ಸಿಎಂ ಯಡಿಯೂರಪ್ಪ ಅವರಿಗೆ 78ನೇ ಹುಟ್ಟುಹಬ್ಬದ ಸಂಭ್ರಮ, ಶುಭಕೋರಿದ ಪ್ರಧಾನಿ
ಬೆಂಗಳೂರು, ಫೆ. 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 78ನೇ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಡಾಲರ್ಸ್ ಕಾಲನಿ ನಿವಾಸದಲ್ಲಿ ಶುಭಕೋರಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವೀಟರ್ನಲ್ಲಿ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.
ಡಾಲರ್ಸ್ ಕಾಲನಿಯ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ್ದ ಡಿಸಿಎಂ ಗೋವಿಂದ ಕಾರಜೋಳ್, ಸಚಿವ ಗೋಪಾಲಯ್ಯ, ಸಂಸದರಾದ ಪಿ ಸಿ ಮೋಹನ್, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಹುಟ್ಟು ಹಬ್ಬದ ಮುನ್ನಾ ದಿನ ಯಡಿಯೂರಪ್ಪ ಟ್ವೀಟ್
ನಂತರ ಸರ್ಕಾರಿ ಬಂಗಲೆ ಕಾವೇರಿಯಲ್ಲಿ ಗೃಹಪ್ರವೇಶ ಪೂಜೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿದ್ದರು. ಸರ್ಕಾರಿ ನಿವಾಸ ಕಾವೇರಿಯ ಸುತ್ತಲೂ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಬಿಳಿ ರೇಷ್ಮೆ ಅಂಗಿ, ಪಂಚೆ, ಶಲ್ಯ ಧರಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೂಜೆಯಲ್ಲಿ ಭಾಗವಹಿಸಿದ್ದರು.
ಡಾಲರ್ಸ್ ಕಾಲನಿ ನಿವಾಸದಲ್ಲಿ ಶುಭಕೋರಿದ ಅಭಿಮಾನಿಗಳು
ಬೆಳಗ್ಗೆಯ ಬೆಂಗಳೂರಿನ ಡಾಲರ್ಸ್ ಕಾಲನಿಯ ಧವಳಗಿರಿ ನಿವಾಸದಲ್ಲಿ ಸೇರಿದ್ದು ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ರು. ಹಾರ, ಹೂವಿನ ಬುಕ್ಕೆ ತರಬಾರದು ಎಂದು ಯಡಿಯೂರಪ್ಪ ಅವರು ನಿನ್ನೆಯೆ ಮನವಿ ಮಾಡಿದ್ದರು. ಆದರೂ ಅಭಿಮಾನಿಗಳು, ಮುಖಂಡರು ಹಾರ, ಬುಕ್ಕೆಯೊಂದಿಗೆ ಶುಭಾಶಯ ಕೋರಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ, ಸಚಿವ ಗೋಪಾಲಯ್ಯ, ಸಂದರಾದ ಪಿಸಿ ಮೋಹನ್, ಶೋಭಾ ಕರಂದ್ಲಾಜೆ ಸೇರಿದಂತೆ ಅಭಿಮಾನಿಗಳು ಬೆಳಗ್ಗೆಯೆ ಶುಭಕೋರಿದ್ರು.
ಬಿಎಸ್ವೈಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಸದಾ ಕಠಿಣ ಶ್ರಮದಿಂದ ಕೆಲಸ ಮಾಡುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರಾಜ್ಯದ ಅಭಿವೃದ್ಧಿ ಅದರಲ್ಲೂ ರೈತರು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಅತ್ಯುತ್ಸಾಹದಿಂದ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ಭಗವಂತ ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಕೊಡಲಿ ಎಂದು ಪ್ರಧಾನಿ ಮೋದಿ ಅವರು ಟ್ವಿಟರ್ ಮೂಲಕ ಹಾರೈಸಿದ್ದಾರೆ.
ಹುಟ್ಟುಹಬ್ಬದಂದು ಸಿಎಂ ಯಡಿಯೂರಪ್ಪ ದಿನಚರಿ ಏನು ಗೊತ್ತಾ?
ಕಾವೇರಿ ಗೃಹಪ್ರವೇಶ ಪೂಜೆಯಲ್ಲಿ ಮಕ್ಕಳೊಂದಿಗೆ ಬಿಎಸ್ವೈ ಭಾಗಿ
ಡಾಲರ್ಸ್ ಕಾಲನಿಯಿಂದ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಕುಟುಂಬಸ್ಥರೊಂದಿಗೆ ಗೃಹಪ್ರವೇಶದ ಪೂಜೆಯಲ್ಲಿ ಭಾಗಿಯಾದರು. ಪುತ್ರರಾದ ಸಂಸದ ಬಿ ವೈ ರಾಘವೇಂದ್ರ, ವಿಜಯೇಂದ್ರ ಹಾಗೂ ಅವರ ಪತ್ನಿಯರು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಕಾವೇರಿ ನಿವಾಸದಲ್ಲಿ ಬೆಳಿಗ್ಗೆಯಿಂದಲೂ ಹೋಮ ಹವನ ನಡೆಯಿತು. ಸಿಎಂ ಯಡಿಯೂರಪ್ಪ ಪುತ್ರಿಯರು, ಮೊಮ್ಮಕ್ಕಳು ಭಾಗಿಯಾಗಿದ್ದರು.
ಸಿಎಂ ಯಡಿಯೂರಪ್ಪ ಅವರು ಸರ್ಕಾರಿ ನಿವಾಸ ಪ್ರವೇಶಕ್ಕೂ ಮುನ್ನ ವಿಶೇಷ ಪೂಜೆ ನಡೆಯಿತು.
ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಸೇವಿಸಿದ ಬಿಎಸ್ವೈ
ಸರ್ಕಾರಿ ನಿವಾಸ ಕಾವೇರಿಯಲ್ಲಿ ಗೃಹಪ್ರವೇಶದ ಪೂಜೆಯ ಬಳಿಕ ಸಂಪುಟ ಸಹೋದ್ಯೋಗಿಗಳೊಂದಿಗೆ ಯಡಿಯೂರಪ್ಪ ಅವರು ಉಪಹಾರ ಸೇವನೆ ಮಾಡಿದ್ರು. ಡಿಸಿಎಂ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿಗೌಡರ್, ಶಾಸಕರಾದ ಸಿದ್ದು ಸವದಿ, ಮಾಜಿ ಶಾಸಕ ಯು.ಬಿ. ಬಣಕಾರ್ ಸೇರಿದಂತೆ ಹಲವರೊಂದಿಗೆ ಉಪಹಾರ ಸೇವನೆ ಮಾಡಿದ್ರು.
ಸಂಜೆ ಅರಮನೆ ಮೈದಾನದಲ್ಲಿ 'ದಣಿವರಿಯದ ಧೀಮಂತ' ಸಮಾರಂಭ
ಸಂಜೆ 6ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ 'ದಣಿವರಿಯದ ಧೀಮಂತ' ಅಭಿನಂದನಾ ಸಮಾರಂಭ ನಡೆಯಲಿದೆ. ಪಕ್ಷಾತೀತವಾಗಿ ರಾಜಕೀಯ ನಾಯಕರು ಭಾಗವಹಿಸುತ್ತಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ. ದೇವೇಗೌಡ ಅತಿಥಿಗಳಾಗಿ ಭಾಗವಹಿಸುತ್ತಿರುವುದು ವಿಶೇಷ.