ಖರ್ಗೆಯವರೇ, ಹೈ-ಕ ಭಾಗದ ಸೇವಾನಿರತ ಅಭ್ಯರ್ಥಿಗಳಿಗೆ ಇದೆಂಥ ಅನ್ಯಾಯ?
Recommended Video
ಪ್ರಾಂತ್ಯಗಳು ಅಥವಾ ನಿರ್ದಿಷ್ಟ ಪ್ರದೇಶಗಳು ಅಭಿವೃದ್ಧಿ ಆಗದಿದ್ದಾಗ ಆ ಭಾಗದ ಜನರಿಗೆ ಕೆಲವು ಸವಲತ್ತುಗಳನ್ನು ಕಾದಿರಿಸುವುದು ಹಾಗೂ ಅನುಕೂಲಗಳನ್ನು ಕಲ್ಪಿಸುವುದು ಸರಕಾರದ ಜವಾಬ್ದಾರಿ. ಹೈದರಾಬಾದ್- ಕರ್ನಾಟಕ ಭಾಗ ಎಂದು ಕರೆಸಿಕೊಳ್ಳುವ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ಆಗಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿಗೆ ಅಂಥದ್ದೊಂದು ಅನುಕೂಲ ಕಲ್ಪಿಸಲಾಗಿದೆ.
371J ಅಡಿಯಲ್ಲಿ ಹೈದರಾಬಾದ್- ಕರ್ನಾಟಕದ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಪ್ರತ್ಯೇಕ ವೃಂದ ಹಾಗೂ ಈಗಾಗಲೇ ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಬಡ್ತಿಯಲ್ಲಿ ಹೈ-ಕ ವೃಂದದಲ್ಲಿ 8% ನಿಗದಿ ಮಾಡಲಾಗಿದೆ. ಅಂದರೆ ನೂರು ಬಡ್ತಿ ಹುದ್ದೆಗಳಿವೆ ಅಂದರೆ ಹೈದರಾಬಾದ್ ಕರ್ನಾಟಕ ವೃಂದಕ್ಕೆ ಎಂಟು ಹುದ್ದೆ ಎಂದಿರುತ್ತದೆ.
ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ: ಮುಖ್ಯಮಂತ್ರಿ ಭರವಸೆ
ಈ ರೀತಿ ಬಡ್ತಿಯ ಬಗ್ಗೆ ಆದೇಶವನ್ನು ಕರ್ನಾಟಕ ಸರಕಾರ ಎಲ್ಲ ಇಲಾಖೆಗೂ ಹೊರಡಿಸಿತ್ತು. ಆಯಾ ಇಲಾಖಾ ಮುಖ್ಯಸ್ಥರು ಹೈದರಾಬಾದ್ -ಕರ್ನಾಟಕ ಭಾಗದ ಅಭ್ಯರ್ಥಿಗಳ ಗಮನಕ್ಕೆ ಈ ವಿಚಾರವನ್ನು ತಂದು, ತುಂಬಬೇಕಾದ ಹುದ್ದೆಗಳಿಗೆ ತಮ್ಮ ಒಪ್ಪಿಗೆಯನ್ನು ಸೂಚಿಸಲು ತಿಳಿಸುವಂತೆ ಆದೇಶ ಹೊರಡಿಸಿತ್ತು.
ಪರಿಶಿಷ್ಟರಿಗೆ ಮೀಸಲಿಟ್ಟ 29 ಸಾವಿರ ಕೋಟಿ ಖರ್ಚು ಮಾಡಿ: ಸಿಎಂ
ಹೀಗೆ ಆದೇಶ ಹೊರಡಿಸಿದ್ದು ನಾಲ್ಕು ವರ್ಷದ ಹಿಂದೆ. ಇದು ಹೇಗಿತ್ತು ಅಂದರೆ ಶಿಕ್ಷಣ ಇಲಾಖೆಯಿಂದ ಆಯಾ ಶಾಲೆ ಹೆಡ್ ಮೇಸ್ಟ್ರುಗಳಿಗೆ ಪತ್ರ ಬರೆದು, ನಿಮ್ಮ ಶಾಲೆಯಲ್ಲಿರುವ, ಇಂಥ ಹುಡುಗರಿಗೆ, ಹೀಗಿರುವ ಸೌಲಭ್ಯ ಬಳಸಿಕೊಳ್ಳುತ್ತಾರಾ ಕೇಳಿ. ಆ ನಂತರ ಅವರ ಅಭಿಪ್ರಾಯ ಏನು ಎಂಬುದನ್ನು ತಿಳಿಸಿ ಎಂಬಂತೆ ಇತ್ತು.
ಸಾವಿರಾರು ಅಭ್ಯರ್ಥಿಗಳಿಗೆ ಮಾಹಿತಿ ಹೋಗಿಲ್ಲ
ಹೈದರಾಬಾದ್- ಕರ್ನಾಟಕ ಭಾಗ ವೃಂದಕ್ಕೆ ಬರುವ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಹೊರತುಪಡಿಸಿ ಉಳಿದ ಜಿಲ್ಲೆಗಳ ರಾಜ್ಯ ಸರಕಾರದ ಎಲ್ಲ ಇಲಾಖೆಗಳಿಗೂ ಈ ಆದೇಶ ಹೋಗಿತ್ತು. ಆಯಾ ಇಲಾಖೆ ಮುಖ್ಯಸ್ಥರು ಉದ್ಯೋಗಿಗಳಿಗೆ ವೈಯಕ್ತಿಕವಾಗಿಯೇ ಮಾಹಿತಿ ತಿಳಿಸಬೇಕಿತ್ತು. ಆದರೆ ಈ ಬಗ್ಗೆ ಹೈ-ಕ ವೃಂದಕ್ಕೆ ಬರುವ ಸಾವಿರಾರು ಅಭ್ಯರ್ಥಿಗಳಿಗೆ ಮಾಹಿತಿಯೇ ದೊರೆತಿಲ್ಲ. ರಾಜ್ಯ ಸರಕಾರ ನಿಗದಿ ಮಾಡಿದ ಒಪ್ಪಿಗೆ ತಿಳಿಸುವ ಅಂತಿಮ ದಿನವು ಮುಗಿದೇ ಹೋಗಿದೆ. ಆ ನಂತರ ಹೀಗೊಂದು ಸುತ್ತೋಲೆ ಬಂದಿತ್ತು ಎಂಬ ಸಂಗತಿ ಗೊತ್ತಾಗಿದೆ. ಈ ವಿಚಾರವಾಗಿ ಹೈದರಾಬಾದ್- ಕರ್ನಾಟಕ ಸೆಲ್ ಗೆ ಹೋಗಿ ಕೇಳಿದರೆ, ಕೊನೆ ದಿನಾಂಕ ಆಗಿಹೋಯಿತು, ಈಗ ನಾವೇನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ.
ಮನವಿ ಮಾನ್ಯ ಮಾಡದಿರುವುದು ಎಷ್ಟು ಸರಿ?
ಹೀಗೆ ಸಮಸ್ಯೆ ಆಗಿದೆ. ನಮ್ಮ ಇಲಾಖೆ ಮುಖ್ಯಸ್ಥರು ಮಾಹಿತಿಯೇ ನೀಡಿರಲಿಲ್ಲ. ದಿನಾಂಕ ವಿಸ್ತರಣೆ ಮಾಡಿಸಿ, ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಅಂತ ಮನವಿ ಮಾಡಿದರೆ, ಹಾಗೆ ಸರಕಾರದ ಬಳಿ ಮನವಿ ಮಾಡಿಕೊಂಡರೆ, ಅಥವಾ ತಮಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಸಾವಿರಾರು ಮಂದಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಿದರೆ ಅದು ಕೂಡ ದೊಡ್ಡ ವಿಷಯವಲ್ಲ. ಹೈದರಾಬಾದ್-ಕರ್ನಾಟಕ ವೃಂದಕ್ಕೆ ಸೇರಲು ಒಮ್ಮೆ ಒಪ್ಪಿಗೆ ಕೊಟ್ಟು, ಅಲ್ಲಿಗೆ ಸೇರಿಯಾದ ಮೇಲೆ ಮತ್ತೆ ಅಲ್ಲಿಂದ ಇನ್ನೊಂದು ವೃಂದಕ್ಕೆ ಹಿಂತಿರುಗಲು ನೌಕರರಿಗೆ ಸಾಧ್ಯವಿಲ್ಲ. ಇನ್ನು ಆ ವೃಂದಕ್ಕೆ ಸೇರಿ, ಬಡ್ತಿ ಪಡೆಯಲು ಅರ್ಹರಿದ್ದರೂ ಕೊನೆ ದಿನಾಂಕದೊಳಗೆ ತಮ್ಮ ಒಪ್ಪಿಗೆ ಸೂಚಿಸಿಲ್ಲ ಎಂದು ಈಗ ಅವರ ಮನವಿ ಮಾನ್ಯ ಮಾಡದೆ ಇರುವುದು ಯಾವ ರೀತಿಯಿಂದ ಸರಿ?
ಹೈ-ಕ ವೃಂದದ ಹುದ್ದೆಗಳು ಭರ್ತಿಯಾಗದೇ ಹಾಗೇ ಉಳಿದಿವೆ
ಹೈದರಾಬಾದ್-ಕರ್ನಾಟಕ ವೃಂದದ ಹಲವು ಹುದ್ದೆಗಳಿಗೆ ಇನ್ನೂ ಭರ್ತಿಯೇ ಆಗಿಲ್ಲ. ಬಡ್ತಿ ಆಗಬೇಕಾದ ಹುದ್ದೆಗಳು ಸಹ ಹಾಗೇ ಖಾಲಿ ಉಳಿದಿವೆ. ಆ ವೃಂದಕ್ಕೆ ಅರ್ಹರಿದ್ದು, ಮಾಹಿತಿ ಕೊರತೆಯಿಂದ ಅವಕಾಶ ತಪ್ಪಿಸಿಕೊಂಡವರು ಹಲವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಅದರ ತೀರ್ಪು ಯಾವಾಗ ಬರಬಹುದೋ ಗೊತ್ತಿಲ್ಲ. ಆದರೆ 371J ಅಡಿಯಲ್ಲಿ ಇಂಥದ್ದೊಂದು ವಿಶೇಷ ಸವಲತ್ತು ದೊರಕಿಸಿಕೊಡಲು ಶ್ರಮಿಸಿದ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಥೆ ವಹಿಸಿದರೆ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಈಗಾಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆಯಬಹುದು.
10,187 ಹುದ್ದೆ ಭರ್ತಿ, ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳಿವೆ?
ಕೋರ್ಟ್-ಕಚೇರಿಗಳಿಗೆ ಸುತ್ತಾಡುತ್ತಿದ್ದಾರೆ
ಹೀಗೆ ಆಗಿರುವ ಯಾವುದೋ ಒಂದು ಇಲಾಖೆಯಲ್ಲಿ ಅಲ್ಲ. ರಾಜ್ಯ ಸರಕಾರದ ನಾನಾ ಇಲಾಖೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ಇದ್ದಾರೆ. ತಾವು ತಪ್ಪಿಸಿಕೊಂಡ ಅವಕಾಶಕ್ಕೆ ಯಾರನ್ನು ದೂರುವುದು ಎಂದು ಗೊತ್ತಾಗದೆ ಕೆಲಸ-ಕಾರ್ಯ ಬಿಟ್ಟು, ಸಂಬಂಧಪಟ್ಟ ಇಲಾಖೆ ಹಾಗೂ ಕೋರ್ಟ್ ಗೆ ಸುತ್ತಾಡುತ್ತಿದ್ದಾರೆ. ಇನ್ನು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ-ಬಡ್ತಿ ಬಯಸಿದರೆ 2013ಕ್ಕೂ ಮುಂಚೆಯೇ ಹೈ-ಕ ಪ್ರಮಾಣ ಪತ್ರ ಪಡೆದಿರಬೇಕು, ಸೇವಾನಿರತ ಅಭ್ಯರ್ಥಿಯ ಸೇವಾ ಪುಸ್ತಕದಲ್ಲಿ ಈ ಮಾಹಿತಿ ನಮೂದಾಗಿರಬೇಕು ಹಾಗೂ ಗೆಜೆಟೆಡ್ ಅಧಿಕಾರಿಯಿಂದ ಸಹಿ ಪಡೆದಿರಬೇಕು ಎಂಬ ನಿಯಮ ಕೂಡ ಮಾಡಲಾಗಿದೆ. ಯಾವ ಕಾರಣಕ್ಕಾಗಿ ಹೀಗೆ ನಿಯಮ ರೂಪಿಸಲಾಗಿದೆ ಎಂಬುದಕ್ಕೂ ಸರಿಯಾದ ಉತ್ತರ ದೊರೆಯುವುದಿಲ್ಲ.
ಮತ್ತೊಮ್ಮೆ ಅವಕಾಶ ಕೊಟ್ಟರೆ ಅಭ್ಯರ್ಥಿಗಳಿಗೆ ನ್ಯಾಯ ದೊರಕುತ್ತದೆ
371J ಜಾರಿಗೆ ತಂದಿರುವುದೇ ಅಸಮಾನತೆ ನಿವಾರಣೆ ಆಗಲಿ, ಯಾರು ಈ ಹಿಂದೆ ಸೌಲಭ್ಯ ವಂಚಿತರಾಗಿದ್ದರೋ ಅಂಥವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ. ಅಂಥದ್ದರಲ್ಲಿ ಗೆರೆ ಕೊಯ್ದಂತೆ ಬಿಲ್ ಕುಲ್ ನಿಮ್ಮ ಧ್ವನಿ ನಾವು ಕೇಳಿಸಿಕೊಳ್ಳಲ್ಲ ಎಂದು ಪಟ್ಟು ಹಿಡಿದು ಕೂತರೆ ಹೇಗೆ? ಹೈ-ಕ ಭಾಗದ ಸೇವಾನಿರತ ಅಭ್ಯರ್ಥಿಗಳಿಗೆ ತಮ್ಮ ಒಪ್ಪಿಗೆಯನ್ನು ಸೂಚಿಸುವುದಕ್ಕೆ ರಾಜ್ಯ ಸರಕಾರ ಮತ್ತೊಂದು ಅವಕಾಶ ನೀಡಬೇಕು. ಹೈದರಾಬಾದ್-ಕರ್ನಾಟಕ ಸೆಲ್ ಗೆ ಸೂಚನೆ ನೀಡಿ, ಮತ್ತೊಮ್ಮೆ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕರೆ ಆ ಉದ್ಯೋಗಿಗಳಿಗೆ ಅನುಕೂಲ ಆಗುತ್ತದೆ. ಈಗಲಾದರೂ ಸರಕಾರ ಆ ಬಗ್ಗೆ ಚಿಂತಿಸಬಹುದೇ? ಖಾಲಿಯಿರುವ ಹುದ್ದೆ ಭರ್ತಿಗೆ ಮುಂದಾಗಬಹುದೇ ಕಾದುನೋಡೋಣ.