ಬೆಂಗಳೂರು ಉದ್ಯೋಗಿಯ ಪ್ರಾಣ ತೆಗೆದ ಬೈಕ್ ವ್ಹೀಲಿಂಗ್
ಚಿಕ್ಕಮಗಳೂರು,ಮಾರ್ಚ್,28: ಕೆಮ್ಮಣ್ಣು ಗುಂಡಿಗೆ ತೆರಳಿದ್ದ ಮೂವತ್ತು ಜನರ ಗುಂಪಿನಲ್ಲಿ ಇಬ್ಬರು ಯುವಕರು ವ್ಹೀಲಿಂಗ್ ಮಾಡಲು ಹೋಗಿ ಅದರಲ್ಲಿ ಒಬ್ಬ ಪ್ರಾಣ ಕಳೆದುಕೊಂಡರೆ, ಮತ್ತೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹರ್ಷಿತ್ (25) ವ್ಹೀಲಿಂಗ್ ಮಾಡಲು ಹೋಗಿ ಸಾವನ್ನಪ್ಪಿದರೆ, ಈತನ ಸ್ನೇಹಿತ ಲಿಖಿತ್ (24) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.[ಕೆಮ್ಮಣ್ಣುಗುಂಡಿ - ರಾಜವೈಭವದ ಧಾಮ]
ಘಟನೆಯ ವಿವರ:
ಹರ್ಷಿತ್, ಲಿಖಿತ್ ಸೇರಿದಂತೆ ಒಟ್ಟು 30 ಜನರ ತಂಡ ತಮ್ಮ ರಜೆ ದಿನಗಳನ್ನು ಕಳೆಯಲು ಚಿಕ್ಕಮಗಳೂರು ಸಮೀಪದ ಕೆಮ್ಮಣ್ಣುಗುಂಡಿಗೆ ಹೋಗಿದ್ದರು. ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದಾಗ ಬೈಕ್ ಓಡಿಸುತ್ತಿದ್ದ ಹರ್ಷಿತ್ ವ್ಹೀಲಿಂಗ್ ಮಾಡುವ ಪ್ರಯತ್ನ ಪಟ್ಟಿದ್ದಾನೆ.
ಆ ಸಂದರ್ಭದಲ್ಲಿ ಬೈಕಿನ ಹಿಡಿತ ತಪ್ಪಿದ ಪರಿಣಾಮ ಆತನ ಬೈಕ್ 10 ಅಡಿ ಎತ್ತರದಿಂದ ಬಿದ್ದು ಮರಕ್ಕೆ ಡಿಕ್ಕಿ ಹೊಡೆದಿದೆ. ಆಗ ಬೈಕ್ ಮರಕ್ಕೆ ಸಿಕ್ಕಿಹಾಕಿಕೊಂಡಿದ್ದು ಹರ್ಷಿತ್ ಮತ್ತು ಲಿಖಿತ್ ಕೆಳಕ್ಕೆ ಬಿದ್ದಿದ್ದಾರೆ. ಹರ್ಷಿತ್ ಸ್ತಳದಲ್ಲಿಯೇ ಮೃತಪಟ್ಟಿದ್ದು, ಲಿಖಿತ್ ಪ್ರಾಣಪಾಯದಿಂದ ಪಾರಾಗಿದ್ದಾನೆ.[ನೀರಿನಲ್ಲಿ ಮೋಜು, ಮಸ್ತಿ: ಪ್ರಾಣತೆತ್ತ ನಾಲ್ವರು ವೈದ್ಯರು]
ಮೂವತ್ತು ಜನರ ತಂಡ ಅಜಿತ್ ಭಾರದ್ವಾಜ್ ಏರ್ಪಡಿಸಿದ್ದ ಬೈಕ್ ಪ್ರವಾಸದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆ ವೇಳೆ ಈ ದುರ್ಗಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.