ಪ್ರತಿಭಟನಾ ಸ್ಥಳಕ್ಕೆ ಕುಮಾರಸ್ವಾಮಿ, ವಿದ್ಯಾರ್ಥಿಗಳ ಮುಷ್ಕರ ವಾಪಸ್
ಬೆಂಗಳೂರು, ಜೂ 19: ಕೃಷಿ ವಿಶ್ವವಿದ್ಯಾಲಯ ಖಾಸಗೀಕರಣ ತಪ್ಪಿಸಲು ವಿವಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರವುದಾಗಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ನಗರದಲ್ಲಿಂದು, ಕೃಷಿ ವಿಶ್ವವಿದ್ಯಾಲಯದ ಖಾಸಗೀಕರಣ ವಿರೋಧಿಸಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. (ಒಂದೇ ವರ್ಷ ಆಡಳಿತ ನಡೆಸೋದು ಎಂದಿದ್ದಲ್ಲ)
ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ, ಕೃಷಿ ಸಚಿವರು ,ಕೃಷಿ ಇಲಾಖೆ ಕಾರ್ಯದರ್ಶಿ ಮತ್ತು ವಿದ್ಯಾರ್ಥಿಗಳನ್ನು ಕರೆಸಿ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸ್ಥಳದಲ್ಲೇ ನೀಡಿದರು.
ಸಂಜೆ 5 ಘಂಟೆಗೆ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಿಎಂ ಚರ್ಚಿಸಿದರು. ಕೃಷಿ ವಿವಿ ಕಾಯ್ದೆ ತಿದ್ದುಪಡಿಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚಿಸಿದ ನಂತರ, ಮುಷ್ಕರವನ್ನು ಹಿಂಪಡೆಯುವುದಾಗಿ ವಿದ್ಯಾರ್ಥಿಗಳು ಪ್ರಕಟಿಸಿದರು.
ಇದಕ್ಕೂ ಮುನ್ನ, ಗಾರ್ಮೆಂಟ್ ಕಾರ್ಮಿಕರು ಹಾಗೂ ಗಾರ್ಮೆಂಟ್ ಮಾಲೀಕರೊಂದಿಗೆ ಸಿಎಂ ಕುಮಾರಸ್ವಾಮಿರವರ ಗೃಹ ಕಚೇರಿ ಕೃಷ್ಣದಲ್ಲಿ ಚರ್ಚಿಸಿದರು.
ಗಾರ್ಮೆಂಟ್ ಸಂಸ್ಥೆಗಳು ಉಳಿಯಬೇಕು. ಕಾರ್ಮಿಕರ ಹಿತರಕ್ಷಣೆಯು ಆಗಬೇಕು ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು, ಗಾರ್ಮೆಂಟ್ ಸಂಸ್ಥೆ ಮಾಲೀಕರು ಮತ್ತು ಕಾರ್ಮಿಕರೊಳಗೊಂಡ ಸಮಿತಿಯೊಂದನ್ನು ರಚಿಸುವಂತೆ ಮುಖ್ಯ ಮಂತ್ರಿಗಳು ಸೂಚಿಸಿದ್ದು, ಈ ಸಮಿತಿ ಕಾಲಮಿತಿಯೊಳಗೆ ವರದಿ ನೀಡುವಂತೆ ಆದೇಶ ನೀಡಿದರು.