ಮೇ 14ರಿಂದ ಖಾಸಗಿ ಆಸ್ಪತ್ರೆಗಳ OPD ಆರಂಭ: ಆರೋಗ್ಯ ಸಚಿವ ಶ್ರೀರಾಮುಲು
ಬೆಂಗಳೂರು, ಮೇ 13: ಕೊರೊನಾ ವೈರಸ್ ಮಾರಣಾಂತಿಕವಲ್ಲ. ಅದರ ಬಗ್ಗೆ ಅನಗತ್ಯ ಭಯ ಬೇಡ. ಕೊರೊನಾ ವೈರಸ್ ಸೋಂಕಿತರ ಹೊರತಾಗಿ ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕಬಾರದು. ಜನರಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳೊಂದಿಗೆ ಈ ಕುರಿತು ಅವರು ಚರ್ಚಿಸಿದ್ದಾರೆ.
ಹೀಗಾಗಿ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿರುವಾಗಲೇ ಮೇ 14ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಆರಂಭಿಸಲು ಒಪ್ಪಿಕೊಂಡಿವೆ. ಖಾಸಗಿ ಆಸ್ಪತ್ರೆಗಳಿಗೆ ವಿಧಿಸಿದ್ದ ಕೆಲವು ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಲು ನಿರ್ಧಾರ ಮಾಡಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಆರಂಭಿಸಲು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಒಪ್ಪಿಕೊಂಡಿವೆ.
ಕೋವಿಡ್ -19 ಪತ್ತೆಯಾದರೆ ಆಸ್ಪತ್ರೆ ಬಂದ್ ಮಾಡುವಂತಿಲ್ಲ
ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳುಗಳಿಂದ ತುರ್ತು ಚಿಕಿತ್ಸೆಯನ್ನು ಮಾತ್ರ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ವಿಡಿಯೊ ಕಾನ್ಫರೆನ್ಸ್ನಲ್ಲಿ 43 ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹಾಗೂ ತಜ್ಞರು ಭಾಗವಹಿಸಿದ್ದರು.
ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಒಪ್ಪಿಗೆ
ಶಂಕಿತರಲ್ಲದ ರೋಗಿಗಳು, ಅಂದರೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳೊಂದಿಗಿನ ಚರ್ಚೆಯ ಬಳಿಕ ಹೇಳಿದ್ದಾರೆ. ಕೊರೊನಾ ವೈರಸ್ ಸೋಂಕಿರುವ ವ್ಯಕ್ತಿಗಳು ಆಸ್ಪತ್ರೆಗೆ ಬಂದು ಹೋದರೆ ಆಸ್ಪತ್ರೆ ಸೀಲ್ಡೌನ್ ಆಗುವ ಆತಂಕ ನಿವಾರಣೆ ಮಾಡಲಾಗಿದೆ. ಕೋವಿಡ್ 19 ಸೋಂಕಿರುವವರು ಬಂದು ಹೋದರೆ ಆಸ್ಪತ್ರೆಗಳನ್ನು ಸೀಲ್ಡೌನ್ ಮಾಡುವುದಿಲ್ಲ, ಬದಲಿಗೆ ಸ್ಯಾನಿಟೈಸ್ ಮಾತ್ರ ಮಾಡಲಾಗುತ್ತದೆ, ಇದರಿಂದ ಸಾಮಾನ್ಯ ರೋಗಿಗಳಿಗೆ ತೊಂದರೆ, ಆತಂಕ ಉಂಟಾಗುವುದಿಲ್ಲ ಎಂದಿದ್ದಾರೆ.
ವೈದ್ಯರಿಗೆ ಹೋಂ ಕ್ವಾರಂಟೈನ್
ಅರಿಯದೆ ಕೊರೊನಾ ವೈರಸ್ ಸೋಂಕಿರುವ ವ್ಯಕ್ತಿಗಳಿಗೆ ಚಿಕಿತ್ಸೆ ಕೊಡುವ ಖಾಸಗಿ ವೈದ್ಯರಿಗೆ ಹೋಮ್ ಕ್ವಾರಂಟೈನ್ಗೆ ಸೂಚಿಸಲಾಗಿದೆ. ಕೊರೊನಾ ಪಾಸಿಟಿವ್ ಇರುವ ಸೋಂಕಿತರಿಗೆ ಚಿಕಿತ್ಸೆ ಕೊಟ್ಟಂತಹ ಸಂದರ್ಭಗಳಲ್ಲಿ ಖಾಸಗಿ ವೈದ್ಯರನ್ನು ಸರ್ಕಾರಿ ಕ್ವಾರಂಟೈನ್ಗೆ ಒಳಪಡಿಸುವುದಿಲ್ಲ, ಬದಲಿಗೆ ಮನೆಯಲ್ಲಿಯೆ ಪ್ರತ್ಯೇಕವಾಗಿರುವಂತೆ ಸೂಚಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ಕೊಟ್ಟಿದ್ದಾರೆ.
ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಇಲ್ಲ!
ಗರ್ಭಿಣಿಯರು ಕಂಟೋನ್ಮೆಂಟ್ ಝೋನ್ನಿಂದ ಬಂದರೆ ಮಾತ್ರ ಕೊರೊನಾ ವೈರಸ್ ಪರೀಕ್ಷೆ ಮಾಡಬೇಕು. ಇಲ್ಲದೆ ಹೋದರೆ ಅವರಿಗೆ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಆಕಸ್ಮಿಕವಾಗಿ ಕೊರೊನಾ ವೈರಸ್ ರೋಗಿ ಬಂದರೆ ಪ್ರತ್ಯೇಕ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ಕೊಡಬೇಕು. ಆನಂತರ ಕೋರೋನಾ ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕೆಂದು ಆರೋಗ್ಯ ಸಚಿವರು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ.
ಸಾಮಾನ್ಯ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ!
ಕೊರೊನಾ ಸೋಂಕಿತರಲ್ಲದ ರೋಗಿಗಳಿಗೆ ಯಾವುದೇ ಕಾರಣಕ್ಕೂ ಚಿಕಿತ್ಸೆ ನಿರಾಕರಿಸಬಾರದು. ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಒಂದು ಪ್ರತ್ಯೇಕ ವಾರ್ಡ್ನ್ನು ಮೀಸಲಿಡಲು ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರಿದರೆ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳು ಸರ್ಕಾರದ ಜತೆ ಕೈಜೋಡಿಸಬೇಕು. ಈ ಬಗ್ಗೆ ನಿರ್ದೇಶನ ಕೂಡ ನೀಡಲಾಗಿದೆ ಎಂದು ಶ್ರೀರಾಮುಲು ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ನಾಳೆಯಿಂದ ಬಾಗಿಲು ತೆರೆಯಲು ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳು ಒಪ್ಪಿಗೆ ನೀಡಿವೆ.