ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕೆಲಸ: ಎಚ್ಡಿಕೆಗೆ ಪ್ರಿಯಾಂಕ್ ಶಿಫಾರಸು
Recommended Video
ಬೆಂಗಳೂರು, ಅಕ್ಟೋಬರ್ 02: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಕಳಿಸಿದ್ದಾರೆ. ವಾರಕ್ಕೆ 5 ದಿನಗಳು ಮಾತ್ರ ಕೆಲಸ, ಸಾರ್ವಜನಿಕ ರಜೆದಿನಗಳಲ್ಲಿ ಕಡಿತ ಮುಂತಾದ ಶಿಫಾರಸ್ಸುಗಳನ್ನು ಈ ಪತ್ರ ಹೊಂದಿದೆ.
ರಾಜ್ಯ ಸರ್ಕಾರದ ಕಚೇರಿಗಳಲ್ಲಿ 5 ದಿನಗಳ ವಾರ ಜಾರಿಗೊಳಿಸುವ ಕುರಿತು ಸಮಾಜ ಕಲ್ಯಾಣ ಸಚಿವ, ಕಲಬುರಗಿ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರದಲ್ಲಿನ ಸಾರಾಂಶ ಇಲ್ಲಿದೆ:
ಬಜೆಟ್ ನಂತರ ಕೊನೆಗೂ ಸರ್ಕಾರಿ ನೌಕರರಿಗೆ ಸಂಬಳ ಸಿಗಲಿದೆ!
ರಾಜ್ಯದಲ್ಲಿ ಈಗ ಸರ್ಕಾರಿ ಕಚೇರಿಗಳು ವಾರದಲ್ಲಿ 6 ದಿನ ಕಾರ್ಯ ನಿರ್ವಹಿಸುತ್ತಿದ್ದು, 5 ದಿನಗಳ ವಾರವನ್ನು ಜಾರಿಗೆ ತರಬೆಕೆಂಬ ಚರ್ಚೆಗಳು ನಡೆಯುತ್ತಿವೆ. ಮುಖ್ಯವಾಗಿ ಕರ್ನಾಟಕ ಸರ್ಕಾರ ನೇಮಿಸಿದ್ದ ಆರನೇ ವೇತನ ಆಯೋಗ ಐದು ದಿನಗಳ ವಾರದ ಪದ್ಧತಿಯನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕೆಂದು ಶಿಫಾರಸು ಮಾಡಿದೆ.
ಕೋಟ್ಯಂತರ ನೌಕರರಿಗೆ ನಿರಾಶೆ ಮೂಡಿಸಿದ ನರೇಂದ್ರ ಮೋದಿ
ಕರ್ನಾಟಕ ಸರ್ಕಾರದ ಉದ್ಯೋಗಿಗಳು ಸಹ ಐದು ದಿನಗಳ ವಾರವನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಬಹಳಷ್ಟು ವರ್ಷಗಳಿಂದ ಐದು ದಿನಗಳ ವಾರದ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದೆ. ಕೆಲಸದ ವೇಳೆಯನ್ನು ಹೆಚ್ಚಿಸುವ ಮೂಲಕ ಸಮತೋಲನವನ್ನು ತರಲಾಗಿದೆ.
ಹಬ್ಬ,ಜಯಂತಿಗಳಿಗೆ ರಜೆ ಕಡಿತ ಬಗ್ಗೆ
ಕರ್ನಾಟಕ ಸರ್ಕಾರ ಈಗಾಗಲೇ ಹತ್ತು ಹಲವು ಜಯಂತಿಗಳಿಗೆ ಹಾಗೂ ಹಬ್ಬಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದೆ. ವಾರ್ಷಿಕ ಕೆಲಸದ ದಿನಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬಂದಿದೆ. ನಮಗೆ ಸ್ಫೂರ್ತಿಯಾಗಿರುವ ಹಲವಾರು ಮಹಾನುಭಾವರು ಈ ನಾಡಿನಲ್ಲಿ ಬದುಕಿ, ಅವರ ಆದರ್ಶಗಳನ್ನು ನಮಗೆ ಬೋಧಿಸುವ ಮೂಲಕ ಮಾದರಿಯಾಗಿದ್ದಾರೆ. ಅಂತಹ ದಿವ್ಯ ಪುರುಷರ ಹೆಸರಿನಲ್ಲಿ ನಾವು ಸರ್ಕಾರಿ ರಜೆ ಘೋಷಿಸಿದ್ದೇವೆ.
