ಇವಿಎಂ ‘ಹ್ಯಾಕಥಾನ್' ಗೆ ಅವಕಾಶ ಕೊಡಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಡಿಸೆಂಬರ್ 19: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದ ನಂತರ ಮತ್ತೊಮ್ಮೆ 'ವಿದ್ಯುನ್ಮಾನ ಮತಯಂತ್ರಗಳು ದುರ್ಬಳಕೆಯಾಗುತ್ತಿವೆ' ಎಂಬ ಅನುಮಾನ, ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಒಂದು ಸಲಹೆ ನೀಡಿದ್ದಾರೆ.
ರಾಜಕೀಯ ಪಕ್ಷಗಳ ಆರೋಪ, ಸಾರ್ವಜನಿಕರ ಅನುಮಾನ ದೂರಾಗಿಸಲು ಇವಿಎಂ 'ಹ್ಯಾಕಥಾನ್'ಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕು' ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆ
'ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಜಗತ್ತಿನಲ್ಲಿಯೇ ಹೆಸರು ಮಾಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ನವೋದ್ಯಮ, ತಾಂತ್ರಿಕ ಪರಿಣತರಿಗೆ ಮತಯಂತ್ರಗಳ ಪರಿಶೀಲನೆಗೆ ಮುಕ್ತ ಅವಕಾಶ ಕಲ್ಪಿಸಬೇಕು' ಎಂದು ಹೇಳಿದರು.
ಚುನಾವಣಾ ಆಯೋಗದ ನೇರ ಉಸ್ತುವಾರಿಯಲ್ಲಿಯೇ ಹ್ಯಾಕಿಂಗ್ ನಡೆಯಲಿ, ಶೇ10ರಷ್ಟು ಮತಯಂತ್ರಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಇದಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಬೇಕು. ದೋಷ ಇದ್ದರೆ ಎಲ್ಲರೂ ಸೇರಿ ಸರಿಪಡಿಸೋಣ' ಎಂದು ಅವರು ಆಹ್ವಾನ ನೀಡಿದರು.
ಗುಜರಾತ್ ನಲ್ಲಿ 100% ತಾಳೆಯಾಯ್ತು ಇವಿಎಂ - ವಿವಿಪ್ಯಾಟ್ ಲೆಕ್ಕ
'ಈ ವಿಷಯವಾಗಿ ಚುನಾವಣಾ ಆಯೋಗಕ್ಕೆ ಕಳಿಸಲು ಪತ್ರ ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಅದಕ್ಕೆ ಅನುಮೋದನೆ ನೀಡಿದ್ದಾರೆ. ಬುಧವಾರ ಪತ್ರವನ್ನು ಆಯೋಗಕ್ಕೆ ಕಳಿಸುತ್ತೇನೆ' ಎಂದರು.
'ಆರಂಭದಲ್ಲಿ ಇವಿಎಂ ಚೆನ್ನಾಗಿತ್ತು, ನಂತ್ರ ಹ್ಯಾಕ್ ಆಗಿದೆ ಅಂತಿದ್ದಾರೆ'
'ನಾನು ಮತಯಂತ್ರಗಳ ವಿರೋಧಿ ಅಲ್ಲ. ಮತಯಂತ್ರಗಳಲ್ಲಿ ದೋಷ ಇದೆ ಎಂಬ ಕಾರಣಕ್ಕೇ ಮುಂದುವರೆದ ದೇಶಗಳಲ್ಲಿ ಮರಳಿ ಮತಪತ್ರ ಬಳಸಲಾಗುತ್ತಿದೆ. ಚುನಾವಣೆಯಲ್ಲಿ ಮತಪತ್ರ ಬಳಸಿ ಎಂಬ ನಮ್ಮ ಬೇಡಿಕೆ ಪ್ರಜಾತಂತ್ರದ ವಿರೋಧಿ ಅಲ್ಲ' ಎಂದು ಅವರು ಹೇಳಿದರು.