ತಟ್ಟೆ ಬಡಿದಿದ್ದರಿಂದ ಕೊರೊನಾ ಹೋಯ್ತಾ?: ಪ್ರಿಯಾಂಕ್ ಖರ್ಗೆ-ಸುಧಾಕರ್ ಟ್ವೀಟ್ ಯುದ್ಧ
ನವದೆಹಲಿ, ಸೆಪ್ಟೆಂಬರ್ 24: ಕೊರೊನಾ ವೈರಸ್ ಪರಿಸ್ಥಿತಿ ನಿರ್ವಹಣೆಯಲ್ಲಿನ ವೈಫಲ್ಯ ಮತ್ತು ಭ್ರಷ್ಟಾಚಾರದ ಆರೋಪಗಳ ವಿಚಾರವಾಗಿ ಸಚಿವ ಕೆ. ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಟ್ವೀಟ್ ಸಮರ ನಡೆದಿದೆ.
ವಿಧಾನಸಭೆ ಮುಂಗಾರು ಅಧಿವೇಶನಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, 'ಸೋಂಕಿತ ಸರ್ಕಾರ' ಎಂಬ ಬರಹವುಳ್ಳ ಕಪ್ಪು ಬಣ್ಣದ ಮಾಸ್ಕ್ ಧರಿಸಿ ಬಂದಿದ್ದರು. 'ವಿರೋಧಪಕ್ಷದ ಸ್ಥಾನದಲ್ಲಿರುವ ನಮಗೆ ಮಾತನಾಡಲು ಹೆಚ್ಚು ಅವಕಾಶ ನೀಡುತ್ತಿಲ್ಲ. ಹೀಗಾಗಿ ಎಲ್ಲ ಸಂಗತಿಗಳನ್ನು ಹೇಳುವ ಮಾಸ್ಕ್ ಧರಿಸುವ ಮೂಲಕ ಆಡಳಿತ ಪಕ್ಷಕ್ಕೆ ನಿಮ್ಮ ಸಂದೇಶವನ್ನು ನೀಡುವ ಮತ್ತು ಪ್ರತಿಭಟನೆ ತೋರಿಸುವ ಸರಿಯಾದ ಮಾರ್ಗವಾಗಿ ಆಯ್ದುಕೊಳ್ಳಲಾಯಿತು. ದುರದೃಷ್ಟವಶಾತ್ ಈ ಮಾಸ್ಕ್ ಕೊರೊನಾದಿಂದ ರಕ್ಷಿಸುತ್ತದೆಯೇ ವಿನಾ ಬಿಜೆಪಿ ಸರ್ಕಾರದ ದುರಾಡಳಿತದಿಂದ ಅಲ್ಲ' ಎಂದು ಅವರು ಹೇಳಿದ್ದರು.
ಉಪಕರಣಗಳ ಖರೀದಿಯಲ್ಲಿ ಹಗರಣವಾಗಿಲ್ಲ, ತನಿಖೆಯೂ ಬೇಕಿಲ್ಲ: ಸುಧಾಕರ್
'ಕೊರೊನಾ ನಿಯಂತ್ರಣಕ್ಕೆ ಇಂದು ಇಡೀ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಸ್ರಾರು ಕೊರೊನಾ ಯೋಧರು ತಮ್ಮ ಜೀವ ಪಣಕ್ಕಿಟ್ಟು, ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಶಾಸಕರು 'ಸೋಂಕಿತ ಸರ್ಕಾರ' ಎಂದು ಕರೆಯುವ ಮೂಲಕ ತಮ್ಮ 'ಸೋಂಕಿತ ಮನಸ್ಥಿತಿ' ಪ್ರದರ್ಶಿಸಿರುವುದು ದುರದೃಷ್ಟಕರ' ಎಂದು ಪ್ರಿಯಾಂಕ್ ಅವರ ಫೋಟೊ ಹಂಚಿಕೊಂಡು ಕೆ. ಸುಧಾಕರ್ ಕಿಡಿಕಾರಿದ್ದರು. ಮುಂದೆ ಓದಿ.