ಕಾಯಕವೇ ಕೈಲಾಸ ಅಳವಡಿಕೆ ಬಗ್ಗೆ
ಆದರೆ, ವಿಪರ್ಯಾಸವೆಂದರೆ, ಈ ಎಲ್ಲ ದಿವ್ಯ ಚೇತನಗಳು ತಮ್ಮ ಬದುಕಿನಲ್ಲಿ ಅವಿಶ್ರಾಂತವಾಗಿ ದುಡಿಯುವ ಮೂಲಕ ಅಸಾಧಾರಣ ವ್ಯಕ್ತಿಗಳಾಗಿ ಗುರುತಿಸಿಕೊಂಡು ಸಮಾಜಕ್ಕೆ ತಮ್ಮ ಛಾಪನ್ನು ಬಿಟ್ಟು ಹೋಗಿದ್ದಾರೆ. ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಬಸವೇಶ್ವರರು 'ಕಾಯಕವೇ ಕೈಲಾಸ' ಎಂದು ಸಾರಿದರು. ಇಂತಹ ಕ್ರಿಯಾಶೀಲ ವ್ಯಕ್ತಿಗಳ ಹೆಸರಿನಲ್ಲಿ ನಾವು ಹೆಚ್ಚು ರಜೆಗಳನ್ನು ನೀಡುತ್ತಿದ್ದೇವೆ.
ವೈವಿಧ್ಯತೆಯಲ್ಲಿ ಏಕತೆಯುಳ್ಳ ರಾಷ್ಟ್ರ
ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ನಮ್ಮ ದೇಶ, ಜಾತಿ, ಮತಗಳಿಗನುಗುಣವಾಗಿ ಹಬ್ಬ, ಉತ್ಸವ, ಜಯಂತಿಗಳನ್ನು ಆಚರಿಸುತ್ತಾ ಬಂದಿದೆ. ಅವರವರ ಆಚರಣೆಗಳಿಗೆ ಸೂಕ್ತವಾಗುವಂತೆ ರಜೆ ಪಡೆಯುವ ಸೌಲಭ್ಯ ನೀಡಿದ್ದಲ್ಲಿ ನಾವು ಅಭಿವೃದ್ಧಿಯ ಪಥದಲ್ಲಿ ಸಾಗಿದಂತಾಗುವುದು.
ಮಾನವ ಸಂಪನ್ಮೂಲ ಸದ್ಬಳಕಯೂ ಆಗುವುದು, ಈ ಹಿನ್ನಲೆಯಲ್ಲಿ ಸರ್ಕಾರ ಈಗ ನೀಡುತ್ತಿರುವ ಸಾರ್ವತ್ರಿಕ ರಜೆಗಳನ್ನು ಮಿತಿಗೊಳಿಸಿ, ಅವಶ್ಯವಿರುವವರು ಅವಶ್ಯವಿರುವ ದಿನಗಳಂದು ರಜೆ ತೆಗೆದುಕೊಳ್ಳುವಂತೆ ನಿರ್ಬಂಧಿತ ರಜೆಯನ್ನು ಹೆಚ್ಚಳ ಮಾಡುವ ಮೂಲಕ ಐದು ದಿನಗಳ ಕೆಲಸದ ವಾರವನ್ನು ರಾಜ್ಯದಲ್ಲಿ ಜಾರಿಗೆ ತರಬಹುದು ಎಂಬುದು ನನ್ನ ಅಭಿಪ್ರಾಯವಾಗಿರುತ್ತದೆ.
ಐದು ದಿನಗಳ ವಾರದ ಪದ್ಧತಿ ಜಾರಿಗೆ
ಐದು ದಿನಗಳ ವಾರದ ಪದ್ಧತಿ ಜಾರಿಗೆ ತರುವುದರಿಂದ ಸರ್ಕಾರ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಹಲವಾರು ಅನುಕೂಲಗಳಿವೆ. ನೌಕರರಿಂದ ಫಲಿತಾಂಶ ಆಧಾರಿತ ಕಾರ್ಯ ನಿರೀಕ್ಷಿಸಬಹುದಲ್ಲದೆ, ಕೆಲಸದಲ್ಲಿ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಳವಾಗುವುದು. ನೌಕರರಿಗೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಹೆಚ್ಚು ಅವಕಾಶಗಳು ದೊರೆಯುವುದರಿಂದ ಕಚೇರಿ ಗೈರು ಹಾಜರಾರಿ ನಿಯಂತ್ರಣಗೊಳ್ಳುವುದು ಎಂದು ಪತ್ರದಲ್ಲಿ ಬರೆದಿದ್ದಾರೆ.