ಖಾಸಗಿ ವೈದ್ಯರ ದಿಢೀರ್ ಪ್ರತಿಭಟನೆ: ರೋಗಿಗಳ ಪರದಾಟ
Recommended Video
ಬೆಂಗಳೂರು, ಜುಲೈ 28: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ (ಒಪಿಡಿ) ಬಂದ್ ಆಗಿದೆ. ಇದರಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ರೋಗಿಗಳು ವೈದ್ಯರಿಲ್ಲದೆ ಪರದಾಡುವಂತಾಗಿದೆ.
ಈ ಮೊದಲೇ ದಾಖಲಾದ ರೋಗಿಗಳು, ತುರ್ತು ಚಿಕಿತ್ಸಾ ಘಟಕಗಳು ಹಾಗೂ ಒಳರೋಗಿ ಚಿಕಿತ್ಸಾ ಘಟಕಗಳ ಸೇವೆಗೆ ಯಾವುದೇ ಧಕ್ಕೆ ಇಲ್ಲ.
ಖಾಸಗಿ ಆಸ್ಪತ್ರೆಗಳ ಹೊಸ ಕಾಯ್ದೆ: ಶನಿವಾರ ದೇಶಾದ್ಯಂತ ಆಸ್ಪತ್ರೆ ಬಂದ್
ಬೆಳಿಗ್ಗೆ 6 ರಿಂದಲೇ ಪ್ರತಿಭಟನೆ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೂ ಬಂದ್ ನಡೆಯಲಿದೆ. ಸುಮಾರು 2.50 ಲಕ್ಷ ಖಾಸಗಿ ವೈದ್ಯರಿಂದ ಪ್ರತಿಭಟನೆ ನಡೆಯುತ್ತಿದೆ.
ವೈದ್ಯರ ದಿಢೀರ್ ಮುಷ್ಕರದಿಂದ ದೇಶದಾದ್ಯಂತ ರೋಗಿಗಳು ಪರದಾಡುವಂತಾಗಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ರೋಗಿಗಳು ವಾಪಸಾಗುತ್ತಿದ್ದಾರೆ. ಇನ್ನು ಕೆಲವರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.
ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ಸರ್ಕಾರಿ ವೈದ್ಯರಿಗೆ ಸೂಚಿಸಲಾಗಿದೆ.
ಬೆಂಗಳೂರು ಸೇರಿದಂತೆ ಅನೇಕ ಕಡೆ ಬಂದ್ಗೆ ಖಾಸಗಿ ಆಸ್ಪತ್ರೆಗಳಿಂದ ಬೆಂಬಲ ದೊರೆತಿಲ್ಲ. ಬೆಂಗಳೂರಿನ ಅಪೋಲೊ, ಕೊಲಂಬಿಯಾ ಏಷ್ಯಾ, ಎಂ.ಎಸ್. ರಾಮಯ್ಯ, ನಾರಾಯಣ ಹೆಲ್ತ್ ಸಿಟಿ ಸೇರಿದಂತೆ ಅನೇಕ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಕಿಮ್ಸ್ ಆಸ್ಪತ್ರೆ:ಸಿಗದ ಭರವಸೆ,ಮುಗಿಯದ ಪ್ರತಿಭಟನೆ,ರೋಗಿಗಳ ಗೋಳು
ಬಹುತೇಕ ವೈದ್ಯಕೀಯ ಕಾಲೇಜುಗಳು ಮುಷ್ಕರಕ್ಕೆ ಬೆಂಬಲ ನೀಡಿಲ್ಲ.
ಭಾರತೀಯ ವೈದ್ಯಕೀಯ ಸಮಿತಿ (ಎಂಸಿಐ) ಅನ್ನು ಬದಲಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಜಾರಿಗೆ ತರುವ ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯು 'ಧಿಕ್ಕಾರ ದಿವಸ- ನೋ ಟು ಎನ್ಎಂಸಿ ಬಿಲ್' ಪ್ರತಿಭಟನೆ ನಡೆಸುತ್ತಿದೆ.
ವೈದ್ಯಕೀಯ ಸಂಸ್ಥೆಯ ಸದಸ್ಯರು ಸಭೆ ನಡೆಸಿ ಎಂಸಿಐ ಮಸೂದೆ ವಿರುದ್ಧ ನಿರ್ಣಯ ಅಂಗೀಕರಿಸಲಿದ್ದಾರೆ. ಈ ಮಸೂದೆಯು ಬಡವರ, ಜನರ ಮತ್ತು ಪ್ರಜಾಪ್ರಭುತ್ವದ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಐಎಂಎ ಹೇಳಿದೆ.
ಒಂದು ವೇಳೆ ಈ ಮಸೂದೆ ಜಾರಿಯಾದರೆ ಇದರಿಂದ ಆರೋಗ್ಯ ವಲಯದ ಮೇಲೆ ಮಾತ್ರವಲ್ಲ, ದೇಶದ ಪ್ರಜಾತಂತ್ರ ವ್ಯವಸ್ಥೆ ಮೇಲೆಯೂ ಪರಿಣಾಮ ಉಂಟುಮಾಡಲಿದೆ ಎಂದು ಅದು ಹೇಳಿದೆ.
ಪರ್ಯಾಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ವೃತ್ತಿ ನಡೆಸುವವರಿಗೂ ಅಲೋಪತಿ ವೈದ್ಯಕೀಯ ಅಭ್ಯಾಸ ನಡೆಸಲು ಈ ಮಸೂದೆ ಅವಕಾಶ ನೀಡಲಿದೆ. ಇದರಿಂದ ವೈದ್ಯರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.