ಬೋಧನಾ ಶುಲ್ಕ ಕಡಿತ ತೀರ್ಮಾನ ವಿರೋಧಿಸಿ ಖಾಸಗಿ ಶಾಲೆ ಶಿಕ್ಷಕರಿಂದ ಬೃಹತ್ ಪ್ರತಿಭಟನೆ !
ಬೆಂಗಳೂರು, ಫೆಬ್ರವರಿ 22: ಶಾಲಾ ಶುಲ್ಕ ವಿವಾದಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವಿನ ಗುದ್ದಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿಮೆ ಮಾಡಬೇಕೆಂಬ ಸರ್ಕಾರದ ಆದೇಶವನ್ನು ವಿರೋಧಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮತ್ತು ಖಾಸಗಿ ಶಾಲಾ ಶಿಕ್ಷಕರು ಮಂಗಳವಾರ ಬೀದಿಗೆ ಇಳಿಯಲಿದ್ದಾರೆ.
ಬೋಧನಾ ಶುಲ್ಕ ಶೇ. 30 ರಷ್ಟು ಕಡಿಮೆ ಮಾಡಿ ಎಂಬ ಸರ್ಕಾರೆದ ಆದೇಶ ವಿರೋಧಿಸಿ ಹಾಗೂ ಖಾಸಗಿ ಶಾಲೆಗಳ ನೋಂದಣಿ ನವೀಕರಣಕ್ಕೆ ವಿಧಿಸಿರುವ ನಿಯಮ ವಾಪಸು ಪಡೆಯಲು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ಹತ್ತು ಖಾಸಗಿ ಶಾಲೆಗಳ ಸಂಘಟನೆಗಳ 25 ಸಾವಿರ ಮಂದಿ ಹೋರಾಟಕ್ಕೆ ಇಳಿಯಲಿದ್ದಾರೆ. ನಗರದ ರೈಲ್ವೇ ನಿಲ್ದಾಣದಿಂದ ಮೆರವಣಿಗೆ ಹೊರಡಲಿರುವ ಖಾಸಗಿ ಶಿಕ್ಷಕರು ಮತ್ತು ಆಡಳಿತ ಮಂಡಳಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಲಿದ್ದು, ಬೃಹತ್ ಹೋರಾಟ ನಡೆಯಲಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಹೋರಾಟಕ್ಕೆ ಮೂಲ ಶುಲ್ಕ ಕಡಿತ : ರಾಜ್ಯದಲ್ಲಿ ಕೊರೊನಾ ಹೊಡೆತಕ್ಕೆ ಸಿಲುಕಿದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂಕಷ್ಟ ಕಾಲದಲ್ಲೂ ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಶುಲ್ಕ ಕಡಿಮೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚಿಸಿ ಖಾಸಗಿ ಶಾಲೆಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಖಾಸಗಿ ಶಾಲೆಗಳು ಶಿಕ್ಷಕರ ವೇತನ ನೀಡದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಶಿಕ್ಷಕರಿಗಾಗಿ ಸರ್ಕಾರ ಐದು ಪೈಸೆ ನೆರವು ನೀಡಿಲ್ಲ. ಏಕಾ ಏಕಿ ಶಿಕ್ಷಣ ಇಲಾಖೆ ಕೈಗೊಳ್ಳುತ್ತಿರುವ ಏಕ ಪಕ್ಷೀಯ ನಿರ್ಧಾರಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ವು ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.
Recommended Video
ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಬೋಧನಾ ಶುಲ್ಕ ಶೇ. 30 ರಷ್ಟು ಕಡಿಮೆ ಮಾಡಲು ಅಸಾಧ್ಯ. ಇನ್ನು ಶಾಲೆಗಳ ಮಾನ್ಯತೆ ನವೀಕರಣಕ್ಕೆ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಹೊಸ ನಿಯಮಗಳನ್ನು ಹಾಕಿದ್ದಾರೆ. ಈ ನಿಯಮಗಳನ್ನು ಪಾಲಿಸಲಾಗದ ಶಾಲೆಗಳಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಲಂಚ ಪಡೆದು ನವೀಕರಣ ಮಾನ್ಯತೆ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟ ಕಾಲದಲ್ಲೂ ಭ್ರಷ್ಟಾಚಾರಕ್ಕೆ ನಾಂದಿ ಹಾಡಲಾಗಿದೆ. ಕೊರೋನಾ ದಿಂದ ಸಂಕಷ್ಟಕ್ಕೆ ಸಿಲುಕಿರುವ ಶಾಲೆಗಳನ್ನು ರಕ್ಷಣೆ ಮಾಡಬೇಕಿದ್ದ ಸರ್ಕಾರ, ಅವೈಜ್ಞಾನಿಕ ತೀಮಾನಗಳಿಂದ ನಿರ್ನಾಮಕ್ಕೆ ನಾಂದಿ ಹಾಡಿದೆ. ಸರ್ಕಾರದ ಈ ಅವೈಜ್ಞಾನಿಕ ಆದೇಶಗಳನ್ನು ವಿರೋಧಿಸಿ ಬೃಹತ್ ಹೋರಾಟ ಕೈಗೊಳ್ಳಲಾಗಿದೆ. ರಾಜ್ಯದಿಂದ ಸುಮಾರು 25 ಸಾವಿರ ಖಾಸಗಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ನಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಕ್ಯಾಮ್ಸ್ ಸಂಘಟನೆ ತಿಳಿಸಿದೆ.