ ಕೊನೆಯೇ ಇಲ್ಲ. (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ತರವಲ್ಲ)
ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲಿ ತಮಗೆ ಅನಿಸಿದ ವಿಷಯಗಳನ್ನು ಬರೆಯುವ/ಹೇಳುವ ಅಧಿಕಾರ ಎಲ್ಲರಿಗೂ ಇದ್ದು, ಆ ಅಧಿಕಾರವನ್ನು ಯಾರೂ ಕಸಿದುಕೊಳ್ಳುವಂತಿಲ್ಲ ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ, ಜನತೆಯ ನಂಬಿಕೆಯನ್ನು ಅಪನಂಬಿಕೆಯತ್ತ ಕರೆದೊಯ್ಯುವ ಹಕ್ಕು ಇವರಿಗಿದೆಯೇ?
ಹಿಂದೂ ದೇವತೆಗಳನ್ನು, ಧರ್ಮವನ್ನು ಅವಹೇಳನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಲವಾದ ಕಾನೂನು ಜಾರಿಗೆ ತರಬೇಕು ಎಂದು ಪೀಠಾಧಿಪತಿಗಳು ಸೇರಿದಂತೆ ಹಲವಾರು ಜನ ರಾಜ್ಯ ಸರಕಾರವನ್ನು ಆಗ್ರಹಿಸಿದ್ದೂ ಆಗಿದೆ. ಸರಕಾರ ಇದರ ಬಗ್ಗೆ ಸೊಲ್ಲೆತ್ತುತ್ತಿಲ್ಲ.(ಚಾಮುಂಡೇಶ್ವರಿ ಅಭಿಸಾರಿಕೆ)
ಭಗವದ್ಗೀತೆಯನ್ನು ಸುಟ್ಟು ಬಿಡುತ್ತೇನೆ ಎಂದಿದ್ದ ಪ್ರೊ. ಕೆ ಎಸ್ ಭಗವಾನ್, ರಾಮನವಮಿಯ ಮರುದಿನ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಭು ಶ್ರೀರಾಮಚಂದ್ರನ ವಿರುದ್ದ ಹೇಳಿಕೆ ನೀಡಿ, ಹಿಂದೂಗಳ ನಂಬಿಕೆಯ ಮೇಲೆ ಮತ್ತೆ ಪ್ರಹಾರ ಮಾಡಿದ್ದಾರೆ.
ಕೆ ಎಸ್ ಭಗವಾನ್ ಹೇಳಿದ್ದೇನು?
ಹಿಂದೂಗಳಲ್ಲಿ ಶ್ರೀರಾಮಚಂದ್ರ ಎಂದರೆ ಮರ್ಯಾದಾ ಪುರುಷೋತ್ತಮ, ಪಿತೃವಾಕ್ಯ ಪರಿಪಾಲಕ, ಏಕಪತ್ನೀವ್ರತಸ್ಥ ಎನ್ನುವ ನಂಬಿಕೆಯಿದೆ. ಆದರೆ ಅದೆಲ್ಲಾ ಸುಳ್ಳು ಎಂದು ಕೆ ಎಸ್ ಭಗವಾನ್, ದಾವಣಗೆರೆಯಲ್ಲಿ ಭಾನುವಾರ (ಮಾ 30) ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಶ್ರೀರಾಮ ದೇವರೇ ಅಲ್ಲ
ಬಹುಧರ್ಮೀಯರು ಶ್ರೀರಾಮನನ್ನು ದೇವರೆಂದು ಪೂಜಿಸುತ್ತಾರೆ. ಆದರೆ ಅವನು ದೇವರಲ್ಲ, ಎಲ್ಲರಂತೆ ಮನುಷ್ಯ. ಅವನು ಪರಸ್ತ್ರೀಯರ ಸಂಬಂಧ ಇಟ್ಟುಕೊಂಡಿದ್ದ - ಕೆ ಎಸ್ ಭಗವಾನ್
ಶ್ರೀರಾಮ ಮದ್ಯ ಸೇವಿಸುತ್ತಿದ್ದ
ಶ್ರೀರಾಮ, ಸೀತೆ ಜೊತೆಗೂಡಿ ಮದ್ಯ ಸೇವಿಸುತ್ತಿದ್ದ. ಮದ್ಯ ಸೇವಿಸಿ ಪರಸ್ತ್ರೀಯರೊಂದಿಗೆ ಮೋಜು ಮಾಡುತ್ತಿದ್ದ ಎಂದು ವಾಲ್ಮೀಕಿಯೇ ಹೇಳಿದ್ದಾರೆ. ಹಾಗಿದ್ದಾಗ ಶ್ರೀರಾಮಚಂದ್ರ 'ಮರ್ಯಾದಾ ಪುರುಷೋತ್ತಮ' ಆಗಲು ಹೇಗೆ ಸಾಧ್ಯ ಎಂದು ಭಗವಾನ್ ಲೇವಡಿ ಮಾಡಿದ್ದಾರೆ.
ಗೀತೆ ಸುಡುತ್ತೇನೆಂದಿದ್ದ ಭಗವಾನ್
ಮೇಲ್ನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುತ್ತದೆ. ಭಗವದ್ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರೇನೂ ಇಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ, ಸಭಾಧ್ಯಕ್ಷರು ಅನುಮತಿ ನೀಡಿದರೆ ಭಗವದ್ಗೀತೆಯನ್ನು ಸುಟ್ಟು ಹಾಕುತ್ತೇನೆಂದು ವಿಚಾರವಾದಿ ಪ್ರೊ. ಭಗವಾನ್ ವಿವಾದಕಾರಿ ಹೇಳಿಕೆ ನೀಡಿ ಪ್ರತಿಭಟನೆ ಎದುರಿಸಿದ್ದರು.
ಢುಂಡಿ ಕಾದಂಬರಿ
ಈ ಹಿಂದೆ ಢುಂಡಿ ಕಾದಂಬರಿಯಲ್ಲಿ ಹಿಂದೂ ದೇವರಾದ ಗಣಪತಿ, ಶಿವ, ಪಾರ್ವತಿ ಕುರಿತು ಅವಹೇಳನಕಾರಿಯಾಗಿ ಲೇಖಕ ಯೋಗೀಶ್ ಮಾಸ್ಟರ್ ಬರೆದಿದ್ದರು.