'ಹಿಂದಿ ಬೋಲೋ' ಎಂದ ಕಿಡಿಗೇಡಿಗಳಿಗೆ 'ಕನ್ನಡ ಮಾತಾಡೋ' ಎಂದ ಯುವತಿ: ವಿಡಿಯೋ ವೈರಲ್
ಬೆಂಗಳೂರು, ಏಪ್ರಿಲ್ 29: ಭಾಷೆ ಎಂಬುದು ಸಂವಹನ ಮಾಧ್ಯಮ. ಸಂಸ್ಕೃತಿಯ ಪ್ರತೀಕವು ಆಗಿದೆ. ಭಾಷೆಯ ಮೇಲೆ ಅಭಿಮಾನವಿರಬೇಕು, ಗೌರವವಿರಬೇಕು. ಹಾಗಂತ ನಾವೂ ಯಾವತ್ತೂ ಬೇರೆಯ ಭಾಷೆಯನ್ನು ನಿಂದಿಸಬಾರದು. ಆದರೆ ಕೆಲವೊಮ್ಮೆ ಭಾಷೆಯ ಅಂಧಾಭಿಮಾನಕ್ಕೆ ಒಳಗಾಗುವ ಕೆಲವು ದುಷ್ಕರ್ಮಿಗಳು ತಮ್ಮ ಭಾಷೆಯೇ ಶ್ರೇಷ್ಠ ಆ ಭಾಷೆಯಲ್ಲೇ ಮಾತನಾಡಬೇಕು ಎಂದೆಲ್ಲಾ ಒತ್ತಡ ಹಾಕ್ತಾರೆೆ. ಇಂಥದ್ದೇ ಘಟನೆಯೊಂದು ಗೋವಾದಲ್ಲಿ ನಡೆದಿದೆ. ಕನ್ನಡತಿಯೊಬ್ಬರು ಕನ್ನಡದಲ್ಲಿ ಮಾತನಾಡಿದ್ದಕ್ಕೆ ಹಿಂದಿಯಲ್ಲಿ ಮಾತನಾಡಿ ವಂದೇ ಮಾತರಂ ಎಂದು ಕೂಗಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿ ಭಾರೀ ಸದ್ದು ಮಾಡ್ತಿದೆ.
ಹಿಂದಿ ಜಟಾಪಟಿ ನಡುವೆ ವೈರಲ್ ಆದ ವಿಡಿಯೋ:
ಕನ್ನಡ ಸಿನಿಮವೊಂದರ ಟೈಟಲ್ ಲಾಂಚ್ ಸಮಯದಲ್ಲಿ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ ಎಂಬ ಭಾವನೆಯಲ್ಲಿ ಮಾತನಾಡುತ್ತಾರೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಬಾಲಿವುಡ್ ಹೀರೋ ಅಜಯ್ ದೇವಗನ್, ಹಿಂದಿ ರಾಷ್ಟೀಯ ಭಾಷೆ ನಿವ್ಯಾಕೆ ಕನ್ನಡ ಸಿನಿಮಾ ಹಿಂದಿಯಲ್ಲಿ ಡಬ್ ಮಾಡ್ತೀರ ಎಂದು ಟ್ವೀಟ್ ಮಾಡಿದ್ದರು. ಇದೇ ವಿಚಾರದಲ್ಲಿ ಹಲವಾರು ಚರ್ಚೆಗಳು ಜೋರಾದವು. ಈ ವಿಚಾರದಲ್ಲಿ ಸುದೀಪ್ ಮತ್ತು ಅಜಯ್ ದೇವಗನ್ ಸಮಜಾಷಿ ಕೊಟ್ಟು ಸುಮ್ಮನಾದರು.
ಆದರೆ ಇದೇ ಸಂದರ್ಭದಲ್ಲಿ ಗೋವಾಕ್ಕೆ ಹೋಗಿದ್ದ ಕನ್ನಡತಿ ಕನ್ನಡದಲ್ಲಿ ಮಾತನಾಡಿದ್ದಾಳೆ. ಆದರೆ ಈ ವೇಳೆ ಅಲ್ಲಿದ್ದ ಕೆಲವು ಕಿಡಿಗೇಡಿಗಳು ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯ ಮಾಡಿದ್ದಾರೆ. ನೀವು ಕನ್ನಡದಲ್ಲಿ ಮಾತನಾಡಿ ಎಂದು ಅಲ್ಲೇ ಖಡಕ್ ಆಗಿ ತಿರುಗೇಟನ್ನು ಕನ್ನಡತಿ ನೀಡಿದ್ದಾಳೆ. ಆಗ ಹಿಂದಿಯಲ್ಲಿ ಮಾತನಾಡುವಂತೆ ಮತ್ತೆ ಒತ್ತಾಯಿಸಿ ವಂದೇ ಮಾತರಂ ಎಂದು ಕೂಗಿದ್ದಾರೆ.
ವಿಡಿಯೋದಲ್ಲಿರುವ ಕನ್ನಡತಿ ಯಾರು ಎಂಬುದು ತಿಳಿದಿಲ್ಲ:
ಇನ್ನು ಈ ವಿಡಿಯೋ ರೆಕಾರ್ಡ್ ಆಗಿರುವುದು ಗೋವಾದಲ್ಲಿ ಎಂದು ಹೇಳಲಾಗುತ್ತಿದೆ. ನಿಖರವಾಗಿ ಯಾವ ದಿನ ರೆಕಾರ್ಡ್ ಆಯ್ತು ಎಂಬದು ತಿಳಿದಿಲ್ಲ. ಆದರೆ ಈ ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ಮಹಿಳೆ ಯಾರು. ಯಾವ ಬೀಚ್ಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆಯಿತು ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಕನ್ನಡತಿಗೆ ಹಾರಾಸ್ಮೆಂಟ್ ಎಂದು ಟ್ಯಾಗ್ ಮಾಡಿ ಈ ವಿಡಿಯೋವನ್ನು ಹಾಕಲಾಗಿದೆ.
ಹೀಗಿದೆ ಹಿಂದಿ ದಬ್ಬಾಳಿಕೆ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) April 24, 2022
ಏನೇ ಆಗಲಿ ಈ ದುರಹಂಕಾರಿ ಹಿಂದಿವಾಲನಿಗೆ ಸರಿಯಾದ ಉತ್ತರ ಕೊಟ್ಟ ಕನ್ನಡತಿಗೆ ಧನ್ಯವಾದಗಳು.
ಇವನ ಪ್ರಕಾರ ಹಿಂದಿ ಕಲಿತರೆ ಮಾತ್ರ ಭಾರತೀಯ ಅನ್ನೋ ಅರ್ಥದಲ್ಲಿ ವಂದೇ ಮಾತರಂ,ಹಿಂದಿ ಬೋಲೋ ಅಂತಾವನೆ ಈ ನಾಲಯಕ್.
ಲೇ ಮಂಗ ನಾವು ಸಾವಿರಾರು ವರ್ಷಗಳ ಕನ್ನಡ ಮಾತಾಡೋ ಕನ್ನಡಿಗರು ಕಣೋ
ನೆನ್ನೆಮೊನ್ನೆಯ ಹಿಂದಿ ಮಾತಾಡೋರಲ್ಲ. pic.twitter.com/BH5Tlcdqm3
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ :
ಇನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ""ಹೀಗಿದೆ ಹಿಂದಿ ದಬ್ಬಾಳಿಕೆ ಏನೇ ಆಗಲಿಈ ದುರಹಂಕಾರಿ ಹಿಂದಿವಾಲನಿಗೆ ಸರಿಯಾದ ಉತ್ತರ ಕೊಟ್ಟ ಕನ್ನಡತಿ ಧನ್ಯವಾದಗಳು. ಇವನ ಪ್ರಕಾರ ಹಿಂದಿ ಕಲಿತರೆ ಮಾತ್ರ ಭಾರತೀಯ ಅನ್ನೋ ಅರ್ಥದಲ್ಲಿ ವಂದೇ ಮಾತರಂ, ಹಿಂದಿ ಬೋಲೋ ಅಂತಾನೇ ಈ ನಾಲಯಕ್ . ಲೇ ಮಂಗ ನಾವು ಸಾವಿರಾರು ವರ್ಷಗಳ ಕನ್ನಡ ಮಾತಾಡೋ ಕನ್ನಡಿಗರು ಕಣೋ ನಿನ್ನೆ ಮೊನ್ನೆಯ ಹಿಂದಿ ಮಾತಾಡೋರಲ್ಲ,'' ಪೋಸ್ಟ್ ಮಾಡಿದ್ದಾರೆ.
ಇನ್ನು ಭಾರತದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಗೌರವ ಸಲ್ಲುತ್ತದೆ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ರಾಷ್ಟ್ರವಾಗಿರುವದರಿಂದ ಭಾಷೆಗಳಿಗೂ ವಿಶಿಷ್ಟ ಸ್ಥಾನಮಾನವನ್ನು ನೀಡಿ ಗೌರವಿಸಲಾಗುತ್ತಿದೆ. ಆದರೆ ಆಗಿಂದಾಗ್ಗೆ ದಕ್ಷಿಣ ಭಾರತದ ಭಾಷೆಗಳನ್ನು ಹೀಯಾಳಿಸಿ ಮೂದಲಿಸುವ ಕಾರ್ಯಗಳು ನಡೆಯುತ್ತಿರೋದು ಖಂಡನೀಯ. ಭಾರತದ ಸ್ವಾತಂತ್ರ್ಯದ ನಂತರ ಭಾಷೆಗಳ ಆಧಾರದಲ್ಲಿಯೇ ರಾಜ್ಯಗಳನ್ನು ವಿಂಗಡಿಸಲಾಯ್ತು. ಆ ಮೂಲಕ ಆಡಳಿತ ಭಾಷೆಯಾಗಿ ಸಂವಹನದ ಭಾಷೆಯಾಗಿ ಉಳಿಯಲಿ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಕೆಲವು ಕಿಡಿಗೇಡಿಗಳು ಆಗಾಗ ಇಂಥ ಕೃತ್ಯವನ್ನು ಎಸಗುವ ಮೂಲಕ ಭಾಷೆಯ ಮೇಲೆ ಪ್ರಹಾರ ಮಾಡುತ್ತಿರುವುದು ವಿಚಿತ್ರವೇ ಸರಿ.