21 ದಿನಗಳಲ್ಲಿ ಯುದ್ಧ ಮುಗಿಯಬೇಕಿತ್ತು
'ನೀವು ತಟ್ಟೆ ಬಡಿಯಲು ಕೇಳಿದ್ದಿರಿ, ನಾವು ಮಾಡಿದೆವು ನೀವು ದೀಪ ಬೆಳಗಿಸಿ ಎಂದಿರಿ, ನಾವು ಬೆಳಗಿಸಿದೆವು ನೀವು ಮನೆಯಲ್ಲಿಯೇ ಇರಿ ಎಂದಿರಿ, ನಾವು ಇದ್ದೆವು ನೀವು ಹೊರಬನ್ನಿ ಎಂದಿರಿ, ನಾವು ಬಂದೆವು. ನೀವು ಹೇಳಿದ ಎಲ್ಲವನ್ನು ನಾವು ಮಾಡಿದೆವು. 21 ದಿನಗಳಲ್ಲಿ ಈ ಯುದ್ಧ ಮುಗಿಯಬೇಕಿತ್ತು' ಎಂದು ಪ್ರಿಯಾಂಕ್ ಖರ್ಗೆ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡಿದರು
'ಆದರೆ ಕನ್ನಡಿಗರಿಗೆ ಸಿಕ್ಕಿದ್ದೇನು? ಹೆಚ್ಚು ಸೋಂಕು, ಹೆಚ್ಚಿನ ವೈದ್ಯಕೀಯ ಬಿಲ್ಗಳು, ಸಾವಿನಲ್ಲಿ ರಾಜಕೀಯ. ಹಾಸಿಗೆಗಳಿಲ್ಲ, ಆಮ್ಲಜನಕವಿಲ್ಲ, ಔಷಧಿ ಲಭ್ಯತೆ ಇಲ್ಲ, ಆಂಬುಲೆನ್ಸ್ ಗಳಿಲ್ಲ. ಆರ್ಥಿಕ ಕುಸಿತ, ಸಾವಿನಲ್ಲಿ ಘನತೆಯಿಲ್ಲ, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡಿ ನಿರುದ್ಯೋಗಿಗಳನ್ನಾಗಿಸಿ GST ಪರಿಹಾರ ಮರುಪಾವತಿ ಮಾಡಲಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿದ ವೈದ್ಯಕೀಯ ಸಲಕರಣೆಗಳ ಹಗರಣ
ನ್ಯಾಯಾಂಗ ತನಿಖೆಗೆ ಒಪ್ಪಿಸಿ
'15ನೇ ಹಣಕಾಸು ಆಯೋಗದಲ್ಲಿ ಅನ್ಯಾಯ, ಈ ಸಾಂಕ್ರಾಮಿಕ ಕಾಲದಲ್ಲಿ ಸರ್ಕಾರ ಮಾತ್ರ ಭ್ರಷ್ಟಾಚಾರದ ದೊಡ್ಡ ಸೋಂಕನ್ನು ಅಂಟಿಸಿಕೊಂಡಿತು. ಸ್ವಿಮ್ಮಿಂಗ್ ಪೂಲ್ ನಲ್ಲಿ ಇಳಿದರೆ ಈ ವೈರಸ್ ಹೋಗುವುದಿಲ್ಲ. ಸರ್ಕಾರವು ಸೋಂಕಿಗೆ ಒಳಗಾಗದಿದ್ದರೆ ಆಗಿರುವ ಅವ್ಯವಹಾರವನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಿ ನೋಡೋಣ' ಎಂದು ಸುಧಾಕರ್ ಅವರು ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ನಲ್ಲಿ ಆಡುತ್ತಿದ್ದ ಘಟನೆಯನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.
ಅಜ್ಞಾನದ ಬಾಲಿಶ ಹೇಳಿಕೆ
'ಎನ್ಡಿಎ-1 ಸರ್ಕಾರದ ಅವಧಿಯಲ್ಲಿ ಆರಂಭವಾದ ಬೀದರ್- ಕಲಬುರಗಿ ರೈಲ್ವೆ ಮಾರ್ಗವನ್ನು ಪೂರ್ಣಗೊಳಿಸಲು 16 ವರ್ಷಗಳ ನಂತರ ಎನ್ ಡಿಎ-2 ಸರ್ಕಾರ ಬರಬೇಕಾಯ್ತು. ಇನ್ನು 21 ದಿನಗಳಲ್ಲಿ ಕೊರೊನಾ ಯುದ್ಧ ಮುಗಿಯಬೇಕು ಎಂಬುದು ಅಜ್ಞಾನದಿಂದ ಕೂಡಿದ ಬಾಲಿಶ ಹೇಳಿಕೆ' ಎಂದು ಸುಧಾಕರ್ ತಿರುಗೇಟು ನೀಡಿದ್ದಾರೆ.
ಕೊರೊನಾ ಓಡುತ್ತದೆ ಎಂದು ಹೇಳಿರಲಿಲ್ಲ
'ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚುವುದರಿಂದ ಕೊರೊನಾ ಹೋಗುತ್ತದೆ ಎಂದು ಯಾರೂ ಹೇಳಿಲ್ಲ. ಅದೊಂದು ಸಾಮೂಹಿಕ ಪ್ರಜ್ಞೆ ಬೆಳೆಸುವ, ಅರಿವು ಮೂಡಿಸುವ ಮನೋವೈಜ್ಞಾನಿಕ ಪ್ರಕ್ರಿಯೆ ಆಗಿತ್ತು. ಏಡ್ಸ್, ಪೋಲಿಯೋದಂತಹ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಗಳೇ ಬೇಕಾಯ್ತು, ಆದರೆ ಲಾಕ್ಡೌನ್ ಮೂಲಕ ಕೆಲವೇ ದಿನಗಳಲ್ಲಿ ಅರಿವು ಮೂಡಿಸಲಾಯ್ತು' ಎಂದು ದೀಪ ಹಚ್ಚುವ ಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ.
Recommended Video
ಸಾಧನೆಯನ್ನು ಹಾಳಗೆಡವಬೇಡಿ
'ಎಲ್ಲ ಅಡೆತಡೆಗಳನ್ನು ಎದುರಿಸಿ ಹೋರಾಟ ನಡೆಸೋಣ ಮತ್ತು ಮುನ್ನಡೆಯೋಣ. ಈ ಮುಕ್ತಿಯ ಕೆಲಸವನ್ನು ಮುಂದುವರಿಸುವುದು ಕಷ್ಟಕರ ಎಂದು ಯಾರಿಗಾದರೂ ಅನಿಸಿದರೆ, ಇದುವರೆಗೂ ಸಾಧಿಸಿರುವ ಯಾವುದೇ ಸಾಧನೆಯನ್ನು ಹಾಳುಮಾಡದೆ ಈ ಪ್ರಯತ್ನವನ್ನು ತ್ಯಜಿಸಿ ಬಿಡಿ'- ಡಾ.ಬಿ.ಆರ್. ಅಂಬೇಡ್ಕರ್ ಎಂದು ಅಂಬೇಡ್ಕರ್ ಅವರ ಮಾತುಗಳನ್ನು ಸುಧಾಕರ್ ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.