ಜೋಗದ ಸಿರಿ ಬೆಳಕಿನಲ್ಲಿ ಮರೆಯಾದ ನಿತ್ಯೋತ್ಸವ ಕವಿ
ಬೆಂಗಳೂರು, ಮೇ 03: ನಿತ್ಯೋತ್ಸವದ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರು ವಯೋಸಹಜ ಖಾಯಿಲೆಗಳಿಂದ ನಿಧರಾಗಿದ್ದಾರೆ. ನಿತ್ಯೋತ್ಸವ ಕವಿ ಎಂದೆ ತಮ್ಮ ಜೋಗದ ಸಿರಿ ಬೆಳಕಿನಲ್ಲಿ ಕವನದಿಂದ ಪ್ರಸಿದ್ಧರಾಗಿದ್ದ ನಿಸಾರ್ ಅಹಮ್ಮದ್ ಕೊಟ್ಯಂಟರ ಸಾಹಿತ್ಯಾಸಕ್ತರನ್ನು ಅಗಲಿದ್ದಾರೆ. ದೇವನಹಳ್ಳಿಯಲ್ಲಿ ಫೆಬ್ರುವರಿ 5, 1936ರಲ್ಲಿ ಜನಿಸಿದ್ದರು. 2006ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಹಮದ್ ರವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್.
ನಿತ್ಯೋತ್ಸವದ ಕವಿ ನಿಸಾರ್ ಅಹಮದ್ರವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ. ತಂದೆ ಷೇಕ್ ಹೈದರ್, ತಾಯಿ ಹಮೀದಾ ಬೇಗಂ. ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರ್ ಅವರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿ. ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್ ಪದವಿ. ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳು. ಕನ್ನಡದಲ್ಲಿ ಆಸಕ್ತಿ ಬೆಳೆಯಲು ಇವರೆಲ್ಲರೂ ಕಾರಣರು.
ಕರ್ನಾಟಕದ ಹಿರಿಯ ಕವಿ ಕೆ. ನಿಸಾರ್ ಅಹಮದ್ ವಿಧಿವಶ
1957-58ರಲ್ಲಿ ಭೂವಿಜ್ಞಾನಿಯಾಗಿ ಆಯ್ಕೆಯಾಗಿ ಉದ್ಯೋಗ ಆರಂಭಿಸಿದ್ದು ಕಲಬುರಗಿಯಲ್ಲಿ . ಕೆಲಸದಲ್ಲಿ ತೃಪ್ತಿ ದೊರೆಯದೆ ಎಂ.ಎಸ್ಸಿ. ಮುಗಿಸಿ ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ. ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿದ್ದಾಗ ನಿವೃತ್ತಿ.
ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ 'ಚಂದನ' ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ. ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರು. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಭಾವಗೀತೆಯ ಕ್ಯಾಸೆಟ್ ತಂದ ಕೀರ್ತಿ. ನಿತ್ಯೋತ್ಸವ, ಸುಶ್ರಾವ್ಯ, ನವೋಲ್ಲಾಸ, ಸುಮಧುರ. ಅಪೂರ್ವ, ಹೊಂಬೆಳಕು ಕ್ಯಾಸೆಟ್ಟುಗಳ ಬಿಡುಗಡೆ.
ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭ. "ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ ಸುಮಾರು 5 ದಶಕಗಳಿಂದ 25 ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಹೀಗಿವೆ..
ಮನಸು ಗಾಂಧಿ ಬಜಾರು (1960)
ನೆನೆದವರ ಮನದಲ್ಲಿ (1964)
ಸುಮಹೂರ್ತ (1967)
ಸಂಜೆ ಐದರ ಮಳೆ (1970)
ನಾನೆಂಬ ಪರಕೀಯ (1972)
ಆಯ್ದ ಕವಿತೆಗಳು (1974)
ನಿತ್ಯೋತ್ಸವ (1976)
ಸ್ವಯಂ ಸೇವೆಯ ಗಿಳಿಗಳು (1977)
ಅನಾಮಿಕ ಆಂಗ್ಲರು(1982),
ಬರಿರಂತರ (1990)
ಸಮಗ್ರ ಕವಿತೆಗಳು (1991)
ನವೋಲ್ಲಾಸ (1994)
ಆಕಾಶಕ್ಕೆ ಸರಹದ್ದುಗಳಿಲ್ಲ (1998)
ಅರವತ್ತೈದರ ಐಸಿರಿ(2001)
ಸಮಗ್ರ ಭಾವಗೀತೆಗಳು(2001)
ಪ್ರಾತಿನಿಧಿಕ ಕವನಗಳು(2002)
ನಿತ್ಯೋತ್ಸವ ಕವಿತೆ
ಗದ್ಯ ಸಾಹಿತ್ಯ
'ಅಚ್ಚುಮೆಚ್ಚು'
'ಇದು ಬರಿ ಬೆಡಗಲ್ಲೊ ಅಣ್ಣ'
ಷೇಕ್ಸ್ ಪಿಯರ್ನ ಒಥೆಲ್ಲೊದ ಕನ್ನಡಾನುವಾದ
--------------
2006 ರ ಮಾಸ್ತಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ
1981 ರ ರಾಜ್ಯೋತ್ಸವ ಪ್ರಶಸ್ತಿ
2003 ರ ನಾಡೋಜ ಪ್ರಶಸ್ತಿ
2006 ರ ಅರಸು ಪ್ರಶಸ್ತಿ
2006 ಡಿಸೆಂಬರ್ನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.