ದಸರಾ ನಂತರ ಪ್ರಾಥಮಿಕ ಶಾಲೆ ಪ್ರಾರಂಭ? ಶಿಕ್ಷಣ ಸಚಿವರು ಹೇಳಿದ್ದೇನು?
ಬೆಂಗಳೂರು: ದಸರಾ ಬಳಿಕ ಪ್ರಾಥಮಿಕ ಶಾಲೆಗಳು ಪ್ರಾರಂಭ ಆಗುವ ಸುಳಿವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೀಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು ಎಂಬುದು ಸರ್ಕಾರದ ನಿಲುವೂ ಆಗಿದೆ. ಸಾಂಕ್ರಾಮಿಕ ರೋಗದ ಭಯದಿಂದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಆಗಬಾರದು ಎಂಬ ಒಂದೇ ಕಾರಣಕ್ಕೆ ಹಿಂದೇಟು ಹಾಕಲಾಗುತ್ತಿತ್ತು. ಆದರೀಗ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ಈ ಬಗ್ಗೆ ತಜ್ಞರ ಜೊತೆ ಸಭೆ ನಡೆಸಿ ಅವರ ಅಭಿಪ್ರಾಯವನ್ನೂ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಗುರುವಾರ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸದ್ಯ ಕೋವಿಡ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ. ಆದರೀಗ ಕೋವಿಡ್ ಆತಂಕ ಕಡಿಮೆ ಆಗಿದೆ. ಆದರೆ, ಡೆಂಗ್ಯೂ ಹಾಗೂ ವೈರಲ್ ಜ್ವರ ಮಕ್ಕಳನ್ನು ಬಾಧಿಸುತ್ತಿದೆ. ಹೀಗಾಗಿ ದಸರಾ ವೇಳೆಗೆ ಈ ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬಂದರೆ ಶಾಲೆಗಳನ್ನು ಪುನರಾರಂಭಿಸಲಾಗುವುದು. ಆಗ ಪೋಷಕರೂ ಸಹ ತಮ್ಮ ಮಕ್ಕಳನ್ನು ನಿರಾಂತಕವಾಗಿ ಶಾಲೆಗಳಿಗೆ ಕಳುಹಿಸಬಹುದು ಎಂದು ಹೇಳಿದರು.
ಪಕ್ಕದ ರಾಜ್ಯಗಳಲ್ಲಿ ಪ್ರಾರಂಭ:
ಆಂಧ್ರಪ್ರದೇಶದಲ್ಲಿ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗುತ್ತಿವೆ. ಕೇರಳದಲ್ಲಿ ನ.1ರಿಂದ ಪ್ರಾರಂಭ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಹೀಗಾಗಿ ರಾಜ್ಯದಲ್ಲಿಯೂ ಪ್ರಾಥಮಿಕ ಶಾಲೆಯ ಪ್ರಾರಂಭದ ಅಗತ್ಯತೆಯ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಗೆ ತಿಳಿಸಲಾಗುವುದು. ಅವರ ಅಭಿಪ್ರಾಯ ಪಡೆದೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಶಿಕ್ಷಣ ಇಲಾಖೆ ಈಗಾಗಲೇ 1ರಿಂದ 5ನೇ ತರಗತಿವರೆಗೆ ಶಾಲೆ ಪ್ರಾರಂಭಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಂದೆ ಮನವಿ ಮಾಡಿದೆ. ಒಂದು ವೇಳೆ ಒಂದನೇ ತರಗತಿಯಿಂದ ಪ್ರಾರಂಭಿಸಲು ಅನುಮತಿ ಸಿಗದಿದ್ದರೆ, ಕನಿಷ್ಟ 3ರಿಂದ5ನೇ ತರಗತಿವರೆಗಾದರೂ ಅನುಮತಿ ನೀಡಿ ಎಂದು ಮನವಿ ಮಾಡಲಾಗಿದೆ. ಇನ್ನೂ ಕೆಲ ಸಮಯ ಕಳೆದ ಬಳಿಕ ಎಲ್ಲ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ವಿವರಿಸಿದರು.
ಹೆಚ್ಚಿದ ಒತ್ತಡ:
ಕೋವಿಡ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವ ಇರುವ ಜಿಲ್ಲೆಗಳಲ್ಲಿ ಈಗಾಗಲೇ 5ರಿಂದ12ನೇ ತರಗತಿವರೆಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ. 1ರಿಂದ 5ನೇ ತರಗತಿವರೆಗಿನ ಶಾಲೆಗಳಲ್ಲಿಯೂ ಸಹ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು ಸೇರಿ 35 ಲಕ್ಷಕ್ಕೂ ಅಧಿಕ ಮಕ್ಕಳು ಇದ್ದಾರೆ. ಅವರ ಭವಿಷ್ಯದ ಗತಿಯೇನ? ಕೂಡಲೇ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಶಿಕ್ಷಣ ತಜ್ಞರು ಒತ್ತಾಯಿಸಿದ್ದರು.
ಪ್ರಾಥಮಿಕ ಶಾಳೆಗಳನ್ನು ಪ್ರಾರಂಭಿಸದ ಕಾರಣ ಮಕ್ಕಳು ಅಕ್ಷರ ಜ್ಞಾನ ಮರೆಯುತ್ತಿದ್ದಾರೆ. ಅಲ್ಲದೆ, ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಅವರನ್ನು ಬಾಲಕಾರ್ಮಿಕ, ಜೀತ ಪದ್ಧತಿಗೆ ದೂಡಲಾಗುತ್ತದೆ. ಬಾಲ್ಯ ವಿವಾಹಗಳೂ ಹೆಚ್ಚಾಗುತ್ತಿವೆ. ಮುಖ್ಯವಾಗಿ ಕೋವಿಡ್ ಕಾರಣದಿಂದ ಬಡ ಕುಟುಂಬಗಳು ಸಂಕಷ್ಟದಲಿದ್ದು, ಮಕ್ಕಳಿಗೆ ಮನೆಯಲ್ಲಿ ಸರಿಯಾದ ಪೌಷ್ಠಿಕಾಂಶದ ಊಟ ಸಿಗುತ್ತಿಲ್ಲ. ಆದ್ದರಿಂದ ಶಾಲೆಗಳನ್ನು ಪುನರಾರಂಭಿಸಿ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳನ್ನು ಆರಂಭಿಸಬೇಕು ಎಂಬ ಒತ್ತಡವೂ ಕೇಳಿಬಂದಿತ್ತು. ಶಾಲೆಗಳು ನಡೆಯದಿದ್ದರೆ ದುಡಿಯುವ ತಂದೆ-ತಾಯಿ ತಮ್ಮ ಮಕ್ಕಳನ್ನು ಎಲ್ಲಿ ಬಿಟ್ಟು ಹೋಗಬೇಕು ಎಂದೂ ಪ್ರಶ್ನಿಸಿದ್ದರು. ಪ್ರಾಥಮಿಕ ಶಾಲೆಗಳು ಪ್ರಾರಭವಾದರೆ ಈ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಿದಂತಾಗುತ್ತದೆ.
Recommended Video