ಶಿಕ್ಷಣ ಸಚಿವರ ತೀರ್ಮಾನದ ವಿರುದ್ಧ ಕಾನೂನು ಸಮರಕ್ಕೆ ಖಾಸಗಿ ಶಾಲೆಗಳು ಸಿದ್ಧತೆ
ಬೆಂಗಳೂರು, ಮಾರ್ಚ್ 25: ಖಾಸಗಿ ಶಾಲೆಗಳ ಶುಲ್ಕ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ. ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳ ಶಾಲಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿಮೆ ಮಾಡಬೇಕೆಂಬ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮನವಿಯನ್ನು ಸರಾಸಗಟಾಗಿ ತಿರಸ್ಕರಿಸಿರುವ ಖಾಸಗಿ ಶಾಲೆಗಳು ಕಾನೂನು ಸಮರಕ್ಕೆ ಸಜ್ಜಾಗಿವೆ. ಕೊರೋನಾ ಸಂಕಷ್ಟದಿಂದ ನಲುಗಿರುವ ಖಾಸಗಿ ಶಾಲೆಗಳು ಸರ್ಕಾರದ ಶುಲ್ಕ ಕಡಿತ ನಿರ್ಧಾರದಿಂದ 2524 ಕೋಟಿ ರೂ. ನಷ್ಟ ಆಗಲಿದ್ದು, ಈ ಕುರಿತ ಸಮೀಕ್ಷಾ ವರದಿ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆದಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ಖಾಸಗಿ ಶಾಲಾ ಶುಲ್ಕ ವಿವಾದ ತಾರಕ್ಕೇರುವ ಲಕ್ಷಣ ಗೋಚರಿಸುತ್ತಿದೆ.
ಕೊರೋನಾದಿಂದ ತರಗತಿಗಳೇ ನಡೆದಿಲ್ಲ. ಕೇವಲ ಆನ್ಲೈನ್ ಕ್ಲಾಸ್ಗೆ ಅಷ್ಟು ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲ. ವರ್ಷ ಮುಗಿದು ಹೋಗಿದೆ. ಕರೋನಾದಿಂದ ಪಾಲಕರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದು, ಖಾಸಗಿ ಶಾಲಾ ಶುಲ್ಕದಲ್ಲಿ ಕಡಿಮೆ ಮಾಡಬೇಕೆಂದು ಪೋಷಕರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಶಾಲಾ ಆಡಳಿತ ಮಂಡಳಿಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದವು. ಕರೋನಾದಿಂದ ಈಗಲೇ ವಿದ್ಯಾರ್ಥಿಗಳು ಶಾಲೆಗೆ ನೋಂದಣಿ ಆಗಿಲ್ಲ. ಕಳೆದ ವರ್ಷದ ಶಾಲಾ ಶುಲ್ಕ ಪಾವತಿ ಮಾಡಿಲ್ಲ. ಈ ವರ್ಷ ಕೋವಿಡ್ ನಿಂದ ಆರ್ಥಿಕ ಸಂಕಷ್ಟದಲ್ಲಿ ಶಾಲೆಗಳು ಮುಚ್ವುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿಕ್ಷಣ ಸಚಿವರ ಸಣ್ಣ ಐಡಿಯಾಗೆ ಶಿಕ್ಷಣ ಇಲಾಖೆ ಭ್ರಷ್ಟಾಚಾರ ಬಾಲ ಕಟ್ !
ಹೀಗಾಗಿ ಸರ್ಕಾರ ಹೇಳಿದಂತೆ ಶೇ. 30 ರಷ್ಟು ಶಾಲಾ ಶುಲ್ಕ ಕಡಿಮೆ ಮಾಡಲು ಸಾಧ್ಯವಿಲ್ಲ. ಮಿಗಿಲಾಗಿ ಖಾಸಗಿ ಶಾಲೆಗಳ ಆಡಳಿತ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಇರುವ ಶಾಲಾ ಶುಲ್ಕ ಪಾವತಿ ಮಾಡಬೇಕು. ಮಾನವೀಯ ನೆಲೆಯಲ್ಲಿ ಬೋಧನಾ ಶುಲ್ಕದಲ್ಲಿ ಶಾಲೆಗಳು ಕಡಿಮೆ ಮಾಡಲಿವೆ. ಶಿಕ್ಷಣ ಸಚಿವರು ವಿನಾಕಾರಣ ಹಸ್ತಕ್ಷೇಪ ಮಾಡುವುದು ಮೂಲಭೂತ ಹಕ್ಕು ಉಲ್ಲಂಘನೆ ಎಂಬುದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ವಾದ.
ಖಾಸಗಿ ಶಾಲಾ ಶುಲ್ಕದ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಸುರೇಶ್ ಕುಮಾರ್, ಶಾಲಾ ಶುಲ್ಕ ವಸೂಲಿ ಬಗ್ಗೆ ಖಾಸಗಿ ಸಂಸ್ಥೆಗಳು ಸರ್ಕಾರದ ಆದೇಶ ಪಾಲಿಸಬೇಕು. ಇಲ್ಲದಿದ್ದರೆ, ಸರ್ಕಾರ ತನ್ನ ಅಸ್ತ್ರ ಪ್ರಯೋಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಾನಾ ಖಾಸಗಿ ಶಾಲಾ ಶುಲ್ಕದ ವಿಚಾರದ ಬಗ್ಗೆ ನಾನಾ ಬೆಳವಣಿಗೆ ಆಗುತ್ತಿದೆ. ರಾಜ್ಯದಲ್ಲಿ ಖಾಸಗಿ ಶಾಲಾ ಸಂಸ್ಥೆಗಳಿಗೆ ಆಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲು ಕ್ಯಾಮ್ಸ್ ಸಂಘಟನೆ ಮುಂದಾಗಿದೆ.
ಈ ಕುರಿತು ಪ್ರತಿಕ್ರಿಯೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ , ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಕಾನೂನು ಬಾಹಿರ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದೇವೆ. ಪೋಷಕರಿಗೆ ಕಷ್ಟ ಇದೆ ನಿಜ. ಆದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನೂ ಕಷ್ಟದಲ್ಲಿ ಸಿಲುಕಿವೆ. ಶಾಲೆಗಳ ಕಷ್ಟಕ್ಕೂ ಸರ್ಕಾರ ಪರಿಹಾರದ ದಾರಿ ತೋರಿಸಬೇಕಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಸಮೀಕ್ಷಾ ವರದಿ ವಿವರ: ಕ್ಯಾಮ್ಸ್ ಸದಸ್ಯ ವುಳ್ಳ 70 ಶಾಲೆಗಳ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲಾಗಿದೆ. ಕೋವಿಡ್ ಕಷ್ಟ ಕಾಲದಲ್ಲಿ ಸರ್ಕಾರ ಖಾಸಗಿ ಶಾಲೆಗಳಿಗೆ ಐದು ಪೈಸೆ ನೆರವು ನೀಡಿಲ್ಲ. ಕಷ್ಟದಲ್ಲಿ ಸಿಲುಕಿದ್ದ ಶಾಲೆಗಳಿಗೆ ಸಣ್ಣ ನೆರವು ನೀಡಲಿಲ್ಲ. ಇನ್ನು ಶಾಲಾ ಆಡಳಿತ ಮಂಡಳಿಗಳ ಅಭಿಪ್ರಾಯ ಮಂಡಿಸದೇ 2020- 21- 2021- 2022 ನೇ ಸಾಲಿನ ಶಾಲಾ ಶುಲ್ಕದಲ್ಲಿ ರಿಯಾಯಿತಿ ಘೋಷಣೆ ಮಾಡಲಾಗಿದೆ. ಪರೀಕ್ಷೆ ಇಲ್ಲದೇ ಮಕ್ಕಳನ್ನು ಉತ್ತೀರ್ಣ ಮಾಡುವ ಬಗ್ಗೆಯೂ ಕೂಡ ನಿರ್ಧಾರ ಪ್ರಕಟಿಸಿಲ್ಲ. ಇದರ ನಡುವೆ ಶೇ. 30 ರಷ್ಟು ಶುಲ್ಕ ರಿಯಾಯಿತಿ ಘೋಷಣೆ ಮಾಡಿದರೆ, ಖಾಸಗಿ ಶಾಲೆಗಳಿಗೆ 2524 ಕೋಟಿ ರೂ. ನಷ್ಟವಾಗಲಿದೆ ಎಂದು ಕ್ಯಾಮ್ಸ್ ಸಮೀಕ್ಷಾ ವರದಿ ತಿಳಿಸಿದೆ.
ಸಮೀಕ್ಷಾ ವರದಿ ಪ್ರಕಾರ 2019- 20 ನೇ ಸಾಲಿನಲ್ಲಿ 60 ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದ LKG - UKG ಮಕ್ಕಳ ಸಂಖ್ಯೆ 5522, ಯರೂ ಟಿಸಿ ತೆಗೆದುಕೊಂಡು ಹೋಗಿಲ್ಲ, ಶಾಲೆ ಬಿಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ದಾಖಲಾಗಿ ಆಗಿರುವುದು ಕೇವಲ 1318 ಮಕ್ಕಳು ಮಾತ್ರ. ಶೇ. 74 ರಷ್ಟು ಮಕ್ಕಳು ದಾಖಲಾತಿಯೇ ಆಗಿಲ್ಲ. ಅದೇ ರೀತಿ 1 ರಿಂದ 5 ನೇ ತರಗತಿ ವರೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಐದು ಸಾವಿರ ಮಕ್ಕಳು ದಾಖಲಾತಿ ಪ್ರಕ್ರಿಯೆ ಮಾಡಿಲ್ಲ. ಶೇ. 34 ರಷ್ಟು ಮಕ್ಕಳು ಶಾಲೆಗೆ ದಾಖಲಾತಿ ಪಡೆದಿಲ್ಲ.
Recommended Video
ಒಟ್ಟಾರೆ ಶೇ. 30 ರಷ್ಟು ಮಕ್ಕಳು ಖಾಸಗಿ ಶಾಲೆಗಳಿಗೆ ದಾಖಲಾತಿಯೇ ಪಡೆದಿಲ್ಲ. ಇದಕ್ಕಿಂತೂ ದೊಡ್ಡ ಹೊಡೆತ ಇನ್ನೊಂದು ಬೇಕಿಲ್ಲ. ಇದರ ಜತೆಗೆ ಆರ್ಟಿಇ ಶುಲ್ಕ ಬಂದಿಲ್ಲ. ಇಂತಹ ಕಷ್ಟ ಕಾಲದಲ್ಲಿ ಶೇ. 30 ರಷ್ಟು ಶುಲ್ಕ ಕಡಿಮೆ ಮಾಡಬೇಕು ಎಂದು ಸರ್ಕಾರ ಹೇಳುವುದರಲ್ಲಿ ಅರ್ಥ ವಿದೆಯೇ ? ಖಾಸಗಿ ಶಾಲೆಗಳಿಗೆ ಎದುರಾಗಿರುವ ಕಷ್ಟದಿಂದ ಮುಚ್ಚಿಕೊಂಡು ಹೋಗುವ ಹಂತಕ್ಕೆ ತಲುಪಿವೆ. ಇದನ್ನು ಯಾಕೆ ಶಿಕ್ಷಣ ಮಂತ್ರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿಯೇ ನಾವು ನ್ಯಾಯಲಯದ ಮೊರೆ ಹೊಗುತ್ತೇವೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.