ಬಿಎಸ್ವೈ ಗುಡುಗಿದರೆ ವಿಧಾನಸೌಧ ನಡುಗುತ್ತೆ: ಏನಿದು ಮುರುಗೇಶ್ ನಿರಾಣಿ ಮಾತಿನ ಮರ್ಮ?
ಮೊದಲು ಸಚಿವ ಸ್ಥಾನ ಇದು ದಕ್ಕಿದ ನಂತರ ಈಗ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ, ಹಂಗಾಮಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹಾಡಿ, ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ದೆಹಲಿಯಲ್ಲಿ ಬೀಡು ಬಿಟ್ಟಿದ್ದ ನಿರಾಣಿ, ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿರಲಿಲ್ಲ. ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್ ಸೇರಿದಂತೆ ನಿರಾಣಿಯವರ ಸಭೆಯಲ್ಲಿನ ಗೈರು ಎದ್ದು ಕಾಣುತ್ತಿತ್ತು.
ಬಿಎಸ್ವೈ ರಾಜೀನಾಮೆ: ಸಾರ್ವಜನಿಕ ವಲಯದಲ್ಲಿ ವಿಲನ್ ಆದ ಬಿಜೆಪಿ ವರಿಷ್ಠರು
ಮುಂದಿನ ಸಿಎಂ ಯಾರು ಎನ್ನುವ ವಿಚಾರದಲ್ಲಿ ಯಾರಿಗೂ ಖಚಿತತೆ ಇಲ್ಲ, ಆರೇಳು ಹೆಸರುಗಳು ಸಿಎಂ ಮತ್ತು ಡಿಸಿಎಂ ಸ್ಥಾನಕ್ಕೆ ಹರಿದಾಡುತ್ತಿದೆ. ಆದರೆ, ಇದೆಲ್ಲವನ್ನೂ ಬಿಟ್ಟು ಬೇರೊಂದು ಹೆಸರು ಫೈನಲ್ ಆದರೂ ಆಗಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿರುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ಬಿಎಸ್ವೈ ಪುತ್ರ ವಿಜಯೇಂದ್ರಗೆ ಮಹತ್ವದ ಈ ಸ್ಥಾನ ಬಹುತೇಕ ಖಚಿತ
ಒಂದು ಕಾಲದಲ್ಲಿ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮುರುಗೇಶ್ ನಿರಾಣಿ, ಅದೇ ಸಂಬಂಧವನ್ನು ಈಗ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಸಿಎಂ ಸ್ಥಾನಕ್ಕೆ ನಿರಾಣಿ ಲಾಬಿ ನಡೆಸಲು ಆರಂಭಿಸಿದ ನಂತರ ಇದು ಇನ್ನಷ್ಟು ಹಳಸಿದೆ. ಈ ಸಂದರ್ಭದಲ್ಲಿ ನಿರಾಣಿಯವರು ಬಿಎಸ್ವೈ ಹೊಗಳಿರುವ ಹಿಂದಿನ ಮರ್ಮವೇನು ಎನ್ನುವುದು ಚರ್ಚೆಯ ವಿಷಯವಾಗಿದೆ.
ಮುಂದಿನ ಸಿಎಂ ಸ್ಥಾನಕ್ಕೆ ಯಾರನ್ನೂ ಸೂಚಿಸುವುದಿಲ್ಲ ಎಂದ ಯಡಿಯೂರಪ್ಪ
ಮುಂದಿನ ಸಿಎಂ ಸ್ಥಾನಕ್ಕೆ ಯಾರನ್ನೂ ಸೂಚಿಸುವುದಿಲ್ಲ ಎಂದು ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಆದರೂ, ಇಬ್ಬರ ಹೆಸರನ್ನು ಬಿಎಸ್ವೈ ಸೂಚಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಹೊತ್ತಿನಲ್ಲಿ ನಿರಾಣಿ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ನೂತನ ಸಿಎಂ ಹೆಸರನ್ನು ಯಡಿಯೂರಪ್ಪನವರೇ ಸಭೆಯಲ್ಲಿ ಪ್ರಸ್ತಾವಿಸಬೇಕು ಎನ್ನುವುದು ಹೈಕಮಾಂಡ್ ಆಶಯ.
ರಾಜ್ಯದಲ್ಲಿ ಬಿಜೆಪಿಯಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಯಡಿಯೂರಪ್ಪನವರದ್ದು
"ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಯಡಿಯೂರಪ್ಪನವರದ್ದು, ಅವರು ರಾಜ್ಯದ ಪ್ರತೀ ಗ್ರಾಮಗಳಿಗೆ ಭೇಟಿ ನೀಡಿದ ಏಕೈಕ ಬಿಜೆಪಿಯ ನಾಯಕ. ನಿನ್ನೆಯ ದಿನ ಅವರು ವಿದಾಯ ಹೇಳುವಾಗ ಕಣ್ಣೀರು ಹಾಕಿದ್ದು, ನಮಗೂ ಬೇಸರ ತಂದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಅವರೇ ಕಾರಣ"ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ ಎನ್ನುವ ಮಾತಿದೆ
"ಅವರು ನನ್ನನ್ನೂ ಸೇರಿದಂತೆ ಹಲವರನ್ನು ಮಗನಂತೆ ಬೆಳೆಸಿದ್ದಾರೆ, ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ ಎನ್ನುವ ಮಾತಿದೆ. 75ವರ್ಷ ಮೇಲ್ಪಟ್ಟವರು ಕಿರಿಯರಿಗೆ ಸ್ಥಾನ ಬಿಟ್ಟುಕೊಡಬೇಕು ಎನ್ನುವುದು ಬಿಜೆಪಿಯ ಸಿದ್ದಾಂತ. ಯಡಿಯೂರಪ್ಪನವರು ನಮ್ಮ ಮಾರ್ಗದರ್ಶಕರಾಗಿರುತ್ತಾರೆ"ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಇಂದು (ಜುಲೈ 27) ಸಂಜೆ
ಯಡಿಯೂರಪ್ಪನವರನ್ನು ಮುರುಗೇಶ್ ನಿರಾಣಿ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಇದೊಂದು ಸೌಜನ್ಯಯುತ ಭೇಟಿ ಎಂದು ನಿರಾಣಿ ಹೇಳಿದ್ದರೂ, ಸಿಎಂ ಸ್ಥಾನಕ್ಕೆ ತಮ್ಮ ಹೆಸರನ್ನು ಸೂಚಿಸುವಂತೆ ಬಿಎಸ್ವೈ ಅವರಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ನಿರಾಣಿ ನಿರಾಕರಿಸಿದ್ದಾರೆ. ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಇಂದು (ಜುಲೈ 27) ಸಂಜೆ ನಡೆಯಲಿದೆ. ಈ ಕಾರಣಕ್ಕಾಗಿಯೇ ನಿರಾಣಿ, ಬಿಎಸ್ವೈ ಬಗ್ಗೆ ಹೆಮ್ಮೆಯ ಮಾತಾನಾಡಿದ್ದಾರಾ ಎನ್ನುವ ಪ್ರಶ್ನೆ ಕಾಡುವುದು ಸಹಜ